ಸತತವಾಗಿ ನಾಲ್ಕು ವರ್ಷಗಳ ಕಾಲ ದೇವನಹಳ್ಳಿ ಚನ್ನರಾಯಪಟ್ಟ ಭೂ ಸ್ವಾಧೀನ ವಿರುದ್ಧ ಹೋರಾಟ ಯಶಸ್ವಿಯಾಗಿ ನಡೆದು ಕೊನೆಗೂ ಸರ್ಕಾರ ಭೂ ಸ್ವಾಧೀನ ಆದೇಶ ವಾಪಾಸ್ ಪಡೆಯುವ ತನಕ ಹೋರಾಟ ಮುಂದುವರೆಯಿತು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ದೇವನಹಳ್ಳಿ ಅಲ್ಲದೆ ಕರ್ನಾಟಕ ರಾಜ್ಯದ ಹಾಗೂ ದೇಶದ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದವು.
13 ಹಳ್ಳಿಗಳ ಹೋರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ನಾಳೆ (ಫೆ.27) ಚನ್ನರಾಯಪಟ್ಟಣ ನಾಲ್ಕು ವರ್ಷಗಳ ಕಾಲ ಹೋರಾಟ ಮಾಡಿದ ಸ್ಥಳದಲ್ಲೇ ಭೂಮಿ ಪೂಜೆ ಮೂಲಕ ವಿಜಯೋತ್ಸವವನ್ನು ಆಚರಣೆ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸಲು ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ.
ʼಭೂವಿ ಹಬ್ಬʼದ ಸಂಭ್ರಮದಲ್ಲಿ ರೈತರು
ಈ ದಿನ.ಕಾಮ್ ಗೆ ಪ್ರತಿಕ್ರಿಯೆ ನೀಡಿದ ಹೋರಾಟಗಾರ ರಮೇಶ್, “ಕಳೆದ ನಾಲ್ಕು ವರ್ಷಗಳಿಂದ ಭೂ ಸ್ವಾಧೀನ ಮಾಡಲು ಮುಂದಾದ ಸರ್ಕಾರ ಹಾಗೂ ಕೆಐಎಡಿಬಿ ವಿರುದ್ದ ರೈತರು ಹೋರಾಟ ಪ್ರಾರಂಭ ಮಾಡಿದರು. ಕಳೆದ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನ ಆದೇಶ ವಾಪಾಸ್ ಪಡೆಯುತ್ತೇವೆ ಎಂದು ಹೇಳಿತ್ತು. ಡಿಸೆಂಬರ್ 2025 ರಲ್ಲಿ ಭೂ ಸ್ವಾಧೀನ ಆದೇಶ ವಾಪಸ್ ಪಡೆದಿದ್ದೇವೆ ಎಂದು ಸರ್ಕಾರ ಆದೇಶ ಹೊರಡಿಸಿತು. ಈ ಖುಷಿಯಲ್ಲಿ ರೈತರು ಭೂಮಿ ಹಬ್ಬದ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಭೂಮಿ ಹಬ್ಬ ಸಂಭ್ರಮಾಚರಣೆಯಲ್ಲಿ ಮೊದಲಿಗೆ ಭೂಮಿ ಪೂಜೆ ಇರುತ್ತದೆ ನಂತರ ನಮ್ಮ ನಾಲ್ಕು ವರ್ಷಗಳ ಹೋರಾಟಕ್ಕೆ ಯಾರೆಲ್ಲಾ ಬೆಂಬಲ ನೀಡಿದ್ರು ಅವರಿಗೆ ಗೌರವ ಸಮರ್ಪಣೆ ಇರುತ್ತೆ ಹಾಗೂ ಧನ್ಯವಾದ ಹೇಳುತ್ತೇವೆ ಇದಾದ ಬಳಿಕ ಭಾಷಣ, ಹಾಡು ಆಟ” ಇರುತ್ತದೆ ಎಂದು ವಿವರಿಸಿದರು.



“ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಭೂ ಸ್ವಾಧೀನ ಆದೇಶ ಮಾಡುತ್ತಾರೆ. ಅದನ್ನು ವಿರೋಧಿಸಿ ಆಗಿನ ಕಾಲದಲ್ಲಿ ಪ್ರತಿಭಟನೆ ಪ್ರಾರಂಭವಾಗುತ್ತೆ. ಅದರ ಮಧ್ಯೆ ಸಿದ್ದರಾಮಯ್ಯ ನವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ವಾಪಸ್ ಪಡೆಯುತ್ತೇವೆ ಎಂದು ಹೇಳ್ತಾರೆ. ನಮ್ಮ ಹೋರಾಟದ ನಾಲ್ಕು ವರ್ಷದಲ್ಲಿ ಒಂದುವರೆ ವರ್ಷ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರುತ್ತೆ. ಬಳಿಕ ಕಾಂಗ್ರೆಸ್ ಸರ್ಕಾರ ಬಂದ್ರೂ ಕೂಡ ಎರಡು ವರ್ಷ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ. ಆಗಲೂ ಸಹ ಸಚಿವರ ಜೊತೆಗೆ ಸಭೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜೊತೆಯೂ ಹಲವಾರು ಸಭೆಗಳಾಗುತ್ತವೆ. ಆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಸದ್ಯ ಈಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿರುವುದು ಸಂತಸ ತಂದಿದೆ” ಎಂದರು.
ಏನಿದು ಹಿನ್ನೆಲೆ?
ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವನಹಳ್ಳಿ ವ್ಯಾಪ್ತಿಯ ಚನ್ನರಾಯಪಟ್ಟಣ ಸೇರಿದಂತೆ ಸುಮಾರು 13 ಹಳ್ಳಿಗಳ 1700ಕ್ಕೂ ಹೆಚ್ಚು ಎಕರೆ ಜಾಗವನ್ನು ಕೆಐಎಡಿಬಿ ಮೂಲಕ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು. ಅಂದಿನಿಂದಲೂ ಭೂ ಸ್ವಾಧೀನಕ್ಕೆ ವಿರೋಧ ಮಾಡಿ ನಮ್ಮ ಫಲವತ್ತಾದ ಭೂಮಿ ಕೆಐಎಡಿಬಿ ಗೆ ನೀಡುವುದಿಲ್ಲ ಎಂದು ರೈತರು ಧರಣಿ ಪ್ರಾರಂಭ ಮಾಡಿದ್ದರು. ರಾಜ್ಯದ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನವರು ಚನ್ನರಾಯಪಟ್ಟಣ ರೈತರಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಭೂ ಸ್ವಾಧೀನ ಆದೇಶ ವಾಪಸ್ ಪಡೆಯುತ್ತೇವೆ ಎಂದು ಭರವಸೆ ನೀಡಿದರು.
ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರೇ ಸಿಎಂ ಆದ್ರೂ ಸಹ ಎರಡು ವರ್ಷ ಕಳೆದರೂ ರೈತರ ಸಮಸ್ಯೆ ಬಗೆಹರಿಸಲಿಲ್ಲ. ರಾಜ್ಯದ ಪ್ರಗತಿಪರ ಸಂಘಟನೆಗಳು, ಚಿಂತಕರು ಸುಮಾರು ಬಾರಿ ಸಿಎಂ ಬಳಿ ಸಭೆ ಮಾಡಿದರೂ ಸಹ ಭೂ ಸ್ವಾಧೀನ ಆದೇಶ ವಾಪಸ್ ಪಡೆಯಲಿಲ್ಲ. ಆದರೂ ಸಹ ಛಲ ಬಿಡದೆ ರೈತರು ಹೋರಾಟವನ್ನು ಮುಂದುವರೆಸಿದರು.


ಸಂಯುಕ್ತ ಹೋರಾಟ ರಂಗ ಮೂಲಕ ಎಲ್ಲಾ ರೈತಪರ, ಕನ್ನಡಪರ, ದಲಿತಪರ, ಹಾಗೂ ಹಲವಾರು ರಾಜಕೀಯ ಪಕ್ಷಗಳು, ಚಿಂತಕರು ಸೇರಿ ದೇವನಹಳ್ಳಿ ಚಲೋ ಬೃಹತ್ ಹೋರಾಟ ಹಮ್ಮಿಕೊಂಡು ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದರು. ಈ ಹೋರಾಟಕ್ಕೆ ನಟ ಪ್ರಕಾಶ್ ರೈ ಕೂಡ ಬೆಂಬಲ ವ್ಯಕ್ತಪಡಿಸಿದರು. ಹಲವಾರು ಮುಖಂಡರು ದೇವನಹಳ್ಳಿ ಚಲೋ ಹೋರಾಟದಲ್ಲಿ ಬಂಧನ ಸಹ ಆಗಿದ್ರು. ತದನಂತರ ಸರ್ಕಾರ ಎಚ್ಚೆತ್ತುಕೊಂಡು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಚನ್ನರಾಯಪಟ್ಟಣ ರೈತರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ಕರೆದು ಭೂ ಸ್ವಾಧೀನ ಆದೇಶ ವಾಪಸ್ ಪಡೆಯುತ್ತೇವೆ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ: ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ. ಪುಟ್ಟಮ್ಮ
ಅಂತೂ ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಆ ಸಂತಸವನ್ನು ಭೂಮಿ ಪೂಜೆ ಮಾಡುವ ಮೂಲಕ ರೈತರು ಸಂಭ್ರಮ ಹಂಚಿಕೊಳ್ಳಲಿದ್ದಾರೆ. ರೈತರು ಹೋರಾಟಕ್ಕಿಳಿದರೆ ಜಯ ಸಿಗುವವರೆಗೂ ಬಿಡುವುದಿಲ್ಲ ಎನ್ನುವ ಸಂದೇಶವನ್ನು ನೀಡಲು ಸಹಕರಿಸಿದ ಎಲ್ಲರಿಗೂ ಈ ವೇಳೆ ಧನ್ಯವಾದ ಅರ್ಪಿಸಲಿದ್ದಾರೆ.





