ಡಿಸೆಂಬರ್ 5 ರಾತ್ರಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದ್ದು, ಕೊಲೆಯಾದ ಗಣೇಶ್ ಗೌಡನ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಗಣೇಶ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ನೀಡಿದ ದೂರಿನ ಆಧಾರದ ಮೇಲೆ ಹತ್ಯೆಯಾದ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗಣೇಶ್ ಗೌಡನನ್ನು ಬಜರಂಗದಳ ಕಾರ್ಯಕರ್ತರು ಹತ್ಯೆಗೈದಿದ್ದರು ಎಂದು ಆರೋಪಿಸಲಾಗಿದೆ. ಪರಾರಿಯಾಗಿದ್ದ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತ ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಸಂಜಯ್, ನಾಗಭೂಷಣ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೀಗ, ಬಂಧಿತ ಆರೋಪಿಗಳು ಮೃತ ಗಣೇಶ್ ಮೇಲೆಯೇ ಪ್ರತ್ಯಾರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ. “ಡಿಸೆಂಬರ್ 5ರ ರಾತ್ರಿ ಸಖರಾಯಪಟ್ಟಣದ ಮಠದ ಬಳಿ ಬ್ಯಾನರ್ ತೆರವುಗೊಳಿಸುವಾಗ ಗಣೇಶ್ ಗೌಡ ‘ಇವರದ್ದು ಜಾಸ್ತಿ ಆಯಿತು’ ಎಂದು ಬಜರಂಗದಳ ಕಾರ್ಯಕರ್ತರನ್ನು ನಿಂದಿಸಿ, ಗಲಾಟೆ ಮಾಡಿದ್ದರು” ಎಂದು ಆರೋಪಿಗಳು ಆರೋಪಿಸಿದ್ದಾರೆ.
“ಗಲಾಟೆ ಮಾಡದಂತೆ ಗಣೇಶ್ ಗೌಡನನ್ನು ಪ್ರಶ್ನಿಸಿದೆ. ಇದರಿಂದ ಗಣೇಶ್ ಮತ್ತು ನಮ್ಮ ನಡುವೆ ಜಗಳ ಆರಂಭವಾಯಿತು. ಈ ವೇಳೆ, ಗಣೇಶ್ ಮತ್ತು ಇತರರು ನಮ್ಮ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದರು” ಎಂದು ಆರೋಪಿ ಸಂಜಯ್ ಆರೋಪಿಸಿದ್ದಾರೆ.
ಆರೋಪಿಗಳ ಪ್ರತಿದೂರಿನ ಆಧಾರ ಮೇಲೆ ಮೃತ ಗಣೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಾದ ಸಂದೀಪ್, ಅಪ್ಪು, ಚಂದು,ಅಭಿ, ಬಿಂದು, ರೋಷನ್ ಎಂಬವರ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.




