ಪರಿಸರ ಸಂರಕ್ಷಣೆ ಜತೆಗೆ ಹಸಿರೇ ಉಸಿರೆಂಬ ವ್ಯಾಖ್ಯಾನವನ್ನು ಮುಂದಿನ ಪೀಳಿಗೆಗೆ ಅರ್ಥಗರ್ಭಿತವಾಗಿ ತಿಳಿಸುವುದು ಪ್ರಸ್ತುತ ಸಮುದಾಯ ಜವಾಬ್ದಾರಿಯಾಗಿದೆ ಎಂದು ಗುಬ್ಬಿ ತಹಶೀಲ್ದಾರ್ ಬಿ ಆರತಿ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಹೊರ ವಲಯದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
“ಜಾಗತೀಕರಣಕ್ಕೆ ತಕ್ಕಂತೆ ಕಲುಷಿತ ವಾತಾವರಣ ಎಲ್ಲಡೆ ಹರಡಿದೆ. ನೀರು ಗಾಳಿ ಸೇರಿದಂತೆ ಆಹಾರ ವಸ್ತುಗಳೂ ಕೂಡ ಕಲಬೆರಕೆಯಾಗಿವೆ. ಈ ನಿಟ್ಟಿನಲ್ಲಿ ಸ್ವಚ್ಛ ವಾತಾವರಣ, ಸ್ವಚ್ಛಗಾಳಿ, ನೀರು, ಆಹಾರ ಮುಂದಿನ ಜನರಿಗೆ ಉಳಿಸುವ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
“ಜಾಗತಿಕ ಉಷ್ಣಾಂಶ ಇಳಿಸಲು ಹಸಿರು ಕ್ರಾಂತಿ ಅತ್ಯಗತ್ಯ. ಜಾಗತಿಕ ಉಷ್ಣಾಂಶ ಕನಿಷ್ಟ ಮಟ್ಟಕ್ಕೆ ಏರಿ ಈಗಾಗಲೇ ಬಿಸಿಲಿನ ಝಳ ಅನುಭವಿಸಿದ್ದೇವೆ. ಈ ಬಾರಿ ಬೇಸಿಗೆ ಸಾಕಷ್ಟು ಅನುಭವ ನೀಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಮೂರು ಸಸಿ ನೆಟ್ಟು ಪೋಷಿಸುವ ಕೆಲಸ ಜವಾಬ್ದಾರಿಯಿಂದ ಮಾಡಬೇಕಿದೆ. ಸರ್ಕಾರ ಕೂಡ ಅರಣ್ಯ ಇಲಾಖೆ ಮೂಲಕ ಕೋಟ್ಯಂತರ ಸಸಿ ನೆಡುವ ಕಾರ್ಯಕ್ರಮ ಮಾಡಿದೆ. ಆದರೆ ಸಸಿಗಳನ್ನು ಪೋಷಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಜತೆ ಸಮುದಾಯವೂ ಸಹಕಾರ ನೀಡಬೇಕು” ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಮಾತನಾಡಿ, “ದಿನ ಕಳೆದಂತೆ ಅರಣ್ಯ ಸಂಪತ್ತು ಕ್ಷೀಣಿಸಿದೆ. ಶೇ.33ರಷ್ಟು ಇರಬೇಕಾದ ಅರಣ್ಯ ಶೇಕಡಾ 18 ಕ್ಕೆ ಇಳಿದಿದೆ. ಈ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಇಲಾಖೆ ಪ್ರತಿ ವರ್ಷ ವಿವಿಧ ಸಸಿಗಳು ಬೆಳೆಸಿ ಸರ್ಕಾರಿ ಸ್ಥಳದಲ್ಲಿ ನೆಡಲಾಗುತ್ತಿದೆ. ಈ ಪೈಕಿ ಸಾಂಪ್ರದಾಯಿಕ ಸಸಿಗಳು, ಹಣ್ಣಿನ ಗಿಡಗಳಿಗೆ ಒತ್ತು ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಹಸಿರು ಕ್ರಾಂತಿಗೆ ಮುಂದಾದ ವೀಕಲಚೇತನ ತಂಡ; ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಈ ವೇಳೆ ಉದ್ಯಾನದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ, ಮನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್, ಉಪವಲಯ ಅರಣ್ಯಾಧಿಕಾರಿಗಳಾದ ಸಿದ್ದಲಿಂಗಮೂರ್ತಿ, ದರ್ಶನ್, ಶಿವಪ್ರಸಾದ್, ತಿಮ್ಮರಾಜು, ಜಮೀರ್, ಗಸ್ತು ಅರಣ್ಯ ಪಾಲಕ ಮುನಿಯೋಜಿರಾವ್, ಸಿಬ್ಬಂದಿಗಳಾದ ರಘು, ಕಾವ್ಯ, ಶಂಕರ್, ಸಂತೋಷ್ ಸೇರಿದಂತೆ ಇತರರು ಇದ್ದರು.





