ಹಾಸನಾಂಬ ದೇವಿ ದರ್ಶನ ಮುಗಿಸಿ ವಾಪಸ್ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ನಡೆದಿದೆ.
ಮೃತರನ್ನು ಬೆಂಗಳೂರಿನ ಬಸವರಾಜು ಮತ್ತು ಅನುಶ್ರೀ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಛಾಯಾ (20) ಹಾಗೂ ಮತ್ತೊಬ್ಬ ಬೈಕ್ ಸವಾರ ಮೊಹಮ್ಮದ್ ಶಾಹಿದ್ ಅವರನ್ನು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಛಾಯಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಬಸವರಾಜು ತಮ್ಮ ಸ್ನೇಹಿತರಾದ ಅನುಶ್ರೀ ಮತ್ತು ಛಾಯಾ ಅವರೊಂದಿಗೆ ಯಮಹಾ ಬೈಕ್ನಲ್ಲಿ ಹಾಸನಾಂಬ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿ ಬೆಂಗಳೂರಿನತ್ತ ವಾಪಸ್ ಹೊರಟಿದ್ದ ವೇಳೆ, ಚನ್ನರಾಯಪಟ್ಟಣ ದಿಕ್ಕಿನಿಂದ ವೇಗವಾಗಿ ಬಂದ KA-13 P-1521 ನಂಬರಿನ ಇನೋವಾ ಕಾರು ಮೊದಲು ಆ್ಯಕ್ಟೀವ್ ಹೋಂಡಾಗೆ ಡಿಕ್ಕಿ ಹೊಡೆದು ನಂತರ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಭೀಕರ ಡಿಕ್ಕಿಯಿಂದ ಬೈಕ್ ಸವಾರರು ರಸ್ತೆ ಬದಿಯ ಅರಣ್ಯಕ್ಕೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಬಸವರಾಜು ಹಾಗೂ ಅನುಶ್ರೀ ಮೃತಪಟ್ಟಿದ್ದಾರೆ. ಕಾರು ಸಹ ಅರಣ್ಯಕ್ಕೆ ನುಗ್ಗಿದೆ.
ಇದನ್ನೂ ಓದಿ: ಹಾಸನ | ಹಾಸನಾಂಬ ದೇವಾಲಯ ಸ್ನೇಹ, ಪ್ರೀತಿ, ಸಹಬಾಳ್ವೆ ಬೆಸೆಯುವ ಸ್ಥಳ: ಬಾನು ಮುಷ್ತಾಕ್
ಘಟನೆ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.





