ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿಎಂ ಹಾಗೂ ಡಿಸಿಎಂ ಏತ ನೀರಾವರಿ ಮೂಲಕ ದಿಡಗ ಭಾಗದ ಕೆರೆಗಳನ್ನು ತುಂಬಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಈಗ 74 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದು, ದಿಡಗ ಹಾಗೂ ತುಮಕೂರು ಏತ ನೀರಾವರಿ ಯೋಜನೆಗೆ ನಾಳೆ ಶಂಕುಸ್ಥಾಪನೆ ಜೊತೆಗೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸರ್ಕಾರದ ಸೇವೆಗಳನ್ನು ಸಮರ್ಪಣೆ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಡಿಪಿ ಸದಸ್ಯ ಎಂ ಎ ಗೋಪಾಲಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಇತರೆ ಸಚಿವರು ಆಗಮಿಸಲಿದ್ದಾರೆ. ದಿಡಗ-ತುಮಕೂರು ಏತ ನೀರಾವರಿ ಯೋಜನೆಯಿಂದ ಚನ್ನರಾಯಪಟ್ಟಣ ತಾಲೂಕಿಗೆ ಇನ್ನೂ ಶೇ.20ಕ್ಕೂ ಹೆಚ್ಚು ನೀರಾವರಿ ಪ್ರದೇಶ ಹಿಗ್ಗಲಿದೆ. 32 ಗ್ರಾಮಗಳ ಜೊತೆಗೆ 18 ಕೆರೆಗಳು ತುಂಬಲಿವೆ ಎಂದರು. ನನ್ನ ಪತ್ರದ ಆಧಾರದ ಮೇಲೆ ಯೋಜನೆಗೆ ಮಂಜೂರಾತಿ ನೀಡಿದ ಸರ್ಕಾರಕ್ಕೆ ಧನ್ಯವಾದ ಹೇಳಿದರು.
“ಸಣ್ಣ ನೀರಾವರಿ ಇಲಾಖೆಗೆ 8 ಕೋಟಿ ನೀಡಿದ್ದಾರೆ. ರಸ್ತೆಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ಜಿಲ್ಲೆಯಲ್ಲಿ ಒಬ್ಬರೇ ಶಾಸಕರಿದ್ದರೂ, ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಿದೆ. ನಮ್ಮ ತಾಲೂಕಿನಲ್ಲಿ ಸುಮಾರು 16 ಸಾವಿರ ಪ್ರಕರಣ ದುರಸ್ತಿ ಆಗಿವೆ. ಉಸ್ತುವಾರಿ ಸಚಿವರು ಕಳೆದ ತಿಂಗಳು ಜನಸಂಪರ್ಕ ಸಭೆ ಮಾಡಿದ್ದಾರೆ. ರಾಜಕೀಯ ಟೀಕೆ ಟಿಪ್ಪಣಿ ಏನೇ ಇದ್ದರೂ, ನಮ್ಮ ಸರ್ಕಾರ ನೀರಾವರಿ ಯೋಜನೆಗೆ ಒತ್ತು ನೀಡಿದೆ” ಎಂದು ವಿವರಿಸಿದರು.
ಇದೇ ವೇಳೆ ಶನಿವಾರ ನಡೆಯುತ್ತಿರುವ ಸರ್ಕಾರದ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದಾರೆ ಎಂಬ ಮಾಜಿ ಸಚಿವ ಎಚ್ ಡಿ ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿದ ಅವರು, “ರೇವಣ್ಣ ಚಿಲ್ಲರೆ ಗಿರಾಕಿ, ಇತ್ತೀಚೆಗೆ ಅವರು ಪೊಳ್ಳು ಆರೋಪ ಮಾಡುವುದನ್ನು ಕಲಿತಿದ್ದಾರೆ” ಎಂದು ವ್ಯಂಗ್ಯವಾಡಿದರು. “ಹಿರಿಯರಾದ ರೇವಣ್ಣ ಅವರು ಸುಖಾ ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ರೇವಣ್ಣ ಮೊದಲು ಚೆನ್ನಾಗಿದ್ದರು. ಈಗ ಚಿಲ್ಲರೆ ಗಿರಾಕಿ ತರ ಆಗಿದ್ದು ಪೊಳ್ಳು ಮಾತನಾಡುವುದನ್ನು ಕಲಿತಿದ್ದಾರೆ. ಹುಡಾದಲ್ಲಿ 1 ಕೋಟಿ ವಸೂಲಿ ಮಾಡಲು ಸಾಧ್ಯವೇ, ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು” ಎಂದರು.
ಇದನ್ನೂ ಓದಿ: ಹಾಸನ | ಬಟ್ಟೆ ತೊಳೆಯಲು ತೆರಳಿದ್ದ ದಂಪತಿ ಹೇಮಾವತಿ ನಾಲೆಗೆ ಬಿದ್ದು ಸಾವು
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೆವಣ್ಣ ಅವರೂ ಸಚಿವರಾಗಿದ್ದರು. ಆಗಲೂ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆಗಲೂ ಇವರು ಸರ್ಕಾರಿ ಇಲಾಖೆಗಳಿಂದ ಹಣ ವಸೂಲಿ ಮಾಡಿದ್ರಾ ಎಂದು ಪ್ರಶ್ನಿಸಿದರು.
ಶಾಸಕ ಎಚ್ ಪಿ ಸ್ವರೂಪ್ ತುಂಬಾ ಒಳ್ಳೆಯ ಹುಡುಗ, ಅವರ ಹಾಗೂ ಅವರ ತಂದೆಯ ಬಗ್ಗೆ ಅಪಾರ ಗೌರವವಿದೆ. ಸ್ವರೂಪ್ ಅವರು ರೇವಣ್ಣ ಅವರ ಕೈಗೊಂಬೆಯಾಗಿ ಅವರು ಕೀ ಕೊಟ್ಟಾಗ ಮಾತ್ರ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿ ಸುಮ್ಮನಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಚನ್ನರಾಯಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಮೂರ್ತಿ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಇದ್ದರು.





