ಮದ್ಯದ ಚಟ ಬಿಡಿಸಲು ಮದ್ಯವರ್ಜನ ಕೇಂದ್ರವೊಂದಕ್ಕೆ ಸೇರಿಸಲಾದ ಯುವಕನೊಬ್ಬ ಶವವಾಗಿ ಮರಳಿರುವ ಘಟನೆ ಹಾಸನದಲ್ಲಿ ನಡೆದಿದ್ದು, ತಮ್ಮ ಮಗನ್ನು ಹತ್ಯೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಹಾಸನ ತಾಲೂಕಿನ ದೊಡ್ಡಮೇದೂರು ಗ್ರಾಮದ ಪದ್ಮೇಗೌಡ (38) ಮೃತ ವ್ಯಕ್ತಿ. ಪದ್ಮೇಗೌಡನನ್ನು ಹಾಸನದ ವಿಜಯನಗರದಲ್ಲಿರುವ ಪುನರ್ ಜೀವನ ವಸತಿ ಮದ್ಯದ ಚಟ ಬಿಡಿಸುವ ಕೇಂದ್ರಕ್ಕೆ ಸೇರಿಸಲಾಗಿತ್ತು.
“ಮದ್ಯವರ್ಜನ ಕೇಂದ್ರದಲ್ಲಿ ನಮ್ಮ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಮಗನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ” ಎಂದು ಪೋಷಕರು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಮದುವೆಯಾಗಿದ್ದ ಪದ್ಮೇಗೌಡ ಬಳಿಕವೂ ಕುಡಿತದ ಚಟ ಬಿಟ್ಟಿರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಮಗನನ್ನು ಹೊಸ ಮನುಷ್ಯನನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಪೋಷಕರು ಆತನ ಕುಡಿತದ ಚಟ ಬಿಡಿಸಲು ನಾಲ್ಕು ದಿನದ ಹಿಂದಷ್ಟೇ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು ಎಂದು ತಿಳಿದುಬಂದಿದೆ.
ಪುನರ್ವಸತಿ ಕೇಂದ್ರದಲ್ಲಿ ತೀವ್ರ ಸುಸ್ತಿನಿಂದ ಬಳಲುತ್ತಿರುವುದರಿಂದಾಗಿ ಆತನನ್ನು ಪುನರ್ವಸತಿ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪದ್ಮೇಗೌಡ ನಿಧನರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿರಿಯ ದಲಿತ ಹೋರಾಟಗಾರ ಜಿಗಣಿ ಶಂಕರ್ ಇನ್ನಿಲ್ಲ
ಶುಕ್ರವಾರ ಬೆಳಿಗ್ಗೆ ಊರಿನಲ್ಲಿ ಪದ್ಮೇಗೌಡರ ಅಂತ್ಯಸಂಸ್ಕಾರಕ್ಕೆ ಮುನ್ನ ಸ್ನಾನ ಮಾಡಿಸುವ ವೇಳೆ ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಪದ್ಮೇಗೌಡನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತನ ಪೋಷಕರು ಆರೋಪ ಮಾಡಿದ್ದು, ಕೇಂದ್ರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಕೆಲವು ಫೂಟೇಜ್ಗಳು ಲಭ್ಯವಾಗಿವೆ. ಇವುಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಹಲ್ಲೆ ನಡೆದಿರುವುದು ನಿಜವೇ ಎಂದು ಪರೀಕ್ಷಿಸಲಿದ್ದಾರೆ ಎನ್ನಲಾಗಿದೆ.




