ಬಿಜೆಪಿ ತಾಲ್ಲೂಕು ರೈತಮೋರ್ಚಾ ಕಾರ್ಯದರ್ಶಿ ನಂದೀಶ್ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಗುಬ್ಬಿ ತಾಲ್ಲೂಕಿನ ಹೊದಲೂರು ಗ್ರಾಮದ ಗ್ರಾಪಂ ಸದಸ್ಯ ಶಿವಪ್ಪ ಅವರ ಗೃಹದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಯಲಚಿಹಳ್ಳಿ ನಂದೀಶ್ ಕಳೆದ 18 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಬ್ಯಾಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ನಂದೀಶ್ ಅವರನ್ನು ಬಿಜೆಪಿ ಕಡೆಗಣಿಸಿದ ಹಿನ್ನಲೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಂದೀಶ್ ಬಿಜೆಪಿ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಅವಿರಥ ಶ್ರಮಿಸಿ ದುಡಿದಿದ್ದೇನೆ. ಬಿಜೆಪಿ ಸರ್ಕಾರ ರಚಿಸಿ ಆಡಳಿತಕ್ಕೆ ಬಂದಾಗ ಸಹ ನಮ್ಮಂತಹ ಕಾರ್ಯಕರ್ತರ ಗುರುತಿಸಲಿಲ್ಲ. ಯಾವುದೇ ಅನುಕೂಲ ಸಹ ಮಾಡಿಲ್ಲ. ಹಗಲಿರುಳು ಶ್ರಮಿಸಿದ ನಮ್ಮನ್ನು ಗುರುತಿಸದ ಬಿಜೆಪಿ ಪಕ್ಷದಲ್ಲಿ ನಾನು ಯುವಮೋರ್ಚಾ, ಹಾಲು ಪ್ರಕೋಷ್ಠ, ರೈತಮೋರ್ಚ ಘಟಕದಲ್ಲಿ ದುಡಿದಿದ್ದೇನೆ. ಆದರೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಮಾಡುವಲ್ಲಿ ಸಹ ಪಕ್ಷ ಸಹಕಾರ ನೀಡಿಲ್ಲ. 18 ವರ್ಷದ ನಮ್ಮ ಸೇವೆಗೆ ಬೆಲೆ ಸಿಗದ ಕಾರಣ ಶಾಸಕ ವಾಸಣ್ಣ ಅವರ ಕಾರ್ಯ ವೈಖರಿ ಹಾಗೂ ಕಾಂಗ್ರೆಸ್ ಪಕ್ಷದ ತತ್ವಾದರ್ಶ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವಪ್ಪ, ಗಳಗ ದಿವಾಕರ್, ಬೊಮ್ಮರಸನಹಳ್ಳಿ ರಮೇಶ್, ಬೆಣಚಿಗೆರೆ ದಯಾನಂದ್ ಇತರರು ಇದ್ದರು.





