ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರ ಮನುಸ್ಮೃತಿ ಭಾವನೆ ಹೊರ ಬಂದಿದೆ. ಸಂವಿಧಾನದಡಿಯಲ್ಲಿ ಅಧಿಕಾರ ಪಡೆದು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂತಹ ವ್ಯಕ್ತಿಯನ್ನು ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದು ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ದಲಿತ ಸಂಘರ್ಷ ಸಮಿತಿ, ಆದಿಜಾಂಬವ ಯುವ ಬ್ರಿಗೇಡ್ ಹಾಗೂ ಭಾರತ್ ಭೀಮ್ ಸೇನ್ ಸೇರಿದಂತೆ ಇನ್ನಿತರ ಅಂಬೇಡ್ಕರ್ ಅನುಯಾಯಿಗಳು ಒಗ್ಗೂಡಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಸಭೆ ನಡೆಸಿ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ನಂತರ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಮಾರಶೆಟ್ಟಿಹಳ್ಳಿ ಬಸವರಾಜ್ ಮಾತನಾಡಿ ಅಂಬೇಡ್ಕರ್ ರಚಿತ ಸಂವಿಧಾನ ನಮ್ಮ ದೇಶದ ಅಡಿಪಾಯವಾಗಿದೆ. ನಮ್ಮ ದೇಶದ ಸಾಮಾಜಿಕ ನ್ಯಾಯ ಬದ್ಧತೆ ತೋರಿದ ಅಂಬೇಡ್ಕರ್ ಶೋಷಿತರು, ದೀನ ದಲಿತರ ಪಾಲಿನ ದೇವರು ಎಂಬುದು ಸತ್ಯ. ಅವರ ಸ್ಮರಣೆಯನ್ನು ವ್ಯಸನ ಎನ್ನುವುದು ಅವರ ಕೆಟ್ಟ ಮನಸ್ಥಿತಿ ತೋರುತ್ತದೆ ಎಂದು ಕಿಡಿಕಾರಿದರು.

ದಲಿತ ಮುಖಂಡ ಎನ್.ಎ.ನಾಗರಾಜ್ ಮಾತನಾಡಿ ಕೀಳು ಸಂಸ್ಕೃತಿ ಅಮಿತ್ ಷಾ ಅವರಿಂದ ವ್ಯಕ್ತವಾಗಿದೆ. ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿದ್ದಲ್ಲದೆ ಅವರ ಅನುಯಾಯಿಗಳನ್ನು ಅವಹೇಳನ ಮಾಡಿದ್ದಾರೆ. ದೇವರ ಸ್ಮರಣೆ ಮಾಡಿ ಏಳು ಜನ್ಮ ಪುಣ್ಯ ಬರುತ್ತೆ ಅಂತ ಹೇಳುವ ಅವರ ಜಾತಿ ಬುದ್ಧಿ ಖಂಡನಾರ್ಹ. ಈ ಕೂಡಲೇ ಅವರು ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದಲ್ಲಿ ರಾಷ್ಟ್ರಪತಿಗಳು ಅವರನ್ನು ಕೇಂದ್ರ ಸರ್ಕಾರದ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಕಿಟ್ಟದಕುಪ್ಪೆ ನಾಗರಾಜ್ ಮಾತನಾಡಿ ಅಂಬೇಡ್ಕರ್ ಎಂಬ ಪದ ಫ್ಯಾಶನ್ ಎಂದು ಹೇಳಿದ್ದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ. ವಿಶ್ವವೇ ಅಂಬೇಡ್ಕರ್ ಅವರನ್ನು ಹೊಗಳುವ ಈ ಸಂದರ್ಭದಲ್ಲಿ ನಮ್ಮ ದೇಶದ ಕೆಲ ಮಂದಿ ಮನುಸ್ಮೃತಿ ಪಾಲಕರು ಅವರಿಗೆ ಅಪಮಾನಿಸುತ್ತಿರುವುದು ಸರಿಯಲ್ಲ. ಮುಂದಿನ ಚುನಾವಣಾ ಸಂದರ್ಭದಲ್ಲಿ ಈ ಮಾತಿಗೆ ತಕ್ಕ ಉತ್ತರ ಅಂಬೇಡ್ಕರ್ ಅನುಯಾಯಿಗಳು ಕೊಡುತ್ತಾರೆ. ಸಂವಿಧಾನದ ಪ್ರಕಾರ ಅಧಿಕಾರ ಪಡೆದು ಅವರ ಬಗ್ಗೆ ಅವಹೇಳನ ಖಂಡನೀಯ. ಈ ತಕ್ಷಣದಿಂದ ಗೃಹ ಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಅಮಿತ್ ಷಾ ಅವರ ಭಾವಚಿತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸವರಾಜು, ಹರಿವೇಸಂದ್ರ ಕೃಷ್ಣಪ್ಪ, ನರೇಂದ್ರಕುಮಾರ್, ಶಿವರಾಜ್, ಸಚಿನ್, ಮಧು, ಸಾವಿತ್ರಮ್ಮ, ನಂದಿನಿ, ಮಂಜುಳಾ ಇತರರು ಇದ್ದರು.





