ಗುಬ್ಬಿ ತಾಲ್ಲೂಕು ಮಾಜಿ ಸೈನಿಕರ ಸಂಘ ನಿವೇಶನಕ್ಕಾಗಿ ಮನವಿ ಮಾಡಿದ್ದ ಹಿನ್ನಲೆ ಸರ್ಕಾರಕ್ಕೆ ಪತ್ರ ಬರೆದು ಎಚ್ ಎಎಲ್ ಘಟಕದ ಸಮೀಪದಲ್ಲಿ ಆರು ಎಕರೆ ಭೂಮಿಯನ್ನು ಮೀಸಲಿಟ್ಟು ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ ಮಾಡಲು ಸಂಘಕ್ಕೆ ಶೀಘ್ರದಲ್ಲಿ ಹಸ್ತಾಂತರ ಮಾಡುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ನಿವೃತ್ತ ಯೋಧ ಬಿ.ಟಿ.ದಿವಾಕರ್ ಅವರಿಗೆ ಅಭಿನಂದನಾ ಮತ್ತು ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಧ ಎಂಬ ಹೆಸರು ಮೈನವಿರೇಳಿಸುತ್ತದೆ. ದೇಶ ಪ್ರೇಮ, ಅಭಿಮಾನ ಸೈನಿಕರನ್ನು ನೋಡಿದ ತಕ್ಷಣ ಭಾವುಕತೆ ಬರುತ್ತದೆ ಎಂದರು.
ದೇಶ ಕಾಯುವ ಕಾಯಕ ಎಂದರೆ ಈ ಹಿಂದೆ ಬೇಡ ಎನ್ನುವ ಕಾಲವಿತ್ತು. ಆದರೆ ಈಗ ಶಿಕ್ಷಣ ಪಡೆದ ಮಕ್ಕಳು ಸೈನ್ಯಕ್ಕೆ ಸೇರುವ ಎಲ್ಲಾ ಆಸಕ್ತಿ ತೋರುತ್ತಾರೆ. ಹಗಲಿರುಳು ನಿದ್ರೆ ಆಹಾರ ಇಲ್ಲದೆ ಗಡಿ ಕಾದು ನಮ್ಮನ್ನು ರಕ್ಷಿಸುವ ಸೈನಿಕರಿಗೆ ನಮ್ಮ ಗೌರವ ಸಲ್ಲಬೇಕು. ಗುಬ್ಬಿಯ ದಿವಾಕರ್ 23 ವರ್ಷದ ಸೇವೆ ತಾಲ್ಲೂಕಿಗೆ ಕೀರ್ತಿ ತಂದಿದೆ ಎಂದರು.
ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಮಾತನಾಡಿ ನಟನೆ ಮಾಡಿ ಮನರಂಜಿಸುವ ಕಲಾವಿದರಿಗೆ ಉತ್ತಮ ಪ್ರಶಸ್ತಿಗಳು ಲಭಿಸುತ್ತದೆ. ಆದರೆ ತಮ್ಮ ಜೀವದ ಹಂಗು ತೊರೆದು ತಮ್ಮ ಕುಟುಂಬ ಬಿಟ್ಟು ಗಡಿಯಲ್ಲಿ ದೇಶ ಕಾಯುವ ಯೋಧನಿಗೆ ಯಾವುದೇ ಪ್ರಶಸ್ತಿ ಸರ್ಕಾರ ನೀಡಲ್ಲ. ಇದು ವಿಪರ್ಯಾಸ. ಬಾರಿ ಚಳಿಯಲ್ಲಿ ದೇಹ ಮಡುಗಟ್ಟಿ ಗಡಿ ಕಾಯುವ ಸೈನಿಕರು ತಮ್ಮ ಜೀವನದ ಯೌವ್ವನವನ್ನು ತ್ಯಾಗ ಮಾಡುತ್ತಾರೆ. ಇವರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.
ಚಿತ್ರದುರ್ಗ ಮಾಚಿದೇವ ಮಹಾಸಂಸ್ಥಾನ ಜಗದ್ಗುರು ಡಾ.ಶ್ರೀ ಬಸವಮಾಚಿದೇವ ಸ್ವಾಮೀಜಿ ಮಾತನಾಡಿ ಸ್ವಂತಕ್ಕೆ ಸರ್ವಸ್ವ ಸಮಾಜಕ್ಕೆ ಸ್ವಲ್ಪ ಎನ್ನುವ ಈ ಕಾಲದಲ್ಲಿ ಹೆತ್ತ ಮಕ್ಕಳನ್ನು ಸೇನೆಗೆ ಕಳುಹಿಸಿರುವ ಪೋಷಕರ ಭಾವನೆಗೆ ಅಭಿನಂದಿಸಬೇಕು. ಕುಲ ಕಸುಬು ನಂಬಿ ಬದುಕು ಕಟ್ಟಿಕೊಳ್ಳುವ ಜನ ಸೈನ್ಯದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವುದು ಸಾರ್ಥಕ. ರೈತ ಮತ್ತು ಯೋಧ ದೇಶದ ಎರಡು ಕಣ್ಣು. ಸೈನಿಕರಿಗೆ ಸಮಾಜ ಕೂಡಾ ಪ್ರೀತಿ ಪಾತ್ರವಾಗಿ ಕಾಣಬೇಕು ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ ಜಗತ್ತಿನಲ್ಲಿ ಬಲಿಷ್ಠ ಸೇನೆ ಹೊಂದಿರುವ ದೇಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದರೂ ಸೇನೆ ಯೋಧ ಎಂದರೆ ಅಭಿನಾಭವ ಅಭಿಮಾನ ಹೊಂದಿರುವ ದೇಶದಲ್ಲಿ ಭಾರತವೇ ಮೊದಲ ಸ್ಥಾನ ಎಂದ ಅವರು ದೇಶದಲ್ಲಿ 25 ಲಕ್ಷ ಸೈನಿಕರು ದೇಶ ಕಾಯುತ್ತಾರೆ. ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ಸೇನೆಯ ಅಭಿವೃದ್ಧಿಗೆ ಬಳಸುತ್ತಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ನಿವೃತ್ತ ಯೋಧ ದಿವಾಕರ್ ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.
ಕಾರ್ಯಕ್ರಮದಲ್ಲಿ ತೊರೆಮಠದ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ, ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಬಿದರೆ, ಕರ್ನಲ್ ಅಭಿಲಾಶ್, ಪ್ರಾಂಶುಪಾಲ ಡಾ.ಪ್ರಸನ್ನ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಪಟೇಲ್ ಕೆಂಪೇಗೌಡ, ಮಡಿವಾಳ ಸಮಾಜದ ಅಧ್ಯಕ್ಷ ಜಿ.ಆರ್.ಪರಮೇಶ್ವರಪ್ಪ, ಪಪಂ ಮಾಜಿ ಸದಸ್ಯರಾದ ಜಿ.ಎಸ್.ರೇಣುಕಾ ಪ್ರಸಾದ್, ಮಹಮದ್ ಸಾದಿಕ್, ಸಿ.ಮೋಹನ್, ಕುಮಾರ್, ಮಂಗಳಮ್ಮ, ಶ್ವೇತಾ, ಮಮತಾ ಇತರರು ಇದ್ದರು.





