ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಮಾಡುವ ಮೂಲಕ ಅದ್ದೂರಿಯಾಗಿ 70 ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ಸರ್ಕಾರಿ ಕಾಲೇಜು ಮೈದಾನಕ್ಕೆ ತಲುಪಿತ್ತು. ನಂತರ ತಾಲ್ಲೂಕು ಆಡಳಿತ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ನೆರವೇರಿಸಿ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ ಮಾತೃಭಾಷೆ ಕನ್ನಡ ಮನೆ ಮನಗಳಲ್ಲಿ ರಾರಾಜಿಸಬೇಕು ಎಂದರು.
ತಹಶೀಲ್ದಾರ್ ಆರತಿ.ಬಿ ಮಾತನಾಡಿ ಕನ್ನಡ ನಮ್ಮ ಅಸ್ಮಿತೆ. ನಮ್ಮ ಭಾಷೆ ಮೇಲಿನ ಅಭಿಮಾನ ಹೆಚ್ಚಿಸಿಕೊಂಡು ಮನದಲ್ಲಿ ಆರಾಧಿಸಬೇಕು. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ವಾಣಿಯಂತೆ ನಾವೆಲ್ಲರೂ ಮಾತೃಭಾಷೆ ಉಳಿಸಿ ಬೆಳೆಸೋಣ ಎಂದರು.
ಕನ್ನಡ ಉಪನ್ಯಾಸಕ ಮುರುಳೀಧರ್ ಮಾತನಾಡಿ ಜನನಿ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತ ದೊಡ್ಡದು ಎಂಬಂತೆ ನಮ್ಮ ಮಾತೃಭಾಷೆ ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. 1956 ರಂದು ಭಾಷಾವಾರು ವಿಂಗಡಿಸಿ ಮೈಸೂರು ರಾಜ್ಯ ಕನ್ನಡನಾಡು ಆಗಿತ್ತು. 1973 ರಲ್ಲಿ ಕರ್ನಾಟಕ ಹೆಸರು ಅಧಿಕೃತ ನಾಮಕರಣ ಮಾಡಲಾಯಿತು. ಎರಡು ಸಾವಿರ ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠ ಪ್ರಶಸ್ತಿ ತಂದಿದೆ. ಸರಳ ವಚನ ಸಾಹಿತ್ಯ, ಕೀರ್ತನಾ ಸಾಹಿತ್ಯ ಹೀಗೆ ಕನ್ನಡ ಬೆಳೆಯುತ್ತಿದೆ. ಮುಂದಿನ ಪೀಳಿಗೆ ಕನ್ನಡ ಉಳಿಸಿ ಬೆಳೆಸಬೇಕು ಎಂದರು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತಾ ಜಗದೀಶ್, ತಾಪಂ ಇಓ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಎಲ್ಲಾ ಪಪಂ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.





