ಗ್ರಾಮೀಣ ಭಾಗದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಮೊದಲು ಪೋಷಕರು ಗುರುತಿಸಬೇಕು. ನಂತರ ಶಿಕ್ಷಕ ವರ್ಗ ಪ್ರತಿಭೆಗೆ ಸೂಕ್ತ ವೇದಿಕೆ ಸೃಷ್ಟಿಸಿ ಉತ್ತಮ ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಕರೆ ನೀಡಿದರು.
ತಾಲ್ಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಡಗೂರು ಕ್ಲಸ್ಟರ್ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹುಮುಖ ಪ್ರತಿಭೆಯ ಅನ್ವೇಷಣೆಗೆ ಸರ್ಕಾರ ಒದಗಿಸಿದ ಪ್ರತಿಭಾ ಕಾರಂಜಿ ವೇದಿಕೆ ಸಮಾಜದ ಮುಂದಿನ ಕಲಾವಿದರು, ಕ್ರೀಡಾಪಟುಗಳ ತಯಾರಿ ಮಾಡಲು ದಿಕ್ಸೂಚಿಯಾಗಿದೆ ಎಂದರು.
ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಮುಂದಿನ ದಿನಗಳಲ್ಲಿ ಮಕ್ಕಳು ಸಮಾಜದ ಗಣ್ಯರ ಪಟ್ಟಿಯಲ್ಲಿ ಗುರುತಿಸಿಕೊಂಡು ಸೆಲೆಬ್ರಿಟಿಗಳಾಗಿ ತಮ್ಮೂರಿಗೆ ಕೀರ್ತಿ ತರುವ ಅವಕಾಶಕ್ಕೆ ಇಲಾಖೆ ಪ್ರತಿಭಾ ಕಾರಂಜಿ ನಡೆಸಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳ ಪ್ರತಿಭೆಗೆ ನೀರೆರೆಯುವ ಮಂದಿ ಇರುತ್ತಾರೆ. ಮಕ್ಕಳ ಬದುಕಿಗೆ ಪ್ರತಿಭೆಯೇ ಆಧಾರವಾಗಲಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಗುಣ ಪೋಷಕರಲ್ಲಿ ಬರಬೇಕು ಎಂದರು.
ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಯಾವುದೇ ಸವಲತ್ತು ಇಲ್ಲದ ಕಾಲದಲ್ಲಿ ನಾವು ಅಧ್ಯಯನ ಮಾಡಿದ್ದೆವು. ಆದರೆ ಇಂದು ಸರ್ಕಾರ ಶಿಕ್ಷಣ ಇಲಾಖೆ ಅತಿ ಹೆಚ್ಚು ಮಹತ್ವ ನೀಡಿ ಅನುದಾನ ನೀಡುತ್ತದೆ. ಓದುವ ಮಕ್ಕಳಲ್ಲಿ ಮತ್ತಷ್ಟು ಪ್ರತಿಭೆ ಹುಡುಕುವ ಕೆಲಸಕ್ಕೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತಿದೆ. ಈ ಸದಾವಕಾಶವನ್ನು ಮಕ್ಕಳು ಬಳಸಿಕೊಳ್ಳಬೇಕು ಎಂದರು.
ಅಡಗೂರು ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಸರ್ಕಾರಿ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ಉಳಿಸಿ ಬೆಳೆಸಲು ಗ್ರಾಮ ಪಂಚಾಯಿತಿ ಅನೇಕ ಸವಲತ್ತು ಒದಗಿಸುತ್ತಿದೆ. ಇಲ್ಲಿನ ಶಾಲೆಗೆ ಒಂದು ಕೋಟಿಯವರೆಗೆ ಅನುದಾನ ನೀಡಲಾಗಿದೆ. ಅದಕ್ಕೆ ತಕ್ಕಂತೆ ಮಕ್ಕಳ ಶಿಕ್ಷಣ ಪೂರಕವಾಗಿ ಸಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತಂದು ಅದಕ್ಕೆ ತಕ್ಕನಾಗಿ ತರಬೇತಿ ನೀಡಿದಲ್ಲಿ ಮಕ್ಕಳು ರಾಜ್ಯಮಟ್ಟಕ್ಕೆ ಹೋಗಬಲ್ಲರು. ಇಂತಹ ಕೆಲಸ ಶಿಕ್ಷಕ ವರ್ಗ ಮಾಡಲಿ. ಸ್ಥಳೀಯ ಗ್ರಾಮ ಪಂಚಾಯಿತಿ ಸಹ ಅವರಿಗೆ ಸಹಕಾರ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಅಡಗೂರು, ಕಳ್ಳಿಪಾಳ್ಯ, ಪ್ರಭುವನಹಳ್ಳಿ, ಜ್ಯೋತಿನಗರ, ಬಿಳಿಕಲ್, ಹಳೆಗುಬ್ಬಿ, ಕೋಡಿತೋಟ,
ಸಿಂಗೊನಹಳ್ಳಿ, ಚಿಕ್ಕೋನಹಳ್ಳಿ, ಧೂಳನಹಳ್ಳಿ ಶಾಲೆಯ ಮಕ್ಕಳು ವೇಷಭೂಷಣ, ಚಿತ್ರಕಲೆ, ನಾಟಕ, ಸಂಗೀತ, ನೃತ್ಯ ಹೀಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಸಣ್ಣಯ್ಯ, ಚಂದ್ರಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೇಬಲ್ ರಾಜು, ರಾಮೇಗೌಡ, ಜೆಸಿಬಿ ಕುಮಾರ್, ದಯಾನಂದ್, ಎಸ್ ಡಿಎಂಸಿ ಅಧ್ಯಕ್ಷ ಮಧು, ಸದಸ್ಯರಾದ ನೇತ್ರಾ, ದೊಡ್ಡಯ್ಯ, ಮಹಾಲಿಂಗಯ್ಯ, ಶಿಕ್ಷಕರಾದ ಶಿವಮ್ಮ, ಚಂದ್ರಯ್ಯ ಇತರರು ಇದ್ದರು.





