ಕಾಂಗ್ರೆಸ್ ಸರ್ಕಾರದ ಮನೆ ಬಳಕೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಹಳ್ಳ ಹಿಡಿದಿದೆ. ಗೃಹಜ್ಯೋತಿ ಈಗ ಗ್ರಹಣ ಜ್ಯೋತಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, “ಚುನಾವಣೆಗೆ ಮೊದಲು ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಗೃಹಜ್ಯೋತಿ ಯೋಜನೆಗಾಗಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ರೈತರ ಪಂಪ್ಸೆಟ್ಗಳಿಗೆ ಈ ಮೊದಲು 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು, ಈಗ 2 ಗಂಟೆಗಳು ಕೂಡ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ” ಎಂದು ಹೇಳಿದರು.
“ದೆಹಲಿಯಲ್ಲಿ ನಾವು ಭರವಸೆ ನೀಡಿದಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ದೆಹಲಿಯಲ್ಲಿ ವಿದ್ಯುತ್ ಪೂರೈಕೆದಾರರು ಒಂದು ಗಂಟೆ ವಿದ್ಯುತ್ ಕಡಿತ ಮಾಡಿದರೆ ಒಂದು ಗಂಟೆಗೆ 50 ರೂಪಾಯಿ ದಂಡ ಕಟ್ಟಿಕೊಡಬೇಕಾಗುತ್ತದೆ. 2 ಗಂಟೆಗಿಂತ ಹೆಚ್ಚು ಸಮಯ ವಿದ್ಯುತ್ ಕಡಿತ ಮಾಡಿದರೆ ಗಂಟೆಗೆ 100 ರೂಪಾಯಿಯಂತೆ ದಂಡ ಕಟ್ಟಿಕೊಡಬೇಕು. ಅಂತಹ ಕಾನೂನು ರೂಪಿಸಲಾಗಿದೆ. ಅಂತಹ ಕಾನೂನು ಇಲ್ಲಿ ತರಲಿ” ಎಂದು ಒತ್ತಾಯಿಸಿದರು.
“ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ಐದು ವಿದ್ಯುಚ್ಛಕ್ತಿ ಪೂರೈಕೆ ಕಂಪನಿಗಳು ಈಗಾಗಲೇ 63,000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಸಮಯದಲ್ಲಿ ಮುಖ್ಯಮಂತ್ರಿಗಳು ₹85,000 ಕೋಟಿ ಸಾಲವನ್ನು ಪಡೆಯಲು ಈಗಾಗಲೇ ಆರ್ಥಿಕ ಇಲಾಖೆಗೆ ಸೂಚಿಸಿರುವುದನ್ನು ಗಮನಿಸಿದಾಗ ರಾಜ್ಯವು ಸಂಪೂರ್ಣ ದಿವಾಳಿಯತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ” ಎಂದರು.
“ರಾಜ್ಯದ ರೈತರಿಗೆ ಪ್ರತಿ ವರ್ಷ ವಿದ್ಯುಚ್ಛಕ್ತಿ ಸಬ್ಸಿಡಿ ರೂಪದಲ್ಲಿ 6,000 ಕೋಟಿ ರೂಪಾಯಿಗಳಷ್ಟು ನೀಡುತ್ತಿರುವ ಸರ್ಕಾರ ಎಲ್ಲ ರೈತರಿಗೂ ಸೋಲಾರ್ ಪಂಪನ್ನು ವಿತರಿಸದೆ ಅನವಶ್ಯಕವಾಗಿ ಸಾವಿರಾರು ಕೋಟಿ ಸಬ್ಸಿಡಿ ಹಣವನ್ನು ಪೋಲು ಮಾಡುತ್ತಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 1 ಕೆ.ಜಿ 262 ಗ್ರಾಂ ಚಿನ್ನದ ಆಭರಣ ಕದ್ದಿದ್ದ ಸೇಲ್ಸ್ ಮ್ಯಾನ್; ಬಂಧನ
ಕುಸುಮ್ ಯೋಜನೆ ಅಸಮರ್ಪಕ ಬಳಕೆ
“ಮಳೆ ಕೊರತೆಯಾಗಿದ್ದರಿಂದ ರೈತರು ಪಂಪ್ಸೆಟ್ಗಾಗಿ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕುಸುಮ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕೆ ಕೇಂದ್ರದಿಂದ 10,314 ಸೋಲಾರ್ ಪಂಪ್ಗಳನ್ನು ನೀಡಲಾಗಿದೆ ಆದರೆ ಕೇವಲ 314 ಸೋಲಾರ್ ಪಂಪ್ಗಳನ್ನು ಮಾತ್ರ ರಾಜ್ಯದ ರೈತರಿಗೆ ನೀಡಲಾಗಿದೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್ ಅವರು ಹೇಳಿದರು.
ಮುಂದಿನ 4-5 ವರ್ಷ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಅಥವಾ ಅಫಿಡವಿಟ್ ಅನ್ನು ನೀಡಬೇಕು. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಏನು ಯೋಜನೆ ರೂಪಿಸಿದ್ದೀರಾ ಎಂದು ತಿಳಿಸುವಂತೆ ಒತ್ತಾಯಿಸಿದರು.




