ರಾಜ್ಯದಲ್ಲಿ ಅರಣ್ಯ ಉಳಿಸಿದ್ದೆ ಬೆಳೆಗಾರರು. ಬೆಳೆಗಾರರು ಕೃಷಿ ಮಾಡಿ ಅರಣ್ಯ ಉಳಿಸದಿದ್ದರೆ ಇಂದು ಅರಣ್ಯ ಉಳಿಯುತ್ತಲೇ ಇರಲಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದ ಹಾನುಬಾಳುನಲ್ಲಿ ನಡೆದ ಬೆಳಗಾರರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. “ಈ ಭಾಗದಲ್ಲಿ ಆನೆಗಳ ಸಮಸ್ಯೆಯೇ ದೊಡ್ಡ ತೊಂದರೆ ಎಂದು ತಿಳಿದು ಕೊಂಡರೆ ಅದಕ್ಕಿಂತ ಕೂಡ ದೊಡ್ಡ ತೊಂದರೆ ಅರಣ್ಯ ಇಲಾಖೆಯದ್ದು. ಅವರು ಈ ಭಾಗದಲ್ಲಿ ಸೆಕ್ಷನ್ 4ರ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ” ಎಂದು ಹೇಳಿದರು.
“ಅರಣ್ಯ ಇಲಾಖೆಯ ಅರಣ್ಯ ಉಳಿಸಲು ಅರಣ್ಯ ಅಧಿಕಾರಿಗಳ ಸಹಕಾರವೇ ಇಲ್ಲ. ಅರಣ್ಯ ಇಲಾಖೆಯ ಸಮಸ್ಯೆ ಬಗ್ಗೆ ಸಚಿವರಲ್ಲಿ ಎಲ್ಲರೂ ಸೇರಿ ಮಾತುಕತೆ ನಡೆಸಬೇಕು” ಎಂದರು.
ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, “ಸಕಲೇಶಪುರದ ಸಮಸ್ಯೆ ಇನ್ನೂ ಕೂಡ ಸಮಸ್ಯೆ ಆಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ್, ಹಿರಿಯ ಬೆಳೆಗಾರರಾದ ಬಿಳಿ ಗೌಡ್ರು, ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್, ಕೆಜಿಎಫ್ ಅಧ್ಯಕ್ಷ ಡಾ. ಹೆಚ್.ಟಿ ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಬಿ ಕೃಷ್ಣಪ್ಪ, ಹೆಚ್ಡಿಪಿಎ ಅಧ್ಯಕ್ಷ ಸುಬ್ರಹ್ಮಣ್ಯ, ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಹಾನು ಬಾಳು ಭಾಸ್ಕರ್, ಸಂಘದ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.




