2028ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪರ್ಧಿಸುವಂತೆ ಅರಸೀಕೆರೆ ಜೆಡಿಎಸ್ ಮುಖಂಡರ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ತಿರುಗೇಟು ನೀಡಿದ್ದಾರೆ.
ನಗರದ ಶ್ರೀ ಭಕ್ತ ಕನಕದಾಸ, ಶ್ರೀ ಕ್ರಾಂತಿವೀರ ಸಂಗೊಳ್ಳಿರಾಯಣ್ಣಯಣ್ಣ ಆಚರಣ ಸಮಿತಿ ವತಿಯಿಂದ ದೇವರಾಜು ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಎಂಎಲ್ಎ ಆಗಿದ್ದೀನಿ. ನಮ್ಮ ಅಪ್ಪ ಹೆಬ್ಬೆಟ್ಟು, ನಮ್ಮ ಅಪ್ಪ ನೀಟಾಗಿ ಹೊಲದಲ್ಲಿ ಹೊಡೆಯುತ್ತಿದ್ದರು. ಅಂತಹವನ ಹೊಟ್ಟೆಯಲ್ಲಿ ಹುಟ್ಟಿದವನು ನಾನು, ಇತಿಹಾಸ ನನಗೂ ಗೊತ್ತಿದೆ, ಅಲ್ಲಿಂದ ಬೆಳೆದು ಬಂದವನು, ಐವತ್ತು ಜನ ಹಿಂದೆ ಕರೆದುಕೊಂಡು ಅರಸೀಕೆರೆಗೆ ಬಂದಿದ್ದೀರಾ, ಅರಸೀಕೆರೆಯಲ್ಲಿ ಇದು ನಡೆಯೋದಿಲ್ಲ. ಅರಸೀಕೆರೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿ, ಪುಸ್ತಕ ಬಿಡುಗಡೆ ಮಾಡ್ತಿನಿ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದರೆ ಮಾರನೇ ದಿನ ಮೊಸಳೆಹೊಸಳ್ಳಿಗೆ ತೆಗೆದುಕೊಂಡು ಹೋದ್ರಿ, ಅಂದಿನ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣಗೌಡರ ಬಳಿ ಮನವಿ ಮಾಡಿದಾಗ ಮಂಜೂರು ಮಾಡಿಕೊಟ್ಟರು. ಅರಸೀಕೆರೆಗೆ ಏನು ಮಾಡಿದ್ದೀರಿ. ಇಲ್ಲಿ ನಿಮ್ಮದು ನೆಲೆ ಎಲ್ಲಿದೆ. ಬನ್ನಿ ನಿಂತ್ಕಳ, ಅರಸೀಕೆರೆ ಜನ ತೋರಿಸುತ್ತಾರೆ. ಸುಮ್ಮನೆ ಭಾಷಣ ಮಾಡಬೇಡಿ, ಅರಸೀಕೆರೆ ನೆಮ್ಮದಿಯಾಗಿದೆ. ಅರಸೀಕೆರೆ ಪ್ರಗತಿಗಾಗಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿದ್ದೇನೆ. ನನಗೆ ಅನುದಾನ ಕೊಡುತ್ತಿದ್ದಾರೆ ಎಂದು ಅಸೂಯೆ ಪಡುತ್ತಿದ್ದರು. ನಾನೇ ಯಡಿಯೂರಪ್ಪ ಬಳಿ ಹೇಳಿ ಅವರಿಗೆ ಹತ್ತು ಕೋಟಿ ಕೊಡಿ ಎಂದು ಕೊಡಿಸಿದ್ದೇನೆ. ನನಗೆ ಅವತ್ತಿನ ಕಾಲದಲ್ಲಿ ಟಿಕೆಟ್ ಕೊಟ್ರಿ, ಹದಿನಾಲ್ಕು ಓಟಿನಲ್ಲಿ ಸೋತೆ. ನಾನು ಸೋತ ಮೇಲೆ ಅರಸೀಕೆರೆ ಕ್ಷೇತ್ರದಲ್ಲಿ ನಿಮ್ಮದು ಏನು ಇಲ್ಲ. ಅಲ್ಲಿಂದ ನಾನು ನನ್ನ ವೈಯುಕ್ತಿಕವಾಗಿ ಗೆದ್ದಿದ್ದೀನಿ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ತಿಳಿಸಿದರು.
ಎತ್ತಿನಹೊಳೆ ಯೋಜನೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದೀರಿ, ಬನ್ನಿ ಮುಂದಿನ ಜೂನ್ ತಿಂಗಳಿಗೆ, ಕೆರೆಗಳು ತುಂಬುತ್ತವೆ. ನೀವು ಹೊಳೆನರಸೀಪುರವನ್ನೇ ನೋಡಿಕೊಂಡು ಕುಳಿತುಕೊಂಡ್ರಿ, ಎಲ್ಲಾ ರಾಜಕೀಯ ನನಗೆ ಗೊತ್ತಿದೆ. ಎಲೆಕ್ಷನ್ ಗೆ ಬನ್ನಿ, ಹೈಕಮಾಂಡ್ ಏಕೆ, ಬನ್ನಿ ನಿಂತಳಿ, ಅರಸೀಕೆರೆ ಜನ ತೀರ್ಮಾನ ಮಾಡ್ತಾರೆ. ಈ ಕ್ಷೇತ್ರದ ಜನ ಪ್ರಬುದ್ಧರಾಗಿದ್ದಾರೆ, ರಾಜಕಾರಣ ಕಲಿತಿದ್ದಾರೆ. ಹಿಂದಿನ ರೀತಿ ಓಟು ಹಾಕಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ತಿರುಗೇಟು ನೀಡಿದರು. ನಾನು ಕಾಂಗ್ರೆಸ್ ಕದ್ದುಮುಚ್ಚಿ ಹೋಗಿಲ್ಲ. ನೀವು, ಬರೀ ನಿಮ್ಮ ಮನೆ, ನಿಮ್ಮ ಮನೆತನ, ನೀವೇ ರಾಜಕೀಯ ಮಾಡಿಕೊಂಡು ಹೋದಿರಿ. ಹಾಸನ ಜಿಲ್ಲೆಯಲ್ಲಿ ಬೇರೆ ಯಾರು ಬೆಳೆಯೋದು, ನಾನು ಬಂದು ಅರಸೀಕೆರೆ ಶಾಸಕನಾದಾಗ ಜೆಡಿಎಸ್ ಪಕ್ಷಕ್ಕೆ 85 ಸಾವಿರ ಮತಗಳನ್ನು ಹಾಕಿಸಿದ್ದೇನೆ. ನೀವು ಅರಸೀಕರೆಗೆ ಏನು ಮಾಡಿದ್ದೀರಿ ಎಂಬುದು ಜನರಿಗೆ ಗೊತ್ತಿದೆ. ಏನು ನಿಮ್ಮಿಂದ ಜೆಡಿಎಸ್ ಗೆ ಮತಗಳು ಬಂದವಾ, ನನ್ನಿಂದ ನಿಮ್ಮ ಪಕ್ಷಕ್ಕೆ ಬಂದಿವೆ. ಪುಣ್ಯಾತರೇ ನೀವು ಬಂದು ಇಲ್ಲಿ ಸಭೆ ಮಾಡಿ. ನನ್ನ ಹೆಸರು ಹೇಳಬೇಡಿ ನನಗೂ ಏನಾದರೂ ಆಗಿ ಬಿಡುತ್ತೆ, ಹಾಗಾಗಿ ನನ್ನ ಹೆಸರು ಹೇಳಬೇಡಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿದ್ದೀರಾ?ಹಾಸನ | ಶಿವಲಿಂಗೇಗೌಡ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು
ನಾವು ಹೆಂಡತಿ, ಮಕ್ಕಳು ಕಟ್ಕಂಡು ರಾಜಕಾರಣ ಮಾಡಲ್ಲ. ಅರಸೀಕೆರೆಯಲ್ಲಿ ಬದುಕುತ್ತೀನಿ, ಇಲ್ಲೇ ಸಾಯ್ತಿನಿ. ಈ ಜನುಮದಲ್ಲಿ ನಾನು ಇರುವವರೆಗೂ ನಿಮಗೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ನಿಮಗೆ ಆಶೀರ್ವಾದ ಮಾಡುವ ಜಯಾಮಾನವೂ ನಮ್ಮದಲ್ಲ. ಈ ಅರಸೀಕೆರೆ ಕನಸಿನಲ್ಲಿ ಇಟ್ಟು ಕರೆದುಕೊಂಡು ಬಂದಿದ್ದೀರಲ್ಲಾ ಪುಣ್ಯಾತರೇ, ನಾವು ಏನು ಅಂಥ ತೋರಿಸುತ್ತೇನೆ. ಒಕ್ಕಲಿಗರು ದೇವೇಗೌಡರನ್ನ ಬಿಟ್ಟು ಮತ ಹಾಕಲ್ಲ ಅಂತಿದ್ದರು, ನನಗೆ ಏಕೆ ಮತ ಹಾಕಿದ್ರು. ನೋಡೋಣ ಇದು ರಣರಂಗ, ಮಹಾಭಾರತ ಇವತ್ತೇ ಘೋಷಣೆ ಮಾಡಿದ್ದೀನಿ, ತಾಕತ್ ಇದ್ದರೆ ಬರಲಿ ಎಂದು ಚುನಾವಣೆಗೆ ಸ್ಪರ್ಧಿಸುವಂತೆ ಎಚ್.ಡಿ.ರೇವಣ್ಣಗೆ ಸವಾಲು ಹಾಕಿದ್ದಾರೆ.





