ಅಸಹ್ಯ ಹುಟ್ಟಿಸಿದ ಕಾಂಗ್ರೆಸ್ ಸರ್ಕಾರದಲ್ಲಿ ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡರೆ ಹೆಚ್ಚು. ಒಪ್ಪಂದ ಮಾಡಿಕೊಂಡ ಅಧಿಕಾರಿಗಳಿಂದ ಮುಖ್ಯ ಗುತ್ತಿಗೆದಾರ ಕಮಿಷನ್ ಗಾಗಿ ಸಬ್ ಕಾಂಟ್ರಾಕ್ಟ್ ನೀಡಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ ಯೋಜನೆ ಸಂಪೂರ್ಣ ಕಳಪೆ ಕಾಮಗಾರಿ ಆಗಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಹುಲ್ಲೇಕೆರೆ ಗ್ರಾಮದಲ್ಲಿ ನಡೆದ ಜಲ ಜೀವನ್ ಮಿಷನ್ ಯೋಜನೆಯ 82 ಲಕ್ಷ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹೆಬ್ಭೂರಿನಲ್ಲಿ ಸೀರೆ ಮಾರಿಕೊಂಡು ಇದ್ದವರು ಮನೆಗೆ ನಳ ಸಂಪರ್ಕ ಕಾಮಗಾರಿ ಮಾಡುವ ಗುತ್ತಿಗೆದಾರರಾಗಿ ನಮ್ಮ ಹೋಬಳಿಯಲ್ಲಿ ಕಳಪೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚಿಸುವ ಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷದ ಶಾಸಕರಾಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಇಚ್ಛಾಶಕ್ತಿ ಇಲ್ಲದ ಈಸರ್ಕಾರದಲ್ಲಿ ಯಾವ ಅಧಿಕಾರಿಗಳು ಜನ ಪ್ರತಿನಿಧಿಗಳ ಮಾತಿಗೆ ಬೆಲೆ ನೀಡುತ್ತಿಲ್ಲ. ಸಿ.ಎಸ್.ಪುರ ಗ್ರಾಮದಲ್ಲಿ ಒಂದು ವರ್ಷ ಕಳೆದರೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಚೆನ್ನಾಗಿ ದುಡ್ಡು ಮಾಡಿಕೊಂಡ ಇಇ ಯೋಜನೆಯ ದಿಕ್ಕು ತಪ್ಪಿಸಿಬಿಟ್ಟಿದ್ದಾರೆ. ಅಧಿಕಾರಿಗಳ ವರ್ತನೆಗೆ ಈ ಘಟನೆಯೇ ಸಾಕ್ಷಿ. ಕಳಪೆ ಗುಣಮಟ್ಟದ ಜಲ ಜೀವನ್ ಕೆಲಸಗಳನ್ನು ಮತ್ತೊಮ್ಮೆ ಗುತ್ತಿಗೆ ಕರೆದು ಗುಣಮಟ್ಟ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ ಅವರು ಎಲ್ಲಿಯೂ ಕಳಪೆ ಕೆಲಸ ಮಾಡಲು ಬಿಡುವುದಿಲ್ಲ. ನನ್ನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ದುಡ್ಡು ಪೋಲಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲಕ್ಕೆ ಕಾಂಗ್ರೆಸ್ ಮುಗೀತು. ಈಗ ಎಲ್ಲಾ ನಕಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಅವೈಜ್ಞಾನಿಕ ಕಾಮಗಾರಿ ಲಿಂಕ್ ಕೆನಾಲ್ ಕಾಮಗಾರಿ ಮಾಡಿಯೇ ತೀರುವ ಹಟಕ್ಕೆ ಕಾಂಗ್ರೆಸ್ ಸರ್ಕಾರ ಬಿದ್ದಿದೆ. ಈ ಹೇಮಾವತಿ ಇಡೀ ತುಮಕೂರು ಜಿಲ್ಲೆಯ 24 ಲಕ್ಷ ಜನರ ಜೀವನದಿಯಾಗಿದೆ. ಕಾಮಗಾರಿ ಯಾವುದೇ ಕಾರಣಕ್ಕೂ ಮಾಡಲು ರೈತರು ಬಿಡುವುದಿಲ್ಲ. ಕನಕಪುರ ಇದಲ್ಲ. ತುಮಕೂರು ರೈತರು ಸಿಡಿದರೆ ಕಾಮಗಾರಿ ಸಂಪೂರ್ಣ ಸ್ಥಗಿತ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಂಜೇಗೌಡ, ಚನ್ನೇನಹಳ್ಳಿ ಮೂರ್ತಣ್ಣ, ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ತಮ್ಮಯ್ಯಣ್ಣ, ನರಸೇಗೌಡ, ನವೀನ್, ವೀರಣ್ಣಗುಡಿ ರಾಮು, ಸೋಮಣ್ಣ, ಮೂರ್ತಿ ಇತರರು ಇದ್ದರು.





