ಕನ್ನಡ ರಾಜ್ಯೋತ್ಸವ ಆಚರಣೆಗೆ ಮೆರೆಗು ತರುವ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅರ್ಥಪೂರ್ಣ ಆಚರಣೆ ಮಾಡಲು ತಾಲ್ಲೂಕು ಆಡಳಿತ ಸಜ್ಜಾಗಿದೆ ಎಂದು ತಹಶೀಲ್ದಾರ್ ಆರತಿ.ಬಿ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಯಿಷಾ ತಾಸೀನ್ ಅವರ ನೇತೃತ್ವವಹಿಸಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ನಡೆದ ಸಿದ್ಧತೆ ಕುರಿತ ಚರ್ಚೆ ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ನಡೆಸುವ ರಾಜ್ಯೋತ್ಸವಕ್ಕೆ ಈ ಬಾರಿ ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ ಮೂಲಕ ಪಟ್ಟಣದಲ್ಲಿ ಭಾಷಾಭಿಮಾನ ಮೂಡಿಸಿ ಜೊತೆಗೆ ಡಿಸೆಂಬರ್ ಮಾಹೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ವೈಭವವಾಗಿ ಆಚರಿಸಿ ನಮ್ಮ ಮಾತೃಭಾಷೆ ಅಭಿಮಾನ ವ್ಯಕ್ತ ಪಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜನೆ ಕುರಿತು ಚರ್ಚೆ ಮಾಡಲಾಯಿತು. ಪ್ರತಿ ವರ್ಷದಂತೆ ಬೃಹತ್ ವೇದಿಕೆ ನಿರ್ಮಾಣ ಮಾಡಿ ಶಾಸಕರ ಅಧ್ಯಕ್ಷತೆಯಲ್ಲಿ ಅರ್ಥಗರ್ಭಿತವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ 9 ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು ಶಿಕ್ಷಣ, ಕೃಷಿ, ಪರಿಸರ, ಕ್ರೀಡೆ, ವೈದ್ಯಕೀಯ, ರಂಗಭೂಮಿ, ಸಾಹಿತ್ಯ, ಜನಪದ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರ ಆಯ್ಕೆಗೆ ತಾಪಂ ಇಓ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಲಾಯಿತು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪಹಾರ ವ್ಯವಸ್ಥೆ ಸಹ ಮಾಡಲು ಕೆಲ ಇಲಾಖೆಗೆ ವಹಿಸಲಾಯಿತು. ಕನ್ನಡದ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಉತ್ತಮ ವಾಗ್ಮಿಗಳ ಆಯ್ಕೆಗೆ ಕೆಲ ಹೆಸರು ಪ್ರಸ್ತಾಪ ಮಾಡಲಾಯಿತು. ಅಂತಿಮ ನಿರ್ಧಾರ ಆಚರಣಾ ಸಮಿತಿ ತೀರ್ಮಾನಿಸಲಿದೆ. ಈ ಜೊತೆಗೆ ಎಲ್ಲಾ ಇಲಾಖೆಯ ಕಚೇರಿಗೆ ವಿದ್ಯುದ್ದೀಪಾಲಂಕರ ಮಾಡಲು ಸೂಚಿಸಲಾಯಿತು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಣ, ಕುಡಿಯುವ ನೀರು ಪೂರೈಕೆ, ಮೈದಾನ ಸ್ವಚ್ಚತೆ ಹಾಗೂ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಆಯಾ ಇಲಾಖೆಗೆ ಸೂಚಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್ ಮಾತನಾಡಿ ಡಿಸೆಂಬರ್ 22 ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗುಬ್ಬಿ ಪಟ್ಟಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕರು ಸಮ್ಮೇಳನ ನಡೆಸಲು ಒಪ್ಪಿಗೆ ಸೂಚಿಸಿದ ಹಿನ್ನಲೆ ಪೂರ್ವಭಾವಿ ಸಭೆಯನ್ನು ಶೀಘ್ರದಲ್ಲಿ ಆಯೋಜಿಸಲಾಗುವುದು. ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಮಹಮದ್ ಸಾದಿಕ್, ಮುಖಂಡರಾದ ಸಲೀಂಪಾಷ, ಸಿ.ಆರ್.ಶಂಕರ್ ಕುಮಾರ್, ಜಿ.ಆರ್.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಪ್ರಸನ್ನ, ತಾಪಂ ಸಹಾಯಕ ನಿರ್ದೇಶಕ ಜಗನ್ನಾಥ್ ಗೌಡ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಇದ್ದರು.





