ಹತ್ತಾರು ವರ್ಷಗಳಿಂದ ಭೂಮಿ ಅನುಭವದಲ್ಲಿರುವ ಬಿಕ್ಕೇಗುಡ್ಡ ಕಾವಲ್ ಗ್ರಾಮದ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ದಾಖಲೆ ಮಾಡದೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ದಾಖಲೆ ಇಲ್ಲದೆ 99 ಎಕರೆ ಪ್ರದೇಶದಲ್ಲಿ 50 ಕ್ಕೂ ಅಧಿಕ ದಲಿತ ಕುಟುಂಬ ಪರದಾಡುತ್ತಿದೆ. ಈ ನಿಟ್ಟಿನಲ್ಲಿ ಅನುಭವದಾರರಿಗೆ ದಾಖಲೆ ಮಾಡಿಕೊಡುವಂತೆ ಸಂತ್ರಸ್ತ ದಲಿತ ಕುಟುಂಬ ಸದಸ್ಯರು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂತ್ರಸ್ತರು ಬಿಕ್ಕೇಗುಡ್ಡ ಕಾವಲ್ ಸರ್ವೇ ನಂಬರ್ 93 ರಲ್ಲಿನ ಜಮೀನು ದುರಸ್ತಿ ಮಾಡಿ ನಕ್ಷೆ ಸಿದ್ಧಪಡಿಸಿ ಈ ದಾಖಲೆ ಆಧಾರ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ಶೀಘ್ರ ದಾಖಲೆ ನೀಡಿದರೆ ಕೃಷಿ ಚಟುವಟಿಕೆ ನಡೆಸುತ್ತೇವೆ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾಸಾಗರ್ ಮಾತನಾಡಿ ಎಲ್ಲಾ ಸರ್ಕಾರದಿಂದ ಮೂಲ ಸವಲತ್ತು ಪಡೆದು ನೂರಾರು ವರ್ಷದಿಂದ ವಾಸವಿರುವ ಬಿಕ್ಕೇಗುಡ್ಡ ಕಾವಲ್ ಗ್ರಾಮದಲ್ಲಿ 99 ಎಕರೆ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ದಲಿತ ಕುಟುಂಬ ಈಗ ದ್ವಿಗುಣ ಸಂಖ್ಯೆಯಲ್ಲಿದೆ. ಹೊಸ ಕುಟುಂಬ ಸೃಷ್ಟಿಯಾದರೂ ಜಮೀನು ಭಾಗ ಮಾಡಿಕೊಳ್ಳಲಾಗದ ಸ್ಥಿತಿ ಊರಿನ ಸಹೋದರರಲ್ಲಿ ಕಂಡಿದೆ. ಖಾಯಂ ಮಂಜೂರಾತಿ ಪಡೆದ ಕುಟುಂಬಕ್ಕೆ ಮಾತ್ರ ಜಮೀನು ನೀಡಿದರೆ ಉಳಿದ ಕುಟುಂಬ ಒಕ್ಕಲೆಬ್ಬಿಸಿದಂತೆ ಆಗುತ್ತದೆ. ಶೇಕಡಾ 80 ರಷ್ಟು ಮಂದಿ ಸಂತ್ರಸ್ತ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ. ಬಗರ್ ಹುಕುಂ ಸಮಿತಿ, ಅಕ್ರಮ ಸಕ್ರಮ ಹೀಗೆ ಅನೇಕ ರೀತಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಫಲಾನುಭವಿಗಳಿಗೆ ಭೂಮಿ ನೀಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ತುಳಿಯುತ್ತೇವೆ ಎಂದು ಎಚ್ಚರಿಸಿದರು.
ಸ್ಥಳೀಯ ಮುಖಂಡ ಸುರೇಶ್ ಮಾತನಾಡಿ 1958-59 ರಲ್ಲಿ 50 ಹರಿಜನ ಕುಟುಂಬಕ್ಕೆ ಖಾಯಂ ಮಂಜೂರಾತಿ ನೀಡಿದ್ದ ಸರ್ಕಾರ ಊರು ಬಿಟ್ಟ 10 ಕುಟುಂಬವನ್ನು ವಜಾಗೊಳಿಸಿತ್ತು. 1981-82 ರಲ್ಲಿ ಬದಲಾವಣೆ ಮಾಡಲಿಲ್ಲ. ಹೀಗೆ ನಡೆದು ಕಾವಲ್ ಹೆಸರಿನಲ್ಲಿ ತಾಂತ್ರಿಕ ಸಮಸ್ಯೆ ಮುಂದಿಟ್ಟು ನಮ್ಮ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಖಾಯಂ ಮಂಜೂರಾತಿದಾರರು ಹಾಗೂ ಅನುಭವದಾರರು ಎಂಬ ನಮ್ಮಲ್ಲೇ ಕಿತ್ತಾಟ ಆಗುವ ಮುನ್ನ ಎಲ್ಲಾ ದಲಿತ ಕುಟುಂಬಗಳಿಗೆ ಅನುಭವ ಜಾಗವನ್ನು ದುರಸ್ತಿಗೊಳಿಸಿ ನಕ್ಷೆ ಸಿದ್ಧಪಡಿಸಿ ಮಂಜೂರು ದಾಖಲೆ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಿ.ಆರತಿ ಸಂತ್ರಸ್ತರ ಜೊತೆ ಚರ್ಚಿಸಿ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಸಿ ಸರ್ಕಾರದ ಗಮನಕ್ಕೆ ತಂದು ಒಂದು ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಚಿಕ್ಕಮ್ಮ, ತಾಪಂ ಮಾಜಿ ಸದಸ್ಯ ಮುಳ್ಳುಕಟ್ಟಯ್ಯ, ಮುಖಂಡರಾದ ದೊಡ್ಡೇಗೌಡ, ಗೋವಿಂದಪ್ಪ, ಸೋಮಣ್ಣ, ಕೃಷ್ಣಪ್ಪ ಇತರರು ಇದ್ದರು.





