ದಲಿತ ಎಂದರೆ ಜಾತಿಯಲ್ಲ. ಅದು ಒಂದು ಶೋಷಿತ ವರ್ಗದವರು ಎಂದರ್ಥ. ಬಾಬಾಸಾಹೇಬರನ್ನು ಆಚರಣೆ ಮಾಡುವುದಲ್ಲ ಅನುಸರಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಬಿಪಿನ್ ನಾಗರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಾಸನ ನಗರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಗುಡ್ಡೆನಹಳ್ಳಿ ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳ ಸಹಯೋಗ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
“ಪ್ರಸ್ತುತ ಯುವಜನರೆಲ್ಲರೂ ಬುದ್ಧನ ಮಾರ್ಗದಲ್ಲಿ ನಡೆಯರಿ. ಬಾಬಾಸಾಹೇಬರನ್ನು ಒಂದು ವರ್ಗಕ್ಕೆ ಸೀಮಿತ ಮಾಡಬಾರದು. ಅಂಬೇಡ್ಕರ್ ಅವರ ಪ್ರಬುದ್ಧ ಭಾರತ ಕಟ್ಟಲು ನಾವೆಲ್ಲರೂ ಪಣ ತೊಡಬೇಕು” ಎಂದು ಕಿವಿಮಾತು ಹೇಳಿದರು.
“ಮನುವಾದವನ್ನು ಮೆಟ್ಟಿನಿಲ್ಲುವ ಶಕ್ತಿ ಇರುವುದು ಅಂಬೇಡ್ಕರ್ ವಾದಕ್ಕೆ ಮಾತ್ರ. ಹಾಗಾಗಿ ಅಂಬೇಡ್ಕರ್ ಅವರ ಮೆರವಣಿಗೆ ಬೇಡ, ಬದಲಿಗೆ ಅವರ ಬರವಣಿಗೆ ಬೇಕು. ಅದಕ್ಕಾಗಿ ತಾವೆಲ್ಲರೂ ಬುದ್ಧ ದಮ್ಮವನ್ನು ಅನುಸರಿಸಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ರಾಜ್ಯ ಪ್ರದಾನ ಸಂಚಾಲಕರೂ ಆದ ಮಾವಳ್ಳಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಂವಿಧಾನದ ಬಗ್ಗೆ ಕಟುವಾಗಿ ಮಾತನಾಡುವವರ ವಿರುದ್ಧ ಬಹಳ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಬದುಕಬೇಕಿದೆ. ಸಂವಿಧಾನ ಮತ್ತು ಮನುಸ್ಮೃತಿ ನಡುವೆ ನೆಡೆಯುತ್ತಿರುವ ಯುದ್ಧವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಸಲಹೆ ನೀಡಿದರು.
“ಮನು ಧರ್ಮ ಅತ್ಯಂತ ಕಠೋರವಾಗಿ ನಮ್ಮೊಳಗೇ ಪ್ರವೇಶ ಮಾಡುತ್ತ ಬಂದಿದೆ. ಹಾಗಾಗಿ ನಾವೆಲ್ಲರೂ ಜಾಗೃತರಾಗಿ ಬದುಕಬೇಕಿದೆ. ಜತೆಗೆ ಬಾಬಾ ಸಾಹೇಬರ ಆಶಯವನ್ನು ನಾವೆಲ್ಲರೂ ಈಡೇರಿಸಿ ಮುನ್ನೆಡೆಯಬೇಕಿದೆ” ಎಂದು ಕರೆ ನೀಡಿದರು.
ಅರಕಲಗೂಡಿನ ಪ್ರಥಮ ದರ್ಜೆ ಕಾಲೇಜು ಪ್ರಾಶುಪಾಲ ಮಹೇಶ್ ಎಂ ಮುಖ್ಯ ಅತಿಥಿಗಳಾಗಿ ಮಾತನಾಡಿ, “ಅಂಬೇಡ್ಕರ್ ಅವರು ಒಬ್ಬ ಶ್ರೇಷ್ಠ ಉದಾರವಾದಿ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ವೈಜ್ಞಾನಿಕ ಮನೋಭಾವನೆಯಿಂದ ಬದುಕಬೇಕು” ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಹರೀಶ್ ಅತ್ನಿ ಮಾತನಾಡಿ, “ವಿದ್ಯಾರ್ಥಿಗಳು ದೇಶದ ಯುವಪ್ರತಿಭೆಗಳು. ಇಡೀ ಪ್ರಪಂಚದಲ್ಲಿ ಅತಿ ಅಭಿಮಾನಿಗಳು ಇದ್ದರೆ ಅದು ಅಂಬೇಡ್ಕರ್ ಅವರು ಮಾತ್ರ. ಹಾಗಾಗಿ ಅಂಬೇಡ್ಕರ್ ಅವರನ್ನು ಆಚರಿಸದೆ ಅನುಸರಿಸಬೇಕು” ಎಂದು ತಿಳಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಂಬೇಡ್ಕರ್ ಅಭಿಮಾನಿಗಳು ಅನುಯಾಯಿಗಳಾಗಿ ವಿಚಾರವಂತರಾಗೋಣ” ಎಂದು ಕರೆ ನೀಡಿದರು.
ಇದನ್ನೂ ಓದಿದ್ದೀರಾ? ಮನೆಮನೆಗೆ ಪರಿಶಿಷ್ಟ ಜಾತಿ ಸಮೀಕ್ಷೆಯ ಸ್ಟಿಕ್ಕರ್: ನಾಗರಿಕರಿಗೆ ಸ್ಪಷ್ಟೀಕರಣ ನೀಡಿದ ಬಿಬಿಎಂಪಿ
ಕಾರ್ಯಕ್ರಮದಲ್ಲಿ ಉಪನಿರ್ದೇಶಕ ದೂದ್ ಪೀರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ದುಮ್ಮಿ ಕೃಷ್ಣ, ಈರೇಶ್ ಹಿರೇಹಳ್ಳಿ, ನಿಲಯ ಪಾಲಕರಾದ ವೆಂಕಟೇಶ್, ದೇವೇಗೌಡ, ಆನಂದ್ ಪ್ರಕಾಶ್, ಶಿವಾನಂದ್ ಬಿರಾದಾರ್, ಯೋಗರಾಜ್ ಹಾಗೂ ನಿಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.





