ಹಾಸನದಲ್ಲಿ ನಡೆದಿರುವ ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ಸಂತ್ರಸ್ತೆಯರಿಗೆ ಧೈರ್ಯ ತುಂಬಲು ನಾವಿಲ್ಲಿದ್ದೇವೆ. ರೇವಣ್ಣ ಕುಟುಂಬವು ರಾಜಕೀಯ, ಹಣ ಬಲದಿಂದ ನಡೆಸುವ ಅವ್ಯವಹಾರಗಳಿಗೆ, ದರ್ಪಕ್ಕೆ ಇನ್ನು ಉಳಿಗಾಲವಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ‘ಬಲತ್ಕಾರಿಗಳ ಬಚಾವು’ ಮಾಡುವ ಸರ್ಕಾರವಾಗಿದೆ. ಆ ಸರ್ಕಾರವನ್ನು ಚುನಾವಣೆಯಲ್ಲಿ ಕೆಳಗಿಸಬೇಕು ಎಂದು ಮಹಿಳಾ ಹೋರಾಟಗಾರ್ತಿ ಸುಭಾಷಿಣಿ ಅಲಿ ಹೇಳಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಬಂಧನಕ್ಕೆ ಆಗ್ರಹಿಸಿ ನಡೆದ ಬೃಹತ್ ಹೋರಾಟದಲ್ಲಿ ಅವರು ಮಾತನಾಡಿದರು. “ಶತಮಾನಗಳಿಂದಲೂ ಮಹಿಳಾ ಸಂಘಟನೆ ಸಂಘರ್ಷ ಮಾಡುತ್ತಿದೆ. ಸಂವಿಧಾನ ಜಾರಿಯಾದ ನಂತರವೂ ದೇಶದ ನಾನಾ ಭಾಗಗಳಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಭಾರತದಲ್ಲಿ ಸಾವಂತವಾದ, ಪುರಷವಾದ ಬೇರೂರಿದೆ. ಜೊತೆಗೆ, ಬಂಡವಾಳ ಮತ್ತು ಮತೀಯವಾದವೂ ಸೇರಿಕೊಂಡಿದೆ. ಇವುಗಳನ್ನು ಒಡೆಯದಿದ್ದರೆ, ನಮಗಾರಿಗೂ ಉಳಿವಿಲ್ಲ” ಎಂದರು.
“ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ರೇವಣ್ಣನನ್ನು ಬಂಧಿಸಿ, ಜೈಲಿಗಟ್ಟಬೇಕು. ಅವರಿಗೆ ‘ಓನ್ಲೀ ಜೈಲ್ – ನೋ ಬೈಲ್’ (ಜೈಲು ಮಾತ್ರ – ಜಾಮೀನು ಇಲ್ಲ) ಆಗಬೇಕು. ಇದೇ ನಮ್ಮ ಪ್ರಮುಖ ಒತ್ತಾಯ. ರೇವಣ್ಣ ಕುಟುಂಬ ತನಿಖೆಯಲ್ಲಿ ತಮ್ಮ ಪ್ರಭಾವವನ್ನು ಬಳಸಬಹುದು. ಕರ್ನಾಟಕ ಸರ್ಕಾರಕ್ಕೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು. ಅವರನ್ನು ಜೈಲಿಗಟ್ಟಬೇಕು” ಎಂದು ಒತ್ತಾಯಿಸಿದರು.
“ಸಂತ್ರಸ್ತ ಮಹಿಳೆಯರೊಂದಿಗೆ ನಾವಿದ್ದೇವೆ. ಅವರೊಂದಿಗೆ ಕೊನೆವರೆಗೂ ಹೋರಾಡುತ್ತೇವೆ. ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಯುತ್ತದೆ. ಸಂತ್ರಸ್ತೆಯರು ಎದೆಗುಂದಬೇಕಿಲ್ಲ” ಎಂದು ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಮಾತನಾಡಿದರು.
“ಸರ್ಕಾರಿ ಅಧಿಕಾರಿಗಳು, ಕಾರ್ಯಕರ್ತರು ಅಸಹಾಯಕ ಹೆಣ್ನುಮಕ್ಕಳು ಸಣ್ಣ ಪುಟ್ಟ ಸಹಾಯ ಕೇಳಲು ಬಂದಾಗ ಅವರ ಮೇಲೆ ರೇವಣ್ಣ ಮತ್ತು ಆತನ ಪುತ್ರ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಪರಿಹಾರ ನೀಡಬೇಕು. ಆಪ್ತ ಸಮಾಲೋಚನೆ ಒದಗಿಸಬೇಕು” ಎಂದು ಆಗ್ರಹಿಸಿದರು.




