ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಿಂದ ಏರ್ಪಡಿಸಿದ ಸ್ವಚ್ಛ ಈ ಸೇವಾ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಶಿವಪ್ರಕಾಶ್ ಉದ್ಘಾಟಿಸಿ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಪಂಚಾಯಿತಿ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಲಾ ಮಕ್ಕಳ ಜೊತೆ ಗ್ರಾಮದಲ್ಲಿ ಸ್ವಚ್ಚತಾ ಬಗ್ಗೆ ಜಾಗೃತಿ ಜಾಥಾ ನಡೆಸಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯಲ್ಲಿ ಏಕ ಕಾಲಕ್ಕೆ ಸ್ವಚ್ಚೋತ್ಸವ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ ಬಗ್ಗೆ ಅರಿವು ಹಾಗೂ ಸಮುದಾಯ ಜೊತೆ ಸ್ವಚ್ಚತಾ ಕಾರ್ಯವನ್ನು ಹದಿನೈದು ದಿನಗಳ ಕಾಲ ಗಾಂಧಿ ಜಯಂತಿಯವರೆಗೆ ಪಾಕ್ಷಿಕ ಆಂದೋಲನ ರೀತಿ ನಡೆಸಲಾಗುವುದು ಎಂದರು.

ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಗ್ರಾಮವನ್ನೇ ಸ್ವಚ್ಛತೆಯಾಗಿ ಇಟ್ಟುಕೊಂಡಂತೆ ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಸಹ ಬರಬಹುದು. ನಾವು ಮುಂದಿನ ಪೀಳಿಗೆಗೆ ಏನಾದರೂ ನೀಡುತ್ತೇವೆ ಎಂದರೆ ಉತ್ತಮ ಪರಿಸರ ಹಾಗೂ ಸ್ವಚ್ಛತೆ. ಈ ದಿನದಿಂದ ಗುಬ್ಬಿ ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಈ ಸೇವಾ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದೆ ಎಂದರು.
ಪಿಡಿಓ ಕೆ.ಎಂ.ಶೇಖರ್ ಮಾತನಾಡಿ ಆರೋಗ್ಯ ಗ್ರಾಮ ಎನಿಸಲು ಮೊದಲು ಉತ್ತಮ ಪರಿಸರ ಸೃಷ್ಟಿಯಾಗಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯ ಸಮಾಜದಿಂದ ಸಿಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮನೆ ಸುತ್ತಲಿನ ನೈರ್ಮಲ್ಯ ದೂರ ಮಾಡಬೇಕು. ಉತ್ತಮ ಪರಿಸರ ರೂಡಿಸುವುದು ನಮ್ಮ ಕೈಯಲ್ಲಿದೆ. ಪಂಚಾಯಿತಿ ನಡೆಸುವ ಪಾಕ್ಷಿಕ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.
ಈ ವೇಳೆ ಎಂ. ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಸಮುದಾಯ ಭವನದ ಹತ್ತಿರ ಶಾಲಾ ಮಕ್ಕಳು ಮುಖ್ಯೋಪಾಧ್ಯಾಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರೊಂದಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಮಕ್ಕಳಿಗೆ ಸಿಹಿಯನ್ನು ವಿತರಣೆ ಮಾಡಲಾಯಿತು. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸ್ವಚ್ಛತೆಯನ್ನು ಮಾಡಲಾಯಿತು.
ಈ ವೇಳೆ ಸಹಾಯಕ ನಿರ್ದೇಶಕ ಜೆ.ಬಿ.ರಂಗನಾಥ್, ಗ್ರಾಪಂ ಅಧ್ಯಕ್ಷ ಎಸ್.ಜೆ.ಯೋಗೀಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸರ್ವ ಸದಸ್ಯರು, ಐಇಸಿ ತಾಲ್ಲೂಕು ಸಂಯೋಜಕ ರಾಘವೇಂದ್ರ, ಗುಮಾಸ್ತೆ ಕೆ.ಎನ್.ಗೀತಾ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.





