ಗೋಕರ್ಣ: ಪ್ರಸಿದ್ಧ ಕುಡ್ಲೆ ಕಡಲ ತೀರದಲ್ಲಿ ಈಜಲು ಇಳಿದಿದ್ದ ಕಜಕಿಸ್ತಾನ ಮೂಲದ ಮಹಿಳೆಯೊಬ್ಬರು ಬೃಹತ್ ಅಲೆಗಳಿಗೆ ಸಿಲುಕಿ ಅಪಾಯದ ಸ್ಥಿತಿಯಲ್ಲಿ ಇದ್ದ ಸಮಯದಲ್ಲಿ, ಜೀವ ರಕ್ಷಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಹಿಳೆಯನ್ನು ದಡಕ್ಕೆ ಎಳೆದುಕೊಂಡು ಬಂದು ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಈ ಅಪಘಾತದಲ್ಲಿ ಸಿಲುಕಿ ಪಾರಾಗಿರುವ ಪ್ರವಾಸಿಯ ಹೆಸರು ಐದಾಲಿ (25) ಎಂದು ಗುರುತಿಸಲಾಗಿದ್ದು, ಇವರು ತಮ್ಮ ಪತಿಯೊಂದಿಗೆ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ಕುಡ್ಲೆ ಬೀಚ್ನಲ್ಲಿ ಈಜುತ್ತಿದ್ದ ವೇಳೆ ಹಠಾತ್ ಬಂದ ಬಲವಾದ ಅಲೆಯ ರಭಸಕ್ಕೆ ಸಿಲುಕಿ, ಸಮುದ್ರದ ಒಳಸೆಳೆತಕ್ಕೆ ಇವರು ಸಿಲುಕಿಕೊಂಡಿದ್ದರು. ಸ್ಥಳದಲ್ಲೇ ಇದ್ದು ಘಟನೆಯನ್ನು ಗಮನಿಸಿದ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿಗಳಾದ ಮಂಜುನಾಥ ಹರಿಕಂತ್ರ, ಗಿರೀಶ ಗೌಡ, ನಾಗೇಂದ್ರ ಕುರ್ಲೆ ಹಾಗೂ ‘ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್’ನ ಸಿಬ್ಬಂದಿ ಲಕ್ಷ್ಮಿಕಾಂತ ಹರಿಕಂತ್ರ, ಜೊತೆಗೆ ಟೂರಿಸ್ಟ್ ಮಿತ್ರ ಶೇಖರ್ ಹರಿಕಂತ್ರ ಅವರು ತಕ್ಷಣವೇ ಅವರನ್ನು ರಕ್ಷಿಸಿ ಮಹಿಳೆಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ಗೋಕರ್ಣದ ಕಡಲ ತೀರಗಳು ಪ್ರವಾಸಿಗರನ್ನು ಸೆಳೆಯುವಂತೆಯೇ, ಇಲ್ಲಿನ ಸಮುದ್ರದ ಅಲೆಗಳು ಮತ್ತು ಒಳಸೆಳೆತಗಳು ಅಪಾಯಕಾರಿ ಸ್ವಭಾವ ಹೊಂದಿರುವುದರಿಂದ ಪ್ರವಾಸಿಗರು ಆದಷ್ಟು ಎಚ್ಚರಿಕೆಯಿಂದ ಇರುವುದು ಅವಶ್ಯಕ ಎಂದು ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚರಿಸಿದೆ. ಸಮುದ್ರ ಮೇಲ್ನೋಟಕ್ಕೆ ಶಾಂತವಾಗಿ ಕಾಣಿಸಿಕೊಂಡರೂ, ಒಳಗೆ ಬಲವಾದ ಸೆಳೆತಗಳು ಇರುವ ಸಾಧ್ಯತೆಯಿದ್ದು, ಪ್ರವಾಸಿಗರು ಆಳ ನೀರಿಗೆ ಇಳಿಯದಂತೆ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಿಷೇಧವಿದ್ದರೂ ನಿಲ್ಲದ ಮರಳು ದಂಧೆ; ಎನ್ಜಿಟಿ ಆದೇಶಕ್ಕೂ ಕಿಮ್ಮತ್ತಿಲ್ಲ
ಕಡಲ ತೀರದಲ್ಲಿ ಕೆಂಪು ಬಾವುಟ ಅಳವಡಿಸಿರುವ ಪ್ರದೇಶಗಳಿಗೆ ತೆರಳಬಾರದು ಎಂದು ಸೂಚಿಸಲಾಗಿದ್ದು, ಜೀವ ರಕ್ಷಕ ಸಿಬ್ಬಂದಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜನತೆಗೆ ಮನವಿ ಮಾಡಲಾಗಿದೆ. ಮಕ್ಕಳೊಂದಿಗೆ ಬಂದಿರುವ ಕುಟುಂಬಗಳು ವಿಶೇಷ ನಿಗಾದೊಂದಿಗೆ ನೀರಿಗೆ ಇಳಿಯಬೇಕು. ನೀರಿನಲ್ಲಿ ಮಕ್ಕಳು ಮತ್ತು ವೃದ್ಧರನ್ನು ಒಂಟಿಯಾಗಿ ಬಿಡುವುದನ್ನು ತಪ್ಪಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಿಗರು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ನೋಡಿಕೊಂಡರೆ ಅನಾಹುತಗಳನ್ನು ತಪ್ಪಿಸಬಹುದಾದ್ದರಿಂದ, ಎಲ್ಲರೂ ಜಾಗರೂಕತೆ ವಹಿಸಲು ಮನವಿ ಮಾಡಲಾಗಿದೆ.





