ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ 29 ವರ್ಷದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಹಾಸನ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಸಮೀಪದಲ್ಲಿರುವ ಕೆರೆಯಲ್ಲಿ ಶವ ಎಸೆದಿರುವ ಶಂಕೆಯ ಮೇರೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮಹಿಳೆ ಮೂಲತಃ ಬೇಲೂರು ತಾಲೂಕಿನವರಾಗಿದ್ದು, ತುಮಕೂರು ಜಿಲ್ಲೆ ಕುಣಿಗಲ್ ಮೂಲದ ರುದ್ರೇಶ್ ಅವರೊಂದಿಗೆ ವಿವಾಹವಾಗಿದ್ದ ಪ್ರಿಯಾಂಕ (29), ಫೆ.12 ರಂದು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದೇ ದಿನ ಸಂಜೆ 7.30ರ ವೇಳೆಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ ಪ್ರಿಯಾಂಕ, ಪರಿಚಯಸ್ಥರ ಜೊತೆ ಇರುವುದಾಗಿ ತಿಳಿಸಿ ಫೋನ್ ಕಟ್ ಮಾಡಿದ್ದರು. ರಾತ್ರಿ 8 ಗಂಟೆಯ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಂತರದಿಂದ ಅವರ ಸಂಪರ್ಕ ಕಡಿತವಾಗಿದೆ. ಪ್ರಿಯಾಂಕ ಸುಮಾರು 30 ಲಕ್ಷ ರೂ. ಮೌಲ್ಯದ ಒಡವೆ ಧರಿಸಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಒಡವೆಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಸಾಧ್ಯತೆ ಇರುವುದಾಗಿ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರು ನೀಡಿದ ಮಾಹಿತಿಯಂತೆ, ಫೆ. 12ರ ರಾತ್ರಿ ಪ್ರಿಯಾಂಕ ಬೇಲೂರು ಬಸ್ ನಿಲ್ದಾಣದಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ತಕ್ಷಣವೇ ಅರೇಹಳ್ಳಿ ಹಾಗೂ ಬೇಲೂರು ಪೊಲೀಸರಿಗೆ ದೂರು ನೀಡಲು ಮುಂದಾದರೂ, ದೂರು ಸ್ವೀಕರಿಸಿ ತನಿಖೆ ಆರಂಭಿಸಲು ವಿಳಂಬವಾಯಿತು ಎಂಬ ಆರೋಪ ಕೇಳಿಬಂದಿದೆ. “ನಿನ್ನೆ ದೂರು ಸ್ವೀಕರಿಸಿ ತಕ್ಷಣ ಹುಡುಕಾಟ ನಡೆಸಿದ್ದರೆ ನಮ್ಮ ಮಗಳು ಬದುಕಿ ಸಿಗುತ್ತಿದ್ದಳೋ ಏನೋ,” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಸೈಟ್ ಹೋರಾಟ: ನ್ಯಾಯಾಲಯ ಮಹತ್ವದ ಆದೇಶ
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶುಭಾನ್ವಿತಾ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಕುಟುಂಬಸ್ಥರ ಆಕ್ರೋಶಕ್ಕೆ ಸ್ಪಂದಿಸಿದ ಅವರು, “ತಪ್ಪು ನಡೆದಿದ್ದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಮಹಿಳೆ ಮೃತಪಟ್ಟಿಲ್ಲ ಎನ್ನುವುದು ನಮ್ಮ ನಂಬಿಕೆ. ತನಿಖೆಗೆ ಸಹಕಾರ ನೀಡಿ,” ಎಂದು ಭರವಸೆ ನೀಡಿದ್ದಾರೆ. ಸ್ಥಳದ ಪಕ್ಕದಲ್ಲಿರುವ ಕೆರೆಯಲ್ಲಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಇದುವರೆಗೆ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ಬಳಿಕ ಪೊಲೀಸ್ ಪ್ರೋಣ್ ತಂಡ ಆಗಮಿಸಿ ಕೆರೆಯ ಸುತ್ತಮುತ್ತ ಹಾಗೂ ಬಟ್ಟೆ ಪತ್ತೆಯಾದ ಪ್ರದೇಶದಲ್ಲಿ ವಿಸ್ತ್ರತ ಹುಡುಕಾಟ ಕೈಗೊಂಡಿದೆ.





