ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರು ಜಾತಿ ಕಾಲಂ ನಲ್ಲಿ ತಮಗೆ ಇಷ್ಟ ಬಂದ ಜಾತಿಯ ಹೆಸರನ್ನು ನಮೂದಿಸಿ ಲೋಪವೆಸಗಿದ್ದು, ತಪ್ಪುಮಾಡಿರುವ ಶಿಕ್ಷಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪನ್ನು ಸರಿಪಡಿಸಿ ಮೂಲಜಾತಿ ಮರು ನಮೂದಿಸಬೇಕು ಎಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಹೊಳೆನರಸೀಪುರದ ಮಹದೇಶ್ವರ ಕಾಲೊನಿ ನಿವಾಸಿಗಳು ಒತ್ತಾಯಿಸಿದರು.
ಈ ವೇಳೆ ಹಿಮ್ಸ್ ಆಡಳಿತ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ರವೀಶ್ ಬಸವಾಪುರ ಮಾತನಾಡಿ, “ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ತೇಜೂರು ಮಹಾದೇಶ್ವರ ಕಾಲೋನಿ ಗ್ರಾಮದಲ್ಲಿ ಸುಮಾರು 135 ಮಾದಿಗ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಈ ಗ್ರಾಮಕ್ಕೆ ಸಮೀಕ್ಷೆ ಮಾಡಲು ಬಂದಿದ್ದ ಗಣತಿದಾರರಾದ ಶುಭ ಮತ್ತು ಲಲಿತ ಎಂಬುವವರು ಮನಸೋ ಇಚ್ಛೆ ಬರೆದುಕೊಂಡು ಹೋಗುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಹಾಸನ | ಅಡುಗೆ ಮಾಡಿಲ್ಲವೆಂದು ಸಿಟ್ಟಾಗಿ ತಾಯಿಯನ್ನೇ ಕೊಂದ ಮಗ
“ಗಣತಿ ಮಾಡುವ ವೇಳೆ ಗ್ರಾಮಸ್ಥರು ಗಣತಿಯ ಜಾತಿ ಕಾಲಂನಲ್ಲಿ 061 ಅದರಲ್ಲಿ ಮಾದಿಗ ಎಂದು ನಮೂದಿಸುವಂತೆ ಕೇಳಿಕೊಂಡರೂ ಶಿಕ್ಷಕಿಯರಾದ ಶುಭಾ ಮತ್ತು ಲಲಿತಾ ಎಂಬುವರು ಗಣತಿಯ ಜಾತಿ ಕಾಲಂನಲ್ಲಿ 061 ರಲ್ಲಿ ಮಾದಿಗ ಎಂದು ಬರೆದಿರುವುದಿಲ್ಲ. ಕೇಳಿದರೆ ನಾವು ಹಾಗೆ ಮಾಡಲಿಕ್ಕೆ ಬರಲ್ಲ. ನಮಗೆ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಮಾತ್ರ ನಮೂದಿಸಲು ಸರ್ಕಾರದ ನಿರ್ದೇಶನವಿದೆ ಎಂದು ಉತ್ತರ ನೀಡಿದ್ದಾರೆ. ಶೋಷಿತ ಸಮುದಾಯಗಳಲ್ಲೊಂದಾದ ಮಾದಿಗ ಸಮುದಾಯದ ಗಣತಿಯಲ್ಲಿ ಸರ್ಕಾರದ ಗಣತಿ ನಿಯಮ ಉಲ್ಲಂಘಿಸಿ ಸಾರ್ವಜನಿಕರೋಡನೆ ಉಡಾಫೆಯಿಂದ ಅನುಚಿತವಾಗಿ ವರ್ತಿಸಿದ್ದಾರೆ. ಈ ಗಣತಿದಾರ ಶಿಕ್ಷಕಿಯರನ್ನು ಅಮಾನತು ಮಾಡುವಂತೆ ಹಾಗೂ ಸಮೀಕ್ಷೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಈ ವಿಚಾರದ ತಿಳಿಸಲಾಗಿದ್ದು ಆ ಇಬ್ಬರು ಶಿಕ್ಷಕಿಯರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದರು.
ಈ ವೇಲೆ INTUC ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ರಾಮಚಂದ್ರ ಕಬ್ಬಳಿ, ಲೋಕೇಶ್ ಕ್ಯಾತನಹಳ್ಳಿ, ರಂಗಸ್ವಾಮಿ ಸೇರಿದಂತೆ ಮಹದೇಶ್ವರ ಕಾಲೊನಿ ನಿವಾಸಿಗಳು ಉಪಸ್ತಿತರಿದ್ದರು.





