ಒಂದು ರೂಪಾಯಿ ಅನುದಾನ ನೀಡದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಕಟ್ಟಕಡೆಯ ದಟ್ಟ ದರಿದ್ರ ಸರ್ಕಾರ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಗದ್ದೇಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 8 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಪ್ರವಾಸ ಮಾಡುವ ಸಮಯ ಅಭಿವೃದ್ದಿ ಕೆಲಸವನ್ನು ಜನರು ಕೇಳುತ್ತಿದ್ದಾರೆ. ಆದರೆ ಈ ಸರ್ಕಾರ ಯಾವ ಅನುದಾನ ನೀಡದೆ ಕೇವಲ ಗ್ಯಾರಂಟಿ ಯೋಜನೆ ಸರಿದೂಗಿಸಲು ಇಲ್ಲಸಲ್ಲದ ಹೊರೆಯನ್ನು ಸಾರ್ವಜನಿಕರಿಗೆ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಒದಗಿಸುವ ಕಾರ್ಯಕ್ರಮ ಸದ್ಯಕ್ಕೆ ನಡೆದಿದೆ. ಬೇರೆ ಅನುದಾನಕ್ಕೆ ಇಲ್ಲದ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಇದೆ. ಕ್ಷೇತ್ರದಲ್ಲಿ ಹೇಮಾವತಿ ಇಲಾಖೆ ಮೂಲಕ ಒಂದಿಷ್ಟು ಕೆಲಸ ಮಾಡುವ ನಿಟ್ಟಿನಲ್ಲಿ ಅನುದಾನ ಬರುವಿಕೆಗೆ ಕಾದಿದ್ದೇವೆ. 36 ಕೋಟಿ ಅನುದಾನ ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದ ಅವರು ಸಿ.ಎಸ್.ಪುರ ಹೋಬಳಿಯ ಗದ್ದೆಹಳ್ಳಿಯಿಂದ ಮಣಿಕುಪ್ಪೆ ಹಾಗೂ ಚೀರನಹಳ್ಳಿಯಿಂದ ನಾರನಹಳ್ಳಿ ರಸ್ತೆ ಅಭಿವೃದ್ಧಿ ಚಾಲನೆ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡರಾದ ಜನ್ನೇನಹಳ್ಳಿ ಮೂರ್ತಣ್ಣ, ವೀರಣ್ಣಗುಡಿ ರಾಮಣ್ಣ, ಗುತ್ತಿಗೆದಾರ ರಾಮಲಿಂಗೇಗೌಡ, ಈಶ್ವರಗೌಡ, ಕೃಷ್ಣೇಗೌಡ ಇತರರು ಇದ್ದರು.





