ಗುಬ್ಬಿ ತಾಲ್ಲೂಕು ಕೇಂದ್ರಕ್ಕೆ ಅಲೆದಾಡುವ ಸಾರ್ವಜನಿಕರ ಕೆಲಸವನ್ನು ಗ್ರಾಮಗಳಲ್ಲಿ ಸುಲಲಿತವಾಗಿ ನಡೆಸಲು ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಗ್ರಾಮ ಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಇಲಾಖೆಯಲ್ಲಿ ಸುಪ್ರೀಂ ಅಧಿಕಾರ ಪಡೆದ ಗ್ರಾಮ ಪಂಚಾಯಿತಿ ಜನಪರ ನಿಲ್ಲಬೇಕು. ಮೂಲಭೂತ ಅವಶ್ಯಕತೆ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ನರೇಗಾ ಯೋಜನೆಯನ್ನು ಬಳಸಿಕೊಳ್ಳಲು ಹಿಂದೇಟು ಹಾಕುವ ಪಂಚಾಯಿತಿಗಳು ಹೆಚ್ಚಿರುವಾಗ ತಾಲ್ಲೂಕಿನಲ್ಲಿ ಅತೀ ಹೆಚ್ಚು ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿ ಕೆಲಸ ಮಾಡಿದ ಹೆಗ್ಗಳಿಕೆ ಕೊಪ್ಪ ಪಂಚಾಯಿತಿಗೆ ಸಲ್ಲುತ್ತದೆ. ಪಿಡಿಓ ವರ್ಗಾವಣೆಗಿಂತ ಅಲ್ಲೇ ಉಳಿಸಿಕೊಳ್ಳಲು ಪರದಾಡಿದ ಸದಸ್ಯರನ್ನು ಹೆಚ್ಚು ನೋಡಿದಂತಾಗಿದೆ. ನರೇಗಾ ದುರುಪಯೋಗದ ಬಗ್ಗೆ ಸಿಇಓ ದೂರು ಹೇಳುತ್ತಾರೆ. ಕೆಲವಡೆ ಕೆಲಸ ಮಾಡದೆ ಬಿಲ್ ಮಾಡುವ ದೂರುಗಳು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಪ್ರಸ್ತುತ ಪರಿಶುದ್ಧ ಕೆಲಸ ಮಾಡುವ ಪಂಚಾಯಿತಿಗಳು ಅಲ್ಲಲ್ಲೇ ಇದ್ದು ಉತ್ತಮ ಕಟ್ಟಡ ಜೊತೆಗೆ ಉತ್ತಮ ನಿರ್ವಹಣೆ ಮಾಡುವಂತೆ ಸಲಹೆ ನೀಡಿ ಸದಸ್ಯರ ಹಾಗೂ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇದ್ದರೆ ಎಲ್ಲಾ ಜನಪರ ಕೆಲಸ ಸುಸೂತ್ರವಾಗಿ ನಡೆಯುತ್ತದೆ ಎಂದರು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೆ ಈಗಾಗಲೇ 2.35 ಕೋಟಿ ಹಣ ಮಂಜೂರಾಗಿದೆ. ಕೊಪ್ಪದಿಂದ ಕೋಣೆಮಾದೇನಹಳ್ಳಿ, ಕಡಬ ರಸ್ತೆ ಸಂಪರ್ಕ, ಕಡೆಕೋಡಿಯಿಂದ ಕೋಡಿ ಹಟ್ಟಿ ರಸ್ತೆ, ಕೊಪ್ಪದಿಂದ ಕಾಲೋನಿ, ಕಟ್ಟಿಗೇನಹಳ್ಳಿ ರಸ್ತೆ ಹೀಗೆ ಅನೇಕ ರಸ್ತೆಗಳು ಡಿಸೆಂಬರ್ ಮೊದಲ ವಾರದಲ್ಲಿ ಕೆಲಸ ಆರಂಭವಾಗಲಿದೆ ಎಂದ ಅವರು ಸುಂದರ ಕಾರ್ಯಾಲಯ ಕಟ್ಟಡ ನಿರ್ಮಿಸಿದ ಇಲ್ಲಿನ ಸದಸ್ಯರಿಗೆ ಬಾಕಿ ಇರುವ 25 ಲಕ್ಷ ಹಣ ಮಂಜೂರು ಮಾಡಿಸುತ್ತೇನೆ. ಸದ್ಯಕ್ಕೆ 10 ಲಕ್ಷ ಹಣ ಮಂಜೂರು ಆಗಲಿದೆ. ಬಾಕಿ ಹಣ ಜಿಲ್ಲಾ ಪಂಚಾಯಿತಿ ಮೂಲಕ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ತಾಪಂ ಇಓ ರಂಗನಾಥ್ ಮಾತನಾಡಿ ಇಲ್ಲಿನ ಆಡಳಿತ ಮಂಡಳಿ ಸುಸಜ್ಜಿತ ಕಟ್ಟಡ ನಿರ್ಮಿಸಿದೆ. ಕೆಳ ಭಾಗದ ಕಟ್ಟಡಕ್ಕೆ 25 ಲಕ್ಷ ಹಣ ಮಂಜೂರು ಆಗಬೇಕಿದೆ. ಇದೇ ಸಂದರ್ಭದಲ್ಲಿ ಮೇಲಿನ ಕಟ್ಟಡವನ್ನು ಸ್ವಂತ ಹಣದಲ್ಲಿ ನಿರ್ಮಿಸಿದ್ದಾರೆ. ಈ ಹಣವನ್ನು ಶಾಸಕರ ಸಹಕಾರದಲ್ಲಿ ಮಂಜೂರು ಆಗಲಿದೆ ಎಂದ ಅವರು ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಸಿಸಿ ರಸ್ತೆ ಕಾಮಗಾರಿ ಹಾಗೂ 17 ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಟ್ಟು 90 ಲಕ್ಷ ನರೇಗಾ ಯೋಜನೆ ಕೆಲಸ ಸಹ ನಡೆದಿದೆ ಎಂದರು.
ಗ್ರಾಪಂ ಸದಸ್ಯ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕೋಣನಕೆರೆ ರಮೇಶ್ ಮಾತನಾಡಿ ಶಾಸಕರ ಅನುದಾನ ಭರವಸೆಯಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದೇವೆ. ಇದೇ ಸಂದರ್ಭದಲ್ಲಿ ಶಾಸಕರು ಬಿಕ್ಕೆಗುಡ್ಡ ಯೋಜನೆಗೆ 5 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿ ಡಿಸೆಂಬರ್ ಮಾಹೆಯಲ್ಲಿ ಕೆಲಸ ಪೂರ್ಣ ಗೊಳಿಸುವ ಭರವಸೆ ನೀಡಿದ್ದಾರೆ. ಈ ಭಾಗದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಹನುಮಂತರಾಜು, ಉಪಾಧ್ಯಕ್ಷೆ ಕವಿತಾ ಮಂಜುನಾಥ್, ಸದಸ್ಯರಾದ ಚಂದ್ರಕಲಾ, ಪಾಂಡುರಂಗಯ್ಯ, ದಯಾನಂದ್, ಭದ್ರಮ್ಮ ಬಾಲಾಜಿ, ವಿಜಯಲಕ್ಷ್ಮಿ, ಮೊದಿನಾಲಿ, ರತ್ನಮ್ಮ, ಜಯಲಕ್ಷ್ಮಮ್ಮ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್, ಪಿಡಿಓ ಮಂಜುಳಾ ಪಾಟೀಲ, ಕಾರ್ಯದರ್ಶಿ ಸುರೇಶ್, ಸಹಾಯಕ ಇಂಜಿನಿಯರ್ ಅನಿತಾ, ಸಿಬ್ಬಂದಿಗಳಾದ ರಮ್ಯಾ, ರವೀಶ್ ಮುಖಂಡರಾದ ಸುರೇಶ್, ಮಂಜುನಾಥ್, ಕಂಬೇರಹಟ್ಟಿ ನಾಗರಾಜ್ ಇತರರು ಇದ್ದರು.





