ಪ್ರಸ್ತುತ ಒತ್ತಡದ ಬದುಕಿನಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಉತ್ತಮ ಸಾಧನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ದೈಹಿಕ ಕಸರತ್ತು ಎಂಬುದು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ. ಏಕಾಗ್ರತೆ ಸಾಧಿಸುವ ಮನಸ್ಥಿತಿ ಕ್ರೀಡೆಯಿಂದ ಸಾಧ್ಯ ಎಂದರು.
ಶಿಕ್ಷಣ ಇಲಾಖೆ ಮಕ್ಕಳಲ್ಲಿ ಪ್ರತಿಭೆ ಹೊರ ತರಲು ಕ್ರೀಡಾಕೂಟ ಪ್ರತಿ ವರ್ಷ ನಡೆಸುತ್ತಿದೆ. ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟ ನಡೆಸಿ ಜಿಲ್ಲಾ ಮಾತು ರಾಜ್ಯ ಮಟ್ಟಕ್ಕೆ ಕಳುಹಿಸುವ ಮೂಲಕ ಗ್ರಾಮೀಣ ಮಕ್ಕಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿ ಮಾಡಗುತ್ತಿದೆ ಎಂದರು.
ಪಪಂ ಸದಸ್ಯ ಮಹಮದ್ ಸಾದಿಕ್ ಮಾತನಾಡಿ ಮಕ್ಕಳಿಂದ ಕ್ರೀಡೆ ಆಸಕ್ತಿ ಬೆಳೆಸಿದರೆ ರೋಗಗಳಿಂದ ಮುಕ್ತರಾಗಿ ಸದೃಢ ದೇಹ ಕಾಪಾಡಬಹುದು. ಗ್ರಾಮೀಣ ಸೊಗಡಿನ ಆಟಗಳಲ್ಲಿ ಕಬಡ್ಡಿ ಕೊಕ್ಕೋ ದೈಹಿಕ ಕಸರತ್ತು ನೀಡುತ್ತದೆ. ಜೊತೆಗೆ ಚುರುಕಿನ ಬುದ್ಧಿ ದೊರೆಯುತ್ತದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತಂದು ಸೂಕ್ತ ತರಬೇತಿ ನೀಡಿದರೆ ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಹೊಮ್ಮುತ್ತಾರೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಹಾಲು ಮೊಟ್ಟೆ ಜೊತೆಗೆ ಬಿಸಿಯೂಟ ನೀಡಿ ಮಕ್ಕಳ ದೈಹಿಕ ಶಕ್ತಿ ಹೆಚ್ಚಿಸಿ ಕ್ರೀಡೆಯಲ್ಲಿ ತೊಡಗಿಸಿ ಉತ್ತಮ ಕ್ರೀಡಾಪಟುಗಳ ತಯಾರಿ ಮಾಡುತ್ತೇವೆ. ಮಕ್ಕಳ ಆಸಕ್ತಿ ಅರಿತು ಕ್ರೀಡೆಯಲ್ಲಿ ತರಬೇತಿ ನೀಡಿದರೆ ನಮ್ಮ ದೇಶದ ಅಸ್ತಿಯಾಗಿ ಮಕ್ಕಳು ಬೆಳೆಯುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾಜ್ಯೋತಿ ಬೆಳಗಿಸಲಾಯಿತು. ವೇದಿಕೆಯಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಶಿಕ್ಷಕರ ಸಂಘದ ಬಿ.ಸಿ.ಶಿವಣ್ಣ, ಮಂಜುನಾಥ್, ಚನ್ನಬಸವಯ್ಯ, ದಯಾನಂದ್, ಸುರೇಶಯ್ಯ, ನಿಜಾನಂದಮೂರ್ತಿ, ಕುಮಾರಸ್ವಾಮಿ ಇನ್ನಿತರರು ಇದ್ದರು.





