ಅಡಕೆ ಗೊನೆ ಕೊಯ್ಲು ಸಮಯವನ್ನು ಅರಿತ ಕಳ್ಳರು ಯಾವ ದಿನ ಅಡಕೆ ಗೊನೆ ಕೊಯ್ಲು ಮಾಡಿದ ರಾತ್ರಿಯೇ ಚಾಣಾಕ್ಷತನ ಪ್ರದರ್ಶಿಸಿ ತೋಟದಲ್ಲಿ ಗೊನೆ ಕೀಳುತ್ತಾರೆ. ತೋಟದ ಮಾಲೀಕರಿಗೆ ಗೊಂದಲ ಮೂಡಿಸುವ ರೀತಿ ಕದಿಯುವ ಕೈ ಚಳಕ ತೋರುವ ಕಳ್ಳರ ಹಾವಳಿ ತಪ್ಪಿಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಮ್ಮನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮದಲ್ಲಿ ಅಡಕೆ ಕದಿಯುವ ಚಾಣಾಕ್ಷತನ ತೋರಿದ್ದಾರೆ. ರೈತರು ಅಡಕೆ ಗೊನೆ ಇಳಿಸಿದ್ದ ರಾತ್ರಿಯೇ ಉಳಿದ ಗಿಡದಲ್ಲಿ ಗೊನೆ ಕೊಯ್ಲು ಮಾಡುತ್ತಾರೆ. ಈ ಬಗ್ಗೆ ರೈತರಿಗೂ ಲೆಕ್ಕ ಸಿಗದಂತೆ ಕಳ್ಳತನ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕ್ವಿಂಟಾಲ್ ಅಡಕೆ 55 ಸಾವಿರ ರೂ ದಾಟುತ್ತಿದೆ. ಅಡಕೆ ಸೀಸನ್ ಸಮಯದಲ್ಲಿ ರೈತರು ತಮ್ಮ ತೋಟದಲ್ಲಿ ಅಡಕೆ ಗೊನೆ ಕೊಯ್ಲು ಮಾಡುವ ಆತುರದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿದ ರಾತ್ರಿಯೇ ಕಳ್ಳರು ತಮ್ಮ ಕೈ ಚಳಕ ತೋರುತ್ತಾರೆ. ಕೆಲವೇ ಗಂಟೆಗಳಲ್ಲಿ ಕದ್ದು ಸಾಗಿಸುವ ಕಳ್ಳರ ಹಾವಳಿ ದಿನ ಕಳೆದಂತೆ ಮಿತಿ ಮೀರುತ್ತಿದೆ ಎಂದು ತಿಳಿಸಿದರು.
ಹೊನ್ನವಳ್ಳಿ, ಜೈನಿಗರಹಳ್ಳಿ, ಅಮ್ಮನಘಟ್ಟ, ಗೌರಿಪುರ, ಭೂತಪ್ಪನ ಹಟ್ಟಿ, ಬಿದರೆಗಾವಲ್ ವ್ಯಾಪ್ತಿಯಲ್ಲಿ ಈಗಾಗಲೇ ಅಡಕೆ ಕಳುವು ಪ್ರಕರಣ ಬೆಳಕಿಗೆ ಬಂದಿದೆ. ಬೆಳಿಗ್ಗೆ ಸೂಕ್ಷ್ಮವಾಗಿ ಗಮನಿಸುವ ರೈತರಿಗೆ ಮಾತ್ರ ಕಳ್ಳತನ ತಿಳಿಯುತ್ತಿದೆ. ತೋಟಯೊಂದರಲ್ಲಿ ಒಂದು ದಿನದಲ್ಲಿ ಕೊಯ್ಲು ನಡೆದ ಸಾಲಿನಲ್ಲೇ ಮುಂದುವರೆಯುವ ಕಳ್ಳರು ಅರಿವಿಗೆ ಬಾರದಂತೆ ಸಾವಿರಾರು ಬೆಲೆ ಬಾಳುವ ಅಡಕೆ ಗೊನೆ ಕದ್ದು ಸಾಗಿಸುತ್ತಾರೆ. ಕಾವಲು ಕಾಯುವ ರೈತರ ಕೈಗೆ ಕಳ್ಳರು ಸಿಕ್ಕರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಎಚ್ಚೆತ್ತು ಪ್ರಕರಣ ಬೇದಿಸಿ ರೈತರನ್ನು ಉಳಿಸಬೇಕು ಎಂದು ಸಲಹೆ ನೀಡಿದರು.





