ಕರ್ನಾಟಕ ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ವತಿಯಿಂದ ಅ.2ರಿಂದ ರಾಜ್ಯಾದ್ಯಂತ ʼಅರಿವು – ಮಾನವೀಯತೆʼಯ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ.
ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ, ನಡೆಯಲಿರುವ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.
ಜಿಐಒ ರಾಜ್ಯಾಧ್ಯಕ್ಷೆ ನವೀದಾ ಅಸ್ಸಾದಿ ಮಾತನಾಡಿ, “ಈ ಅಭಿಯಾನ ಕರ್ನಾಟಕದಾದ್ಯಂತ ಅಕ್ಟೋಬರ್ 2 ರಿಂದ ಅಕ್ಟೋಬರ್ 12ರವರೆಗೆ ನಡೆಯಲಿದೆ. ವಿಭಿನ್ನ ಸಮುದಾಯಗಳಲ್ಲಿ ದಯೆ, ಸಹಾನುಭೂತಿ ಮತ್ತು ಏಕತೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ. ಅರಿವು ಕೇವಲ ಒಂದು ಅಭಿಯಾನವಲ್ಲ; ಇದು ಪರಸ್ಪರ ಮಾನವೀಯತೆಯನ್ನು ಅಳವಡಿಸಿಕೊಳ್ಳಲಿಕ್ಕಾಗಿ ಒಂದು ಕರೆಯಾಗಿದೆ” ಎಂದು ಹೇಳಿದರು.
“ಯಾವುದೇ ಭೇದಭಾವಗಳಿಲ್ಲದೆ ಪರಸ್ಪರರ ಕಾಳಜಿವಹಿಸುವುದರಲ್ಲಿ ನಿಜವಾದ ಶಕ್ತಿಯಿದೆ ಎಂದು ನಾವು ನಂಬುತ್ತೇವೆ. ಇಂದಿನ ಅಸಹಿಷ್ಣುತೆ, ಭಿನ್ನತೆ ಮತ್ತು ಹಿಂಸೆಯ ಸವಾಲುಗಳಿಗೆ ಉತ್ತರವಾಗಿ ಚಿಂತನೆ, ಸುಧಾರಣೆ ಮತ್ತು ಸೇವೆಗಳನ್ನು ಈ ಅಭಿಯಾನ ಉತ್ತೇಜಿಸುತ್ತದೆ. ಅಂತರ್ಧರ್ಮೀಯ ಸಂವಾದವನ್ನು ಉತ್ತೇಜಿಸುವುದು, ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು, ಸಂವಾದ, ಬೆಂಬಲ ಮತ್ತು ಸಾಮಾಜಿಕ ಗುಣಮುಖತೆಗೆ ಸಮಗ್ರ ವೇದಿಕೆಗಳನ್ನು ಒದಗಿಸುವುದು, ಮಾನವೀಯತೆಯ ಕಾರ್ಯಗಳ ಮೂಲಕ ಇಸ್ಲಾಂನ ಸಂದೇಶವನ್ನು ಸಾಕಾರಗೊಳಿಸುವ ಉದ್ದೇಶಗಳನ್ನು ಈ ಅಭಿಯಾನ ಹೊಂದಿದೆ” ಎಂದರು.


“ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳಾದ ಅಂತರ್ಧರ್ಮೀಯ ಸಂವಾದಗಳು ಮತ್ತು ಶಾಂತಿ ವಲಯಗಳು (Peace Circles), ಮಾನಸಿಕ ಆರೋಗ್ಯ ಕಾರ್ಯಾಗಾರಗಳು, ಕಲೆ, ಕವನ ಮತ್ತು ಪೋಸ್ಟರ್ ಸ್ಪರ್ಧೆಗಳು, ಸಾಮಾಜಿಕ ಮಾಧ್ಯಮ ರೀಲ್ಸ್ ಗಳು ಮತ್ತು ಜಾಗೃತಿ ವಿಡಿಯೋಗಳು, ಮಾಹಿತಿ ಪುಸ್ತಕ ಮತ್ತು ಕರಪತ್ರಿಕೆಗಳ ವಿತರಣೆ, ಮನೆಮನೆಗೆ ಜಾಗೃತಿ ಭೇಟಿ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದರು.
ಇದನ್ನೂ ಓದಿ: ಕಾವೇರಿ ಆರತಿ | ರೈತರಿಂದ ಭಾರಿ ವಿರೋಧ, ಆದರೂ ಅದ್ದೂರಿ ಸಮಾರಂಭ ಮಾಡಿದ ಡಿ ಕೆ ಶಿವಕುಮಾರ್
ಇಸ್ಲಾಮಿನ ಬೋಧನೆಗಳಿಂದ ಪ್ರೇರಣೆ ಪಡೆದ ‘ಅರಿವು’: “ಯಾರಾದರು ಒಬ್ಬ ಮನುಷ್ಯನನ್ನು ವಧಿಸಿದರೆ, ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ. ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೇ ಜೀವದಾನ ಮಾಡಿದಂತೆ: (ಕುರ್ಆನ್ 5:32)”
ಎಂಬ ಸಂದೇಶ ನೀಡಿದರು. GIO ಕರ್ನಾಟಕವು ದೈವಿಕ ಮಾರ್ಗದರ್ಶನದ ಬೆಳಕಿನಲ್ಲಿ ಯುವತಿಯರು ಮತ್ತು ವಿದ್ಯಾರ್ಥಿನಿಯರ ವೈಯಕ್ತಿಕ ಶ್ರೇಷ್ಠತೆ ಮತ್ತು ಸಮಾಜದ ಬದಲಾವಣೆಗೆ ಮೀಸಲಾಗಿರುವ ಸೈದ್ಧಾಂತಿಕ ಸಂಘಟನೆಯಾಗಿದೆ. ನಾವು ಸರ್ವ ಧರ್ಮದ ಮತ್ತು ಸಮುದಾಯದ ಜನರನ್ನು ನಮ್ಮೊಂದಿಗೆ ಸೇರಲು ಆಹ್ವಾನಿಸುತ್ತೇವೆ. ನಾವು ದಯೆಯನ್ನು ಪುನಃ ನಮ್ಮ ಸುತ್ತಮುತ್ತಲೂ ಸ್ಥಾಪಿಸೋಣ ಮತ್ತು ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಭಿಯಾನದ ಸಂಯೋಜಕಿ ಅಫ್ರಾ ಫತೀನ್, GIO ಕರ್ನಾಟಕದ ಉಪಾಧ್ಯಕ್ಷೆ ಅನೀಸ್ ಫಾತಿಮಾ, JIH ಕರ್ನಾಟಕ ಕಾರ್ಯದರ್ಶಿ ತಶ್ಕೀಲ್ ಖಾನಂ, ಅನುಪಮಾ ಮಾಸಪತ್ರಿಕೆಯ ಉಪಸಂಪಾದಕಿ ಕುಲ್ಸೂಮ್ ಅಬೂಬಕ್ಕರ್ ಉಪಸ್ಥಿತರಿದ್ದರು.





