ತಮ್ಮ ಜಮೀನಿಗೆ ಹಸು ನುಗ್ಗಿದ ಕಾರಣಕ್ಕಾಗಿ ಜಮೀನಿನ ಮಾಲೀಕರು ವೃದ್ಧೆಯನ್ನು ಕಂಬಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಕಣ್ಣಮ್ಮ ಎಂದು ಗುರುತಿಸಲಾಗಿದೆ.
ಕಣ್ಣಮ್ಮ ಅವರು ತಮ್ಮ ಹಸುವನ್ನು ಮೇಯಿಸಲು ಜಮೀನಿಗೆ ಕರೆದೊಯ್ದಿದ್ದರು. ಈವೇಳೆ ಹಸು ಬೇರೆಯವರ ಜಮೀನಿಗೆ ನುಗ್ಗಿ ಬೆಳಡಯನ್ನು ಮೇಯ್ದಿದೆ. ಆ ಕಾರಣಕ್ಕೆ ಕುಪಿತಗೊಂಡ ಜಮೀನು ಮಾಲೀಕರು ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಸುಮಾರು 2 ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ.
ವೃದ್ಧೆ ಮೇಲೆ ಹಲ್ಲೆ ಮಾಡಿದ ಆರೋಪಿ ಅಂಗಮುತ್ತು ಸೇರಿ ಮೂವರನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




