ಗಾಂಜಾ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆದ ಗಲಾಟೆ ಹತ್ಯೆಯಲ್ಲಿ ಕೊನೆಗೊಂಡಿರುವ ಘಟನೆ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಹತ್ಯೆ ಮಾಡಿದ ಬಳಿಕ Video ಮಾಡಿ ಹರಿಬಿಟ್ಟಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೂವಿನಹಳ್ಳಿ ಗ್ರಾಮದ ನಿವಾಸಿ ಕೀರ್ತಿ (24) ಕೊಲೆಯಾದವ. ದೊಡ್ಡಕಣಗಾಲ್ ಗ್ರಾಮದ ನಿವಾಸಿ ಉಲ್ಲಾಸ್ ಎಂಬಾತ ಕೊಲೆ ಆರೋಪಿ. ಜೊತೆಗಿದ್ದ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಸ್ಥಳೀಯರಲ್ಲಿ ಭೀತಿ ಉಂಟು ಮಾಡಿದೆ.
ಇನ್ನು, ಹತ್ಯೆಯ ನಂತರ ಆರೋಪಿ ಘಟನೆಯ ವಿಡಿಯೋ ಮಾಡಿ ವಿಕೃತಿ ಮೆರೆದಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಶ್ರೀನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಸನ | ಡಿ.6ರಂದು ನಡೆದ ಸರ್ಕಾರಿ ಸಮಾವೇಶಕ್ಕೆ 5 ಕೋಟಿ ರೂ. ವೆಚ್ಚ: ಸಿ ಪುಟ್ಟಯ್ಯ ಹಂದನಕೆರೆ ಖಂಡನೆ
ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಗಾಂಜಾ ವ್ಯಸನ ಮತ್ತು ಅದರಿಂದ ಉಂಟಾಗುತ್ತಿರುವ ಅಪರಾಧ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸುತ್ತಿದ್ದು, ಈ ಹಿನ್ನೆಲೆ ಅಪರಾಧ ಕೃತ್ಯಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ಹಾಗೂ ಕಾನೂನುಗಳು ಇನ್ನಷ್ಟು ಕಠಿಣವಾಗಬೇಕಿವೆ.





