25 ಮಕ್ಕಳಿಗಿಂತ ಕಡಿಮೆಯಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ರಾಜ್ಯ ಸರ್ಕಾರವು ಹಿಂದೆ ಸರಿಯಬೇಕು. ಸರ್ಕಾರವು ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದರೆ ಸರಿ ಸುಮಾರು 7 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲಿವೆ. ಗ್ರಾಮೀಣ ಭಾಗದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ತಮ್ಮ ಗ್ರಾಮಗಳಲ್ಲಿ ಶಾಲೆ ಮುಚ್ಚಲಿದೆ ಎಂದು ಮಕ್ಕಳನ್ನು ಬೇರೇ ಗ್ರಾಮದ ಶಾಲೆಗೆ ಕಳುಹಿಸದೆ ಕೂಲಿಗೆ ಕಳಿಸುವ ಸಾಧ್ಯತೆ ಇದೆ. ಇದರಿಂದ, ಮತ್ತೆ ಗ್ರಾಮೀಣ ಜನರಲ್ಲಿ ಸಾಕ್ಷರತೆ ಇಲ್ಲದೆ, ಅನಕ್ಷರತೆ ಉಂಟಾಗುವ ಅಪಾಯ ಎದುರಾಗಲಿದೆ ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು.
ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ, ದೊಡ್ಡಕ್ಯಾತನಹಳ್ಳಿ, ನ್ಯಾಯಸಿಂಗನಹಳ್ಳಿ, ನಾರಾಯಣಪುರ ಕೊಪ್ಪಲು, ಮೋದೂರು, ಕೊರಟೀಕೆರೆ, ಅಣ್ಣೇಚಾಕನಹಳ್ಳಿ, ಮುದ್ಲಾಪುರ, ಹೊಸಮಾವಿನಕೆರೆ, ಗುಡುಗನಹಳ್ಳಿ, ಸೋಮನಾಥಪುರ, ಬೆಳತೂರು ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿಯಿಂದ ತಲಾ ₹10ಲಕ್ಷ ರೂಪಾಯಿಗಳಂತೆ ಸುಮಾರು ₹1ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯನ್ನು ಆರಂಭಿಸುವ ನೆಪದಲ್ಲಿ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲು ಮುಂದಾಗಿರುವುದು ಖಂಡನೀಯವಾದುದು. ಕನಿಷ್ಠ 1 ಮಗು ಇದ್ದರೂ ಸಹ ಶಾಲೆಯನ್ನು ಉಳಿಸಿಕೊಡಬೇಕು. ಗ್ರಾಮದಲ್ಲಿ ಶಾಲೆಯೇ ಇಲ್ಲದಿದ್ದರೆ ಬಡವರು ಮತ್ತು ಮಧ್ಯಮ ವರ್ಗದ ಪೋಷಕರು ಬೇರೆ ಗ್ರಾಮಕ್ಕೆ ತಮ್ಮ ಮಕ್ಕಳನ್ನು ಕಳಿಸಲು ಇಚ್ಚಿಸುವುದಿಲ್ಲ. ಆಗ ಬಡವರ ಮಕ್ಕಳಿಗೆ ಶಿಕ್ಷಣ ಇಲ್ಲದಂತಾಗುತ್ತದೆ. ಮತ್ತೆ ದೇಶದಲ್ಲಿ ಅನಕ್ಷರತೆ ಹೆಚ್ಚಾಗಲಿದೆ. ಆದ್ದರಿಂದ, ರಾಜ್ಯ ಸರ್ಕಾರವು ಯಾವುದೇ ಶಾಲೆಯನ್ನು ಬಂದ್ ಮಾಡಲು ಮುಂದಾಗಬಾರದು. 25 ಮಕ್ಕಳಿಗಿಂತ ಕಡಿಮೆಯಿರುವ ಶಾಲೆಗಳನ್ನು ಸಮೀಪದ ಶಾಲೆಗಳಿಗೆ ಮ್ಯಾಪಿಂಗ್ ಮಾಡಿ ಮುಚ್ಚಿದ ಆ ಗ್ರಾಮಗಳ ಮಕ್ಕಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡುವ ಯೋಜನೆ ಜಾರಿ ಮಾಡುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ.
ಇದು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಬಂದ್ ಮಾಡಿ ಪರೋಕ್ಷವಾಗಿ ಖಾಸಗಿ ಶಾಲೆಗಳನ್ನು ಬೆಳೆಸುವ ಕಾರ್ಯಕ್ರಮವಾಗಲಿದೆ. ಹಾಗಾಗಿ, ಸರ್ಕಾರವು ಸರ್ಕಾರಿ ಶಾಲೆಗಳನ್ನು ಮ್ಯಾಪಿಂಗ್ ನೆಪದಲ್ಲಿ ಮುಚ್ಚಬಾರದು. ಸರ್ಕಾರಿ ನೌಕರರ ಮಕ್ಕಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತಹ ಯೋಜನೆ ತರಬೇಕು ಎಂದು ಒತ್ತಾಯ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿ ಕನಸನ್ನು ನನಸಾಗಿಸಿ: ಬಡಗಲಪುರ ನಾಗೇಂದ್ರ
ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಗೊಳಿಸಿದ್ದು, ಇದರಿಂದ ಮೂಲಭೂತ ಸೌಲಭ್ಯಗಳಿಗೆ ಅನುದಾನ ಕೊರತೆ ಎದುರಾಗಿದೆ. ಇದರಿಂದ ರಾಜ್ಯವು ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋದಂತೆ ಆಗಿದೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಕೆರೆಗಳ ಅಭಿವೃದ್ದಿ, ಬಡವರಿಗೆ ಆಶ್ರಯ ಮನೆಗಳಿಗೆ ಅನುದಾನವೇ ಇಲ್ಲದಂತಾಗಿದೆ. ಕಳೆದ 1ವರ್ಷದಿಂದ ಆಡಳಿತ ಪಕ್ಷದ ಶಾಸಕರಿಂದ ಅನುದಾನ ಸಿಗದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಷ್ಟೋ, ಇಷ್ಟೋ ಅನುದಾನ ನೀಡುತ್ತಿದೆ. ಇದು ಏನೇನು ಸಾಲದಾಗಿದೆ. ಆದರೂ ತುರ್ತು ಅಗತ್ಯವಿರುವ ಗ್ರಾಮಗಳ ಗ್ರಾಮದೊಳಿಗನ ರಸ್ತೆ ಅಭಿವೃದ್ದಿಗೆ ಅನುಧಾನ ಹಂಚಿಕೆ ಮಾಡಿ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. 2028ಕ್ಕೆ ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಹಾಗಾಗಿ, ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ
ಕಾರ್ಯಕ್ರಮದಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ಸಂತೇಬಾಚಹಳ್ಳಿ ಹೋಬಳಿ ಜನತಾದಳ.(ಎಸ್) ಅಧ್ಯಕ್ಷ ಸಾಮಿಲ್ ರವಿಕುಮಾರ್, ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕ ಮಲ್ಲೇನಹಳ್ಳಿ ಎಂ.ಮೋಹನ್, ನಾಗರಘಟ್ಟ ದಿಲೀಪ್ಕುಮಾರ್, ಕೊರಟೀಕೆರೆ ದಿನೇಶ್, ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಜಯ್ ರಾಮೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಶ್ರೀಧರ್, ಅಘಲಯ ಗ್ರಾ.ಪಂ.ಮಾಜಿ ಅಧ್ಯಕ್ಷ ಲೋಕೇಶ್, ಸಮಾಜ ಸೇವಕ ದಾನಿ ಕುಂದೂರು ಮೊಟ್ಟೆ ಮಂಜು, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಪಿಡಿಓ ದಿನೇಶ್ಕುಮಾರ್, ಹಿರೀಕಳಲೆ ಪಿಡಿಓ ನವೀನ್ಕುಮಾರ್, ಕಾರ್ಯದರ್ಶಿ ಪಿ.ಬಿ.ರವಿ, ಗ್ರಾ.ಪಂ.ಸದಸ್ಯರಾದ ದಿವ್ಯಶ್ರೀ ಯದುಕುಮಾರ್, ಕಸಬಾ ಹೋಬಳಿ ಜೆಡಿಎಸ್ ಹಾಲುಮತ ಸಮಾಜದ ಅಧ್ಯಕ್ಷ ಬಸವರಾಜು ಸೇರಿದಂತೆ ಇನ್ನಿತರರು ಇದ್ದರು.





