ಹಾಸನದ ಲೇಡೀಸ್ ಡ್ರೆಸ್ ಟೈಲರ್ ಹೇಮಾವತಿ ವಿರುದ್ಧ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಹಿಳೆಯರೆಲ್ಲ ಒಗ್ಗೂಡಿ ವಂಚಕಿ ಹೇಮಾವತಿಯನ್ನು ನಡುರಸ್ತೆಯಲ್ಲಿ ಹಿಡಿದು ಎಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಗ್ಗಾಮುಗ್ಗಾ ಥಳಿಸಿರುವ ಸಂತ್ರಸ್ತ ಮಹಿಳೆಯರ ವಿರುದ್ಧವೇ ಆರೋಪಿ ಟೈಲರ್ ದೂರು ದಾಖಲಿಸಿದ್ದು, ಸತ್ಯಾಂಶ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೇಮಾವತಿ ಎಂಬಾಕೆ ಹಾಸನದ ಅರಳಿಪೇಟೆ ರಸ್ತೆಯಲ್ಲಿದ್ದ ಜ್ಯೋತಿ ಡ್ರೆಸ್ ಮೇಕರ್ಸ್ ಅಂಗಡಿ ನಡೆಸುತ್ತಿದ್ದು, ಇದೀಗ ಟೈಲರಿಂಗ್ ಕೆಲಸದ ಹೆಸರಿನಲ್ಲಿ ಹಾಗೂ ವೈಯಕ್ತಿಕ ಪರಿಚಯದ ಆಧಾರದಲ್ಲಿ ಮಹಿಳೆಯರಿಂದ ಸಾಲ ಪಡೆದು 3 ಕೋಟಿ ರೂ.ಗಿಂತ ಅಧಿಕ ಹಣ ವಂಚನೆ ಮಾಡಿರುವುದಾಗಿ ಆರೋಪ ವ್ಯಕ್ತವಾಗಿದೆ.
ಹೇಮಾವತಿ ಅವರು ಡ್ರೆಸ್ ಸ್ಟಿಚಿಂಗ್ ಮಾಡಿಸಲು ಬರುತ್ತಿದ್ದ ಮಹಿಳೆಯರನ್ನೇ ತಮ್ಮ ಟಾರ್ಗೆಟ್ ಮಾಡಿದ್ದು, ಅವರ ಜತೆ ಬಣ್ಣಬಣ್ಣದ ಮಾತುಗಳನ್ನಾಡಿ ಒಬ್ಬೊಬ್ಬರಿಂದ ಲಕ್ಷಾಂತರ ರೂಪಾಯಿಯ ಸಾಲ ಪಡೆದು, ಹಣವನ್ನು ಮರಳಿ ಕೊಡದೆ ಮೋಸ ಮಾಡಿದ್ದಾರೆಂಬ ಆರೋಪ ಎದ್ದಿದೆ. ಕೆಲವರು ಚಿನ್ನಾಭರಣ ಅಡವಿಟ್ಟು ಹಣ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
“ಹೇಮಾವತಿ ತನ್ನ ಮಗಳನ್ನು ವಿದೇಶದಲ್ಲಿ ಎಂ ಎಸ್ ಓದಿಸಬೇಕೆಂದು ಹಾಗೂ ಕೋಟಿ ರೂಪಾಯಿಯ ಮನೆ ಖರೀದಿಸಿದ್ದೇನೆಂದು ಹೇಳಿ ಹಣ ಕೇಳುತ್ತಿದ್ದಳು. ಅಲ್ಲದೆ ತಾನು ಕೊಡಚಾದ್ರಿ ಚಿಟ್ಸ್ನಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಚೀಟಿ ಹಾಕಿದ್ದು, ಇದರಿಂದ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟು ಹಣ ಬರಲಿದೆ ಎಂದು ಹೇಳಿ ನಕಲಿ ಸ್ಲಿಪ್ ತೋರಿಸಿ ಪರಿಚಯದ ಮಹಿಳೆಯರ ಬಳಿ ಸಾಲ ಕೇಳುತ್ತಿದ್ದಳು. ಹೇಮಾವತಿಯ ಮಾತಿಗೆ ಮರುಳಾಗಿದ್ದ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಆಕೆಗೆ ನೀಡಿದ್ದರು. ಹತ್ತಾರು ವರ್ಷಗಳಿಂದ ಡ್ರೆಸ್ ಶಾಪ್ ನಡೆಸುತ್ತಿದ್ದ ಹೇಮಾವತಿಯು ತನ್ನ ನಿತ್ಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು, ಅವರಿಂದ 45 ಲಕ್ಷ ರೂಪಾಯಿವರೆಗೂ ಹಣ ಪಡೆದು ವಂಚನೆ ಮಾಡಿದ್ದಾಳೆ” ಎಂಬ ಆರೋಪದ ಹಿನ್ನೆಲೆಯಲ್ಲಿ ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹತ್ತಾರು ಮಹಿಳೆಯರು ಮೋಸ ಹೋಗಿರುವುದಾಗಿ ದೂರು ನೀಡಿದ್ದಾರೆ. ಒಟ್ಟು 3 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ. ಇತ್ತೀಚೆಗೆ ಸುದ್ದಿ ಬೆಳಕಿಗೆ ಬಂದ ನಂತರ, ನೊಂದ ಮಹಿಳೆಯರು ಹೇಮಾವತಿ ಅವರ ಟೈಲರಿಂಗ್ ಶಾಪ್ಗೆ ನುಗ್ಗಿ ಆಕ್ರೋಶ ಹೊರಹಾಕಿ, ನಡುರಸ್ತೆಯಲ್ಲಿ ಅವರನ್ನು ಹಿಡಿದು ಎಳೆದಾಡಿ, ಕೈಯಲ್ಲಿ ಹೊಡೆದು, ತಲೆ ಜುಟ್ಟು ಹಿಡಿದು ಹಲ್ಲೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಗುಡ್ಡಗಾಡು ಓಟ ಸ್ಪರ್ಧೆ ಪ್ರಥಮ ಸ್ಥಾನ ಪಡೆದ ಗುಬ್ಬಿ ಪ್ರತಿಭೆ ಜಿ.ಕವನ ಯಾದವ್
“ನಾವು ನಂಬಿಕೆಯಿಂದ ಹಣ ಕೊಟ್ಟಿದ್ದೇವೆ. ಆದರೆ ಒಂದು ರೂಪಾಯಿಯೂ ಮರಳಿ ಬಂದಿಲ್ಲ. ಇಂತಹ ವಂಚನೆಗಾರರನ್ನು ತಡೆಯಬೇಕು” ಎಂದು ಆಕ್ರೋಶ ಹೊರಹಾಕಿರುವ ಮಹಿಳೆಯರು ಈಗ ಹಣವನ್ನು ಮರಳಿ ಪಡೆಯಲು ಪರಿತಪಿಸುತ್ತಿದ್ದಾರೆ.
“ಸಂತ್ರಸ್ತ ಮಹಿಳೆಯರು ಹೇಮಾವತಿ ವಿರುದ್ಧ ಹಾಸನ ನಗರ ಠಾಣೆ ಮತ್ತು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ, ಧಮಕಿ ಮತ್ತು ಇತರ ರಾಜ್ಯ ಸಂಹಿತೆಗಳಡಿ ಕೇಸ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಹೇಮಾವತಿ ಅವರು ಈಗ ತಮ್ಮ ಮನೆ ಖಾಲಿ ಮಾಡಿಕೊಂಡು ತಪ್ಪಿಸಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.





