ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹೆಚ್.ಮೈಲಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಸಂದೇಹ ಸಹಿಸಲಾಗದೇ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆ ಹೆಚ್.ಎಲ್.ಇಂದ್ರ (24) ಎಂಬಾತೆ, ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್.ಮೈಲಳ್ಳಿ ಗ್ರಾಮದ ಎಂ.ಹೆಚ್ ಸ್ವಾಮಿ ಜೊತೆ ವಿವಾಹವಾಗಿದ್ದರು ಎನ್ನಲಾಗಿದೆ. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ 60ಗ್ರಾಂ. ಚಿನ್ನ ಹಾಗೂ 1.30 ಲಕ್ಷ ರೂ. ಹಣವನ್ನು ಹೆಚ್.ಎಲ್.ಇಂದ್ರ ಪೋಷಕರು ನೀಡಿದ್ದರು. ಪತಿ ಸ್ವಾಮಿ ಬೇಕರಿ ನಡೆಸುತ್ತಿದ್ದ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಗ್ರಾಮಕ್ಕೆ ಬಂದು ನೆಲೆಸಿದ್ದ. ಆಗಿನಿಂದ ವರದಕ್ಷಿಣೆ ಹಣ ತರುವಂತೆ ಹೆಂಡತಿಗೆ ಪೀಡಿಸುವುದರ ಜೊತೆಗೆ ಸಂದೇಹ ಪಡುತ್ತಿದ್ದ ಎನ್ನಲಾಗಿದೆ.
ಮದುವೆಯಾಗಿ ನಾಲ್ಕು ವರ್ಷಗಳಾದರೂ ದಂಪತಿಗೆ ಮಕ್ಕಳಿರಲಿಲ್ಲ. ಒಂದೆರಡು ಬಾರಿ ರಾಜಿ ಪಂಚಾಯ್ತಿ ಕೂಡ ಮಾಡಿದ್ದರು. ಆದರೆ ದಂಪತಿ ಮಧ್ಯೆ ಜಗಳವಾಗಿ, ಪತ್ನಿ ವಿಷ ಸೇವಿಸಿದ್ದಳು. ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಫೆ. 12ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ರಸ್ತೆ ತಡೆ ಮತ್ತು ಪಿಕೆಟಿಂಗ್
ಈ ಘಟನೆ ಕುರಿತು ದುದ್ದ ಹೋಬಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಫ್ಐಆರ್ ದಾಖಲಿಸಲಾಗಿದೆ.





