ಎಲ್ಲೆಡೆ ನಾಯಿಗಳ ಹಾವಳಿ ಎಂಬ ಮಾತುಗಳು ಹೆಚ್ಚಾದ ಹಿನ್ನಲೆ ಶ್ವಾನ ಪ್ರಿಯ ಪಿ.ಬಿ.ಚಂದ್ರಶೇಖರಬಾಬು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿ ವಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಾಣಿ ಪ್ರೇಮ ಮೈಗೂಡಿಸಿಕೊಂಡ ಬಾಬಣ್ಣ ಬೀದಿ ನಾಯಿಗಳನ್ನು ಜರಿಯುವವರೇ ಹೆಚ್ಚಾಗಿದ್ದು ಕಲ್ಲೇಟು ಸಹ ನೀಡುತ್ತಾರೆ. ಬೀದಿಯಲ್ಲೇ ತನ್ನ ಪಾಡಿಗೆ ಇರುವ ನಾಯಿಗಳಿಗೆ ಯಾರು ದಿಕ್ಕು ಎಂಬ ಪ್ರಶ್ನೆಗೆ ಉತ್ತರವಾಗಿ ಸ್ವಂತ ಹಣವನ್ನು ಶಸ್ತ್ರ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಈಗಾಗಲೇ ನೂರಕ್ಕೂ ಅಧಿಕ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರ ಚಿಕಿತ್ಸೆ ಹಾಗೂ ಕಾಲು ಮುರಿದ ನಾಯಿಗಳು, ಚರ್ಮ ರೋಗಕ್ಕೆ ತುತ್ತಾದ ನಾಯಿಗಳಿಗೂ ಔಷಧೋಪಚಾರ ಮೂಲಕ ಆರೈಕೆ ನಡೆಸಿದ್ದಾರೆ.
ಸ್ಥಳೀಯ ಪಟ್ಟಣ ಪಂಚಾಯಿತಿ ಈಗಾಗಲೇ ಎಬಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದೆ. ಆದರೂ ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿರುವ ಬಗ್ಗೆ ಅರಿತ ಬಾಬಣ್ಣ ಶಸ್ತ್ರ ಚಿಕಿತ್ಸೆ ಜೊತೆಗೆ ಎಂಟು ದಿನಗಳ ಕಾಲ ಅನ್ನ ಹಾಲು ಆಹಾರ ಜೊತೆಗೆ ಔಷಧಿ ನೀಡಿ ಆರೈಕೆ ಮಾಡುತ್ತಿದ್ದಾರೆ. ಈ ಕಾರ್ಯ ಮಾಡಲಿಕ್ಕೆ ತಮ್ಮ ಸ್ವಂತ ಕಟ್ಟಡ ಮೇಲ್ಬಾಗದಲ್ಲಿ ಪ್ರತಿ ವಾರ ಶಸ್ತ್ರ ಚಿಕಿತ್ಸೆಗೆ ಸ್ಥಳಾವಕಾಶ ಮಾಡಿದ್ದಾರೆ. ಹಾಸನದಿಂದ ನುರಿತ ವೈದ್ಯರ ತಂಡ ಬಂದು ಶಸ್ತ್ರ ಚಿಕಿತ್ಸೆ ಮುಗಿಸಿ ತೆರಳುತ್ತಾರೆ. ವಾರಕ್ಕೊಮ್ಮೆ ಏಳೆಂಟು ನಾಯಿಗಳಿಗೆ ಚಿಕಿತ್ಸೆ ನಡೆಯುತ್ತದೆ.
ಪ್ರಾಣಿಪ್ರಿಯ ಹಾಗೂ ಪರಿಸರ ಪ್ರೇಮಿ ಗ್ಯಾಸ್ ಬಾಬು ಈ ಹಿಂದೆ ಸೋಪನಹಳ್ಳಿ ಗೇಟ್ ಬಳಿಯ ಹೀರೆಹಕ್ಕಿ ಬಾವಲಿಗಳ ಸಂತಾನ ಉಳಿಸಲು ಹೆದ್ದಾರಿ ಪ್ರಾಧಿಕಾರ ವಿರುದ್ಧ ದೊಡ್ಡ ಹೋರಾಟ ನಡೆಸಿದ್ದರು. ನ್ಯಾಯಾಲಯ ಮೆಟ್ಟಿಲೇರಿ ಬೃಹತ್ ಎರಡು ಮರಗಳನ್ನು ತೆರೆವು ಮಾಡದಂತೆ ತಡೆಯಾಜ್ಞೆ ಸಹ ತಂದಿದ್ದರು. ಆದರೆ ಇವರ ಕಾಳಜಿಗೆ ವಿರುದ್ಧವಾಗಿ ಮರಗಳನ್ನು ಒಣಗಿಸಿ ಬಾವಲಿಗಳು ವಲಸೆ ಹೋಗುವಂತೆ ಮಾಡಲಾಯಿತು ಎಂದು ಬಾಬಣ್ಣ ಬೇಸರ ವ್ಯಕ್ತಪಡಿಸಿದರು.
ಪಶು ವೈದ್ಯ ಡಾ.ಮಂಜುನಾಥ್ ಮಾತನಾಡಿ ಬೀದಿ ನಾಯಿಗಳ ಮೇಲಿನ ಅಕ್ಕರೆ ತೋರುವ ಬಾಬಣ್ಣ ರೀತಿಯ ಪ್ರಾಣಿ ಪ್ರಿಯರ ಸಂಖ್ಯೆ ಸಾಕಷ್ಟು ವಿರಳ. ಮನುಷ್ಯನ ಹತ್ತಿರದ ಜೀವಿ ನಾಯಿ. ವಿವಿಧ ತಳಿಯ ನಾಯಿಗಳನ್ನು ಸಾಕುವ ಮಂದಿ ಎಲ್ಲೆಡೆ ಇದ್ದಾರೆ. ಬೀದಿ ನಾಯಿಗಳಿಗೆ ಅನ್ನ ಆಹಾರ ನೀಡುವ ಮಂದಿ ಸಹ ಇದ್ದಾರೆ. ಆದರೆ ನಾಯಿಗಳಿಗೆ ರೇಬಿಸ್ ರೋಗ ಬಾರದಂತೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ನಾಯಿಗಳ ಮೇಲಿನ ಪ್ರೀತಿ ಕಾಳಜಿ ಅಪರೂಪದ ವ್ಯಕ್ತಿ. ತಮ್ಮ ಕಟ್ಟಡದಲ್ಲಿ ನಾಯಿಗಳಿಗೆ ಆಶ್ರಮ ರೀತಿ ವ್ಯವಸ್ಥೆ ಮಾಡಿರುವುದು ಕೂಡಾ ಮೆಚ್ಚುವಂತಹದ್ದು. ಇವರ ಕಾಳಜಿಗೆ ನಮ್ಮ ತಂಡ ಪ್ರತಿವಾರ ಸ್ಪಂದಿಸುತ್ತಿದೆ ಎಂದರು.





