ಬಿಜೆಪಿ ರಾಜ್ಯಾಧ್ಯಕ್ಷರ ಆದೇಶದಂತೆ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಪದವೀಧರರಲ್ಲಿ ಜಾಗೃತಿ ಮೂಡಿಸಿ ಮತದಾರ ನೋಂದಣಿ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ಆಗ್ನೇಯ ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರ ನೋಂದಣಿ ಮಾಡಿಸುವ ಗುರಿ ಹೊಂದಿದ್ದೇವೆ ಎಂದು ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು 600 ಕಿಮೀ ವ್ಯಾಪ್ತಿಯ ಬೌಗೋಳಿಕ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 34 ವಿಧಾನಸಭಾ ಕ್ಷೇತ್ರ, 36 ತಾಲ್ಲೂಕು ಒಳಗೊಂಡಿದೆ. 2020 ರಲ್ಲಿ ನಡೆದ ಈ ಚುನಾವಣೆಯಲ್ಲಿ 1.15 ಲಕ್ಷ ಮತದಾರರು ಇದ್ದರು. 75 ಸಾವಿರ ಮತದಾನ ನಡೆದು ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಅವರು 39 ಸಾವಿರಕ್ಕೂ ಅಧಿಕ ಬಹುಮತ ಪಡೆದು ಗೆಲುವು ಸಾಧಿಸಿದ್ದರು. ಇದೇ ಸಮಯ ನಾನು ಖುದ್ದು ಕ್ಷೇತ್ರ ಪ್ರವಾಸ ನಡೆಸಿ 20 ಸಾವಿರ ಹೊಸ ಮತದಾರರ ನೋಂದಣಿ ಮಾಡಿಸಿದ್ದೆವು. ಆದರೆ ಈ ಬಾರಿ ಒಂದು ಲಕ್ಷ ಮತದಾರರ ಸೇರ್ಪಡೆಗೆ ಸತತ ಪ್ರಯತ್ನ ಮಾಡುತ್ತೇವೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ಗದಗ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಗುಲ್ಬರ್ಗ ಈಶಾನ್ಯ ಶಿಕ್ಷಕರ ಕ್ಷೇತ್ರ ಸಿದ್ಧವಿದೆ. ಇಲ್ಲಿನ ಉಸ್ತುವಾರಿಗೆ ಬಿಜೆಪಿ ಸಮಿತಿ ರಚಿಸಿದೆ. ಸಿ.ಟಿ.ರವಿ, ಆರ್.ಅಶೋಕ್, ನಳಿನಕುಮಾರ ಕಟೀಲು, ಗೋವಿಂದ ಕಾರಜೋಳ ಹಾಗೂ ಶ್ರೀರಾಮಲು ಅವರ ತಂಡ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಕೋಲಾರ ಜಿಲ್ಲೆಯ ಪ್ರವಾಸ ಮುಗಿಸಿ ತುಮಕೂರು ಜಿಲ್ಲೆಯಲ್ಲಿ ಸಿದ್ದಗಂಗಾ ಮಠ ಪೂಜೆ ಸಲ್ಲಿಸಿ ಪ್ರವಾಸ ಆರಂಭಿಸಿದ್ದೇವೆ. ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪದವೀಧರರನ್ನು ಜಾಗೃತಿಗೊಳಿಸಿ ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಪದವಿ ಮುಗಿಸಿ ಗ್ರಾಮೀಣ ಭಾಗದಲ್ಲಿ ಕೃಷಿಕ ಕೆಲಸ ಮಾಡುವ ಬಹಳ ಮಂದಿ ಈ ಚುನಾವಣೆ ಬಗ್ಗೆ ಆಸಕ್ತಿ ತೋರುವುದಿಲ್ಲ. ಆದ್ದರಿಂದ ಬಿಜೆಪಿ ಅಂತಹ ಪದವೀಧರರನ್ನು ಭೇಟಿ ಮಾಡಿ ನಮ್ಮ ಜವಾಬ್ದಾರಿ ಬಗ್ಗೆ ತಿಳಿಸಿ ನೋಂದಣಿ ಮಾಡಿಸಲು ಸಜ್ಜಾಗಿದೆ. ಗುಬ್ಬಿ ತಾಲ್ಲೂಕಿನಲ್ಲಿ ಸಹ ನೂರಾರು ಮಂದಿ ಮತದಾರರನ್ನು ಹುಡುಕುವ ಕೆಲಸ ಆರಂಭಿಸಿದ್ದೇವೆ ಎಂದ ಅವರು ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಈ ಆಗ್ನೇಯ ಪದವೀಧರ ಕ್ಷೇತ್ರ ಪ್ರವಾಸ ಮಾಡುತ್ತಿರುವ ರಾಜ್ಯ ತಂಡಕ್ಕೆ ಕಾರ್ಯಕರ್ತರು ಸಹಕಾರ ನೀಡಿಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಚುನಾವಣೆಗೆ ಮುನ್ನವೇ ಓಡಾಟ ನಡೆಸುವ ಬಿಜೆಪಿ ಎಂದಿಗೂ ಪದವೀಧರರ ಮನಸ್ಸು ಗೆದ್ದಿದೆ. ಈ ಹಿಂದೆ ನಾಲ್ಕೈದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಈಚೆಗೆ ಕಾಂಗ್ರೆಸ್ ಪೈಪೋಟಿಗೆ ಬರುತ್ತಿದೆ. ಆದರೆ ಸುಶಿಕ್ಷಿತರು ಬಿಜೆಪಿಗೆ ಒಲವು ತೋರುತ್ತಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಬಿಜೆಪಿಗೆ ಮತಯಾಚನೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪದವೀಧರ ಕ್ಷೇತ್ರದ ನೋಂದಣಿ ಅರ್ಜಿಯನ್ನು ಹಂಚಲಾಯಿತು.
ಸಭೆಯಲ್ಲಿ ಕಾನೂನು ಪ್ರಕೋಷ್ಠದ ವಕೀಲರಾದ ವಿಶ್ವನಾಥ್, ಸುಮನಾ, ಶಿವಪ್ರಸಾದ್, ಶಶಿಧರ್, ಎಚ್.ಎನ್.ಲೋಕೇಶ್, ಬಿ.ಲೋಕೇಶ್ ಇತರರು ಇದ್ದರು.





