ಕಳೆದ ಹತ್ತು ವರ್ಷದಿಂದ ನಿತ್ಯ ರೈತರ ರಸ್ತೆಯಾಗಿದ್ದ ಯಡಿಯೂರು ಕೇಶಿಪ್ ರಸ್ತೆಗೆ ದಿಢೀರ್ ಟೋಲ್ ನಿರ್ಮಾಣವನ್ನು ವಿರೋಧಿಸಿ ಈಗಾಗಲೇ ಹೋರಾಟ ಮಾಡಿದ್ದರೂ ಮರಳಿ ಟೋಲ್ ತೆರಿಗೆ ಸಂಗ್ರಹ ಆರಂಭಿಸಿದ್ದು ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು, ಸ್ಥಳೀಯ ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒಗ್ಗೂಡಿ ಬೃಹತ್ ಹೋರಾಟ ನಡೆಸಿದರು.
ತಾಲ್ಲೂಕಿನ ಜಿ.ಹೊಸಹಳ್ಳಿ ಬಳಿಯ ಟೋಲ್ ನಿರ್ಮಿಸಿರುವ ಸ್ಥಳದಲ್ಲಿ ಬೆಳಿಗ್ಗೆ ಜಮಾಯಿಸಿದ ನೂರಾರು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮಧ್ಯಾಹ್ನ ಸ್ಥಳದಲ್ಲೇ ಅಡುಗೆ ತಯಾರಿಸಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ರೈತಾಪಿ ವರ್ಗ ಇರುವ ಹೊಸಹಳ್ಳಿ ಸುತ್ತಲಿನ ಗ್ರಾಮದ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆ ಮಾಡಿದ ಟೋಲ್ ಚಿಕ್ಕ ರಸ್ತೆಯಲ್ಲಿ ರೈತರ ವಾಹನಕ್ಕೆ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಇಕ್ಕಟ್ಟಿನ ರಸ್ತೆಯಲ್ಲಿನ ಟೋಲ್ ಧಿಡೀರ್ ಹತ್ತು ವರ್ಷದ ಬಳಿಕ ಬಂದ್ದಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಹಣ ಕ್ರೋಢೀಕರಣಕ್ಕೆ ರೈತರ ಬಳಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಇದು ಅವೈಜ್ಞಾನಿಕ ಎಂದು ಈಗಾಗಲೇ ಹೋರಾಟ ಮಾಡಿದ್ದರೂ ಸಹ ತಿಂಗಳಲ್ಲಿ ಟೋಲ್ ಮರು ನಿರ್ಮಾಣ ಮಾಡಿ ತೆರಿಗೆ ಪಡೆಯುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಟೋಲ್ ತೆರವು ಮಾಡದಿದ್ದರೆ ಶಾಂತಿ ಹೋರಾಟ ಉಗ್ರ ರೂಪ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿದರೆ, ರಾಜ್ಯ ಸರ್ಕಾರ ಹುಡುಕಿ ಹಳೇ ರಸ್ತೆಗಳಿಗೆ ತೆರಿಗೆ ಹಾಕಲು ಟೋಲ್ ನಿರ್ಮಾಣ ಮಾಡುತ್ತಿದೆ. ಇದು ಹಣವಿಲ್ಲದೆ ಗ್ಯಾರಂಟಿ ಯೋಜನೆ ನಡೆಸಲು ನಡೆದಿರುವ ತಂತ್ರ. ರೈತರ ಮೇಲೆ ಪ್ರಹಾರ ಮಾಡುತ್ತಾ ಹಣ ಮಾಡಲು ಮುಂದಾಗಿದ್ದಾರೆ. ಅವೈಜ್ಞಾನಿಕ ಟೋಲ್ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಸಮಸ್ಯೆ ಮತ್ತಷ್ಟು ಕಗ್ಗಂಟು ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಟೋಲ್ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಕೇಶಿಪ್ ರಸ್ತೆಯ ಎರಡೂ ಬದಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಈಗಾಗಲೇ ಎರಡು ಬಾರಿ ತೆರಿಗೆ ಹಣ ನೀಡಿ ಈ ರಸ್ತೆಗೆ ಬರಬೇಕಿದೆ. ಮಂಡ್ಯ ತಲುಪುವ ಈ ರಸ್ತೆ ಕೇವಲ ರೈತರ ವಾಹನ ಮಾತ್ರ ಓಡಾಡುತ್ತದೆ. ಹೋರಾಟ ಮಾಡಿ ಸ್ಥಗಿತ ಮಾಡಿದ್ದರೂ ಮರಳಿ ಟೋಲ್ ಸಂಗ್ರಹ ಮುಂದಾಗಿರುವುದು ಖಂಡನೀಯ. ಚುನಾಯಿತ ಪ್ರತಿನಿಧಿಗಳು ಜಾಣ ಮೌನ ತೋರುತ್ತಾರೆ. ಎಲ್ಲಾ ತಿಳಿದೂ ಗೊತ್ತಿಲ್ಲದಂತೆ ಮಾತಾಡುತ್ತಾರೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ. ವಾಸ್ತವ ಸ್ಥಿತಿ ಹೇಳುವ ಕೆಲಸಕ್ಕೆ ಹೋಗಲ್ಲ. ಈಗ ರೈತರೇ ರಸ್ತೆಗಿಳಿದು ಸರ್ಕಾರದ ಗಮನಕ್ಕೆ ತರಬೇಕಿದೆ. ಕೂಡಲೇ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಸಾರ್ವಜನಿಕರ ವಲಯದಲ್ಲಿನ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಜನ ಪ್ರತಿನಿಧಿಗಳು ರೈತರ ಕಷ್ಟಕ್ಕೆ ಮತ್ತಷ್ಟು ಪುಷ್ಠಿ ನೀಡಿರುವುದು ಸರಿಯಲ್ಲ. ರೈತರು ಅವೈಜ್ಞಾನಿಕ ಟೋಲ್ ಬಗ್ಗೆ ತಿಳಿಸಿ ಸಚಿವರಿಂದ ತಾಲ್ಲೂಕು ಆಡಳಿತದವರೆಗೆ ಮನವಿ ಮಾಡಿದರೂ ಮತ್ತೇ ಟೋಲ್ ಸಂಗ್ರಹ ಆರಂಭಿಸಿದ್ದು ರೈತರ ಹೋರಾಟಕ್ಕೆ ಮಾಡಿದ ಅವಮಾನ. ಕೇವಲ ರೈತರೇ ಬಳಸುವ ಈ ರಸ್ತೆ ಕೃಷಿ ಹೈನುಗಾರಿಕೆ ವಾಹನಗಳು ಮಾತ್ರ ಓಡಾಡುತ್ತವೆ. ಇಲ್ಲಿ ಯಾವುದೇ ಕೈಗಾರಿಕಾ ವಲಯ ಇಲ್ಲ. ಬೃಹತ್ ವಾಹನ ಸಂಚಾರ ಮಾಡಲ್ಲ. ನಮ್ಮ ಶಾಂತಿ ಹೋರಾಟ ಉಗ್ರ ರೂಪಕ್ಕೆ ತಿರುಗುವ ಮುನ್ನ ಟೋಲ್ ತೆರವು ಮಾಡುವಂತೆ ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಹಾಗೂ ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ರೈತರ ರಸ್ತೆಗೆ ಟೋಲ್ ನಿರ್ಮಿಸಿದ್ದು ಸರಿಯಲ್ಲ. ಕೂಡಲೇ ಟೋಲ್ ತೆರವು ಮಾಡಬೇಕು. ಇಲ್ಲವಾದಲ್ಲಿ ರೈತರು ಮುಂದಿನ ದಿನದಲ್ಲಿ ಟೋಲ್ ತೆರವು ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸುಮಾರು ನಾಲ್ಕು ಗಂಟೆ ಮಳೆಯಲ್ಲೇ ನಡೆದ ಪ್ರತಿಭಟನೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ತಹಶೀಲ್ದಾರ್ ಆರತಿ.ಬಿ ಪ್ರತಿಭಟನಾಕಾರರ ಜೊತೆ ಮಾತನಾಡಿ ನಂತರ ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ವರ್ಷಕ್ಕೆ ಒಂದು ಕೋಟಿ ಸಂಗ್ರಹದ ಟೆಂಡರ್ ಇಲ್ಲಿ ಆಗಿದೆ. ಆದರೆ ವಾಸ್ತವದಲ್ಲಿ ರೈತರ ಬಳಕೆಯ ರಸ್ತೆ ಇದಾಗಿದೆ. ಈ ಟೋಲ್ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಮುಂದಿನ ಹದಿನೈದು ದಿನ ಯಾವುದೇ ತೆರಿಗೆ ಸಂಗ್ರಹ ಮಾಡದೆ ಕಾರ್ಯ ಚಟುವಟಿಕೆ ನಿಲ್ಲಿಸಲು ಸೂಚಿಸಿದರು. ನಂತರ ತಾತ್ಕಾಲಿಕವಾಗಿ ರೈತರು ಹೋರಾಟ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘದ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಶಿವಕುಮಾರ್, ಕುಮಾರಸ್ವಾಮಿ, ಚಿಕ್ಕ ಚಂಗಾವಿ ಪ್ರಕಾಶ್, ಮಂಜಣ್ಣ, ಜಗದೀಶ್, ಗುರುಚನ್ನಬಸವಯ್ಯ, ಸತ್ತಿಗಪ್ಪ, ಕುಮಾರಸ್ವಾಮಿ, ಯೋಗೀಶ್, ಮುಖಂಡರಾದ ನರಸೇಗೌಡ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ನೂರಾರು ರೈತರು ಭಾಗವಹಿಸಿದ್ದರು.





