ಚಿಕ್ಕ ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರು ಕುರಿ ಕಾಯಲು ಹೋದಾಗ ಆಲದಮರದ ನೆರಳಲ್ಲಿ ಕುಳಿತು ಬರೆಸಿದ ಜಾತಿ ಗಣತಿ ಇದಾಗಿದೆ. ವೈಜ್ಞಾನಿಕ ಅಂಶವೇ ಇದರಲ್ಲಿಲ್ಲ. ಜಾತ್ಯತೀತ ಪ್ರಜಾತಂತ್ರದ ನಮ್ಮ ದೇಶದಲ್ಲಿ ಜಾತಿ ಗಣತಿ ಯಾರಿಗೆ ಬೇಕಿತ್ತು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 76 ಲಕ್ಷ ಒಕ್ಕಲಿಗರು ಎನ್ನುವವರು ಒಳ ಪಂಗಡದ ಹಲವು ಒಕ್ಕಲಿಗರನ್ನು ಕೈ ಬಿಟ್ಟಿದ್ದಾರೆ. ಒಟ್ಟಾರೆ 1.10 ಕೋಟಿ ಒಕ್ಕಲಿಗರಿದ್ದಾರೆ. ನಮಗಿಂತ 10 ಲಕ್ಷ ಹೆಚ್ಚು ವೀರಶೈವ ಲಿಂಗಾಯಿತರಿದ್ದಾರೆ ಎಂದು ನೇರವಾಗಿ ಜಾತಿ ಗಣತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
44 ಲಕ್ಷ ಕುರುಬರ ಸಂಖ್ಯೆ ತೋರಿರುವ ಗಣತಿ ಪ್ರಕಾರ ಕಾಡು ಕುರುಬ, ಜೇನು ಕುರುಬ, ಗೊಂಡ ಕುರುಬ ಇವರೆಲ್ಲಾ ಪರಿಶಿಷ್ಟ ಪಂಗಡಕ್ಕೆ ಒಳಪಡಿಸಲಾಗಿದೆ. ಆದರೆ ಇಲ್ಲಿ ಸಂಖ್ಯೆ ಮಾತ್ರ ಎಲ್ಲವೂ ಸೇರಿ ನಮೂದಿಸಲಾಗಿದೆ. ಯಾವುದೇ ಪ್ರಾಮಾಣಿಕತೆ ಇಲ್ಲದ ಗಣತಿ ವಾಪಸ್ ಪಡೆಯಬೇಕು. ಅವಶ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ಗಣತಿ ಮಾಡುತ್ತಾರೆ ಎಂದ ಅವರು ಸಿದ್ದರಾಮಯ್ಯ ಅವರೇ ಮೀಸಲು ಹಣ ಬಳಸುವುದು ಕ್ರಿಮಿನಲ್ ಎಂದು ಹೇಳಿ 34 ಲಕ್ಷ ಕೋಟಿನಲ್ಲಿ ಎಸ್ಸಿ ಮೀಸಲು ಹಣ ಬೇರೆ ಉದ್ದೇಶ ಅದು ಗ್ಯಾರಂಟಿ ಯೋಜನೆಗೆ ಬಳಸಿದ್ದೀರಿ. 16 ಬಜೆಟ್ ಮಂಡಿಸಿದ್ದೀನಿ ಎಂದು ಬೀಗುವ ಮುಖ್ಯಮಂತ್ರಿಗಳು ರೈತರಿಗೆ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ. ಕಾಮನ್ ಸೆನ್ಸ್ ಮರೆತು ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹ ಮಾಡುತ್ತಿದ್ದೀರಿ. ಗಳ್ಳಂಗೋಟಿ ಆಂಜನೇಯ ಗ್ಯಾಂಗ್ ಹಿಡಿದು ಕೊಂಡು ಅಲ್ಲಾಡಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ರಾಜ್ಯ ಸರ್ಕಾರ ಮಾಡಿ ಈಗ ಕೇಂದ್ರದ ಮೇಲೆ ಗೊಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಮಾವೇಶ ನಡೆಸಿ ಹೋರಾಟ ಮಾಡಲು ನೈತಿಕತೆ ಕಳೆದುಕೊಂಡಿದ್ದೀರಿ. ಈಗಾಗಲೇ 25 ಸಾವಿರ ತೆರಿಗೆ ಹೆಚ್ಚಿಸಿ ಕೇವಲ 2 ಸಾವಿರ ಹೆಣ್ಣು ಮಕ್ಕಳಿಗೆ ನೀಡುತ್ತೀರಿ. ಉಳಿದ 23 ಸಾವಿರ ಎಲ್ಲಿ ಹೋಯಿತು. ಈ ಬಗ್ಗೆ ಸದನದಲ್ಲಿ ಲೆಕ್ಕ ಕೇಳಿದ್ದೇನೆ. ಹಾಲು 9 ರೂಪಾಯಿ ಹೆಚ್ಚಳ, ಬಸ್ ಚಾರ್ಜ್ ಶೇಕಡಾ 40 ಹೆಚ್ಚಳ, ಕರೆಂಟ್ ಉಚಿತ ಅಂತ ಹೇಳಿ ಪ್ರತಿ ಯುನಿಟ್ ಗೆ 37 ಪೈಸೆ ಹೆಚ್ಚಳ ಹೀಗೆ ಎಲ್ಲದಕ್ಕೂ ತೆರಿಗೆ ವಿಧಿಸಿ ಗ್ಯಾರಂಟಿ ನಡೆಸುವುದು ಮುಂದಿನ 2028 ಕ್ಕೆ 10 ಲಕ್ಷ ಕೋಟಿ ಸಾಲ ರಾಜ್ಯವನ್ನು ದಿವಾಳಿ ಮಾಡುತ್ತದೆ ಎಂದ ಅವರು ಗ್ಯಾರಂಟಿ ಕೊಟ್ಟ ಮಹಾರಾಷ್ಟ್ರ, ದೆಹಲಿ ಚುನಾವಣೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಅತೀ ಹೆಚ್ಚು ಮುಸ್ಲಿಂ ಮತ ಇರುವ ದೆಹಲಿಯಲ್ಲಿ ಕಾಂಗ್ರೆಸ್ ಒಂದು ಸೀಟ್ ಗೆಲ್ಲಲಿಲ್ಲ. 67 ಮಂದಿ ಠೇವಣಿ ಕಳೆದುಕೊಂಡರು. ಇಂತಹ ಸ್ಥಿತಿಯಲ್ಲಿರುವ ಕಾಂಗ್ರೆಸ್ ಕಾಶ್ಮೀರ ಉಗ್ರರ ದಾಳಿ ಬಗ್ಗೆ ವಿಭಿನ್ನ ಹೇಳಿಕೆ ನೀಡುತ್ತಾ ರಾಜಕಾರಣ ತೋರುತ್ತಿದೆ. ಯುದ್ದ ಬೇಡ ಅನ್ನಲು ಸಿದ್ದರಾಮಯ್ಯ ಕೇಂದ್ರದ ಸಚಿವರೇ, ಕಾಲು ಕೆರೆದು ನಾವು ಯುದ್ದಕ್ಕೆ ಹೋಗಿಲ್ಲ. ಅವರೇ ಅಮಾಯಕರನ್ನು ಕೊಂದ ನರಮೇಧ ನಡೆಸಿದ ಹಿನ್ನಲೆ ತಕ್ಕ ಪಾಠ ಕಲಿಸಬೇಕಿದೆ. 15 ಬೇರೆ ದೇಶ ಬೆಂಬಲ ನೀಡಿದೆ. ಇಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕಿದೆ. ಈ ರೀತಿಯ ಹೇಳಿಕೆ ಸಲ್ಲದ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬೋರಪ್ಪನಹಳ್ಳಿ ಕುಮಾರ್, ಬೀರಮಾರನಹಳ್ಳಿ ನರಸೇಗೌಡ, ಸಿ.ಎಸ್.ಪುರ ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡರಾದ ಗಂಗಾಧರಪ್ಪ, ಕೃಷ್ಣೇಗೌಡ ಇತರರು ಇದ್ದರು.





