ಪ್ರತಿಯೊಬ್ಬ ರೈತರು ಸಮಗ್ರ ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಿದಾಗ ಮಾತ್ರ ಅಧಿಕ ಇಳುವರಿ ಪಡೆಯುವ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂದು ಸಂಪನ್ಮೂಲ ವ್ಯಕ್ತಿ ಡಿ.ಲೋಕೇಶ್ ತಿಳಿಸಿದರು.
ತಾಲ್ಲೂಕಿನ ಕಡಬ ಗ್ರಾಮದ ಸಮುದಾಯ ಭವನದಲ್ಲಿ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಗ್ರ ಪೋಷಕಾಂಶ ಮತ್ತು ಸಮಗ್ರ ಕೀಟ ನಿರ್ವಹಣೆ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣನ್ನು ಎರಡು ವರ್ಷಕ್ಕೆ ಒಮ್ಮೆ ಪರೀಕ್ಷೆ ಮಾಡಿಸಿ, ಇದರ ಆಧಾರದಲ್ಲಿ ಪ್ರಧಾನ, ಲಘು ಹಾಗೂ ಸೂಕ್ಷ್ಮ ಪೋಷಕಾಂಶ ಯಾವ ಪ್ರಮಾಣದಲ್ಲಿ ಅಗತ್ಯವಿದೆ ಎಂಬುದನ್ನು ವಿಜ್ಞಾನಿಗಳ ಸಲಹೆಯಂತೆ ಗೊಬ್ಬರಗಳನ್ನು ಹಾಕಿದರೆ ಅಧಿಕ ಇಳುವರಿಯನ್ನು ಪಡೆಯಬಹುದು.
ಪ್ರಗತಿಪರ ರೈತ ಕನ್ನಡ ತಾಲ್ಲೂಕು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶಿವಲಿಂಗಯ್ಯ ಮಾತನಾಡಿ, ಯುವ ರೈತರು ದುಶ್ಚಟಗಳಿಗೆ ಬಲಿಯಾಗದೆ ಸಾವಯವ ಕೃಷಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಾವುಗಳು ಹಿಂದಿನ ಪದ್ದತಿಗಳನ್ನು ಅಳವಡಿಸಿಕೊಂಡು ಆಹಾರಗಳನ್ನು ಉತ್ಪಾದನೆ ಮಾಡಿ ಸೇವನೆ ಮಾಡಿದಾಗ ಮಾತ್ರ ಆರೋಗ್ಯದ ಮೇಲೆ ಖರ್ಚು ಮಾಡುವ ಹಣವನ್ನು ಉಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಆರ್.ಎಲ್.ಐ.ಎಫ್.ಸಿ ಸಿಂಧೂ, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ಅಧಿಕಾರಿ ಹರೀಶ್, ಕೃಷಿ ಸಖಿಯರಾದ ಜಾನಕಿ, ಲಕ್ಷ್ಮೀ, ನೇತ್ರಾವತಿ, ವೀಣಾ, ಪಶುಸಖಿಯರಾದ ಪುಷ್ಪಲತ, ನಾಗಮಣಿ, ಶ್ವೇತ,ಪ್ರಗತಿಪರ ರೈತರು, ಒಕ್ಕೂಟದ ಸದಸ್ಯರು ಇತರರು ಇದ್ದರು.





