ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ಇಂದಿನಿಂದ (ಜೂ.18ರಿಂದ) ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಕಚೇರಿ ಮತ್ತು ನಾಡ ಕಚೇರಿಗಳು ಭಾನುವಾರ ರಜೆ ದಿನವಿದ್ದರೂ ಕಾರ್ಯನಿರ್ವಹಿಸಲು ಇಲಾಖೆ ಸೂಚನೆ ನೀಡಿದೆ.
ಸಾರ್ವಜನಿಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಭಾನುವಾರ ಕೂಡ ಕರ್ತವ್ಯ ದಿನವೆಂದು ಪರಿಗಣಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.
‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇನ್ನು ಸೇವಾ ಸಿಂಧು ವೆಬ್ಸೈಟ್ ಬಳಸಿ ಮೊಬೈಲ್, ಕಂಪ್ಯೂಟರ್ನಲ್ಲೂ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂಚಾಯಿತಿ ಕಚೇರಿ, ವಿದ್ಯುತ್ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇನ್ನು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್ ಆರ್ ನಂಬರ್, ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ. ಬಾಡಿಗೆದಾರರಾಗಿದ್ದರೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದು. ಸಮಸ್ಯೆ ಕಂಡು ಬಂದಲ್ಲಿ ಮಾಹಿತಿಗಾಗಿ 1912 ಸಹಾಯವಾಣಿಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು.





