ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಜನರ ಬಳಿಯೇ ಓಡಾಡುತ್ತ ಯಾರಿಗೂ ಏನೂ ಮಾಡುವುದಿಲ್ಲವೆಂಬ ನಂಬಿಕೆ ಮೂಡಿಸಿದ್ದ ಆನೆ ಭೀಮ, ಈಗ ಗ್ರಾಮದೊಳಗೆ ನುಗ್ಗಿ ಸಿಕ್ಕ ಸಿಕ್ಕದ್ದನ್ನು ಪುಡಿಗಟ್ಟಿದೆ. ಅಲ್ಲದೆ ಮತ್ತೊಂದು ಮದವೇರಿದ ಕಾಡಾನೆ ಜತೆಗಿನ ಕಾಳಗದಲ್ಲಿ ಒಂದು ದಂತವನ್ನೇ ಮುರಿದುಕೊಂಡಿರುವ ಭಾನುವಾರ ಬೆಳಿಗ್ಗೆ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ವಿವಿಧೆಡೆ ಕಳೆದ ಐದಾರು ವರ್ಷಗಳಿಂದ ಸಂಚಾರ ಮಾಡುತ್ತ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಭಾನುವಾರ ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜತೆಗೆ ಓಡಾಡುತ್ತ ಭೀತಿ ಸೃಷ್ಟಿಸಿದೆ.
ಬೇಲೂರು ತಾಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಎರಡೂ ಆನೆಗಳು ಕಾಳಗ ಶುರುಮಾಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ರೋಷಾವೇಶದಿಂದ ಗ್ರಾಮದೊಳಗೆ ಎಂಟ್ರಿಯಾದ ಭೀಮ, ನೀರಿನ ಟ್ಯಾಂಕರ್ ಪುಡಿ ಮಾಡಿದ್ದು, ಎತ್ತಿನ ಗಾಡಿಯನ್ನು ಎತ್ತಿ ಬಿಸಾಡಿ ರೌದ್ರಾವತಾರ ತೋರಿದೆ. ಕಾಡಾನೆ ಗ್ರಾಮದೊಳಗೆ ಬಂದಾಗ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಹಿಂಬಾಲಿಸಿದರೂ ಕೂಡ ಪಟಾಕಿ ಇಲ್ಲದೆ ಆನೆಯನ್ನು ಓಡಿಸಲು ಪರದಾಡಬೇಕಾಯಿತು.
ಕ್ಯಾಫ್ಟನ್ ಜತೆಗೆ ಕಾದಾಡುವಾಗ ಭೀಮನ ಬಲಬಾಗದ ದಂತ ಸಂಪೂರ್ಣ ಮುರಿದುಬಿದ್ದಿದ್ದು, ಮತ್ತೊಂದು ಆನೆಗೂ ಗಾಯಗಳಾಗಿವೆ. ಸದ್ಯ ದಂತ ಮುರಿದುಕೊಂಡು ಕಾಫಿತೋಟದಲ್ಲಿ ಸೇರಿಕೊಂಡಿರುವ ಸಲಗ ನರಳಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೆನ್ನಟ್ಟಿ ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕನಕದಾಸ ಜಯಂತಿ
2023ರ ಆಗಸ್ಟ್ ತಿಂಗಳಲ್ಲಿ ಬೆನ್ನಿನ ಕೆಳಬಾಗದಲ್ಲಿ ದೊಡ್ಡ ಗಾಯವಾಗಿ ನರಳಾಡಿದ್ದ ಭೀಮನಿಗೆ ಸೆಪ್ಟೆಂಬರ್ 25ರಂದು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗದ ಕಾರಣ ಆಗಸ್ಟ್ 31ರಂದು ಭೀಮನಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ನಡೆಸುತ್ತಿದ್ದ ವೇಳೆ ಮದವೇರಿದ್ದ ಭೀಮ ಏಕಾಏಕಿ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು. ಬಳಿಕ ಗಾಯ ಗುಣಮುಖವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಓಡಾಡುತ್ತಿದ್ದ ಭೀಮ ಇದೀಗ ಮತ್ತೆ ಮದವೇರಿದ ಕಾರಣ ಊರೂರಿನಲ್ಲಿ ಅಡ್ಡಾಡುತ್ತ ದಾಂಧಲೆ ನಡೆಸುತ್ತಿದೆ.





