ರಾಷ್ಟ್ರದ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ನಾಗರಿಕರ ಹಕ್ಕುಗಳ ಬಗ್ಗೆ ತಿಳಿದು ನಡೆಯಲು ಪ್ರತಿ ಪ್ರಜೆಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಎಂಬ ಮೌಲ್ಯಗಳನ್ನು ನೆನಪಿಸಿಕೊಳ್ಳುವ ದಿನವಾಗಿ ಸಂವಿಧಾನ ದಿನಾಚರಣೆ ಮಾಡಲಾಗುತ್ತಿದೆ ಎಂದು ಎಂ.ಎಚ್.ಪಟ್ಟಣ ಗ್ರಾಪಂ ಪಿಡಿಒ ಕೆ.ಎಂ.ಶೇಖರ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಂವಿಧಾನ ದಿವಸ ಅಥವಾ ಭಾರತದ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತಿದೆ ಎಂದರು.
1949 ನವಂಬರ್ 26 ರಂದು ಭಾರತದ ಸಂವಿಧಾನ ಸಭೆಯು ನಮ್ಮ ಸಂವಿಧಾನವನ್ನು ಸ್ವೀಕರಿಸಿತು. ಇದು ವಿಶ್ವದ ಅತ್ಯಂತ ದೊಡ್ಡ ಮತ್ತು ಸಮಗ್ರ ಸಂವಿಧಾನಗಳಲ್ಲಿ ಒಂದಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಸಮಾನತೆ ಸಾರುವ ಕಾನೂನು ಚೌಕಟ್ಟು ಮಾನವೀಯ ಮೌಲ್ಯದೊಂದಿಗೆ ರಚಿತವಾಗಿದೆ. ವಿಶ್ವವೇ ಬೆರಗಾಗಿ ನೋಡುವ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಯುವಕರು ಪಾಲಿಸಬೇಕಿದೆ. ಎಲ್ಲಾ ಧರ್ಮ ಜಾತಿ ಜನಾಂಗಕ್ಕೆ ಒಪ್ಪುವ ಸಂವಿಧಾನ ನಮ್ಮ ಮಹಾ ಗ್ರಂಥ ಎನ್ನಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗಂಗಾಧರಯ್ಯ, ಎಸ್ ಡಿಎ ಗೀತಾ, ಅಂಗನವಾಡಿ ಕಾರ್ಯಕರ್ತೆ ರಾಧಾಮಣಿ, ಆರೋಗ್ಯ ಕಾರ್ಯಕರ್ತೆ ಜಯಶ್ರೀ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.





