ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
ಸರ್ಕಾರಿ ಕನ್ನಡ ಶಾಲೆಗಳೇ ಶಿಕ್ಷಣ ಸಂಸ್ಕೃತಿಯ ತಾಯಿಬೇರುಗಳು. ಇಲ್ಲಿ ಕಲಿತು ಸಾಧಿಸಿದ ಹಿಂದಿನ ಪೀಳಿಗೆಗಳವರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಅಂತಹ ಸರ್ಕಾರಿ ಶಾಲೆಗಾಗಿ ದುಡಿದವರು ವಿರಳಾತಿ ವಿರಳ. ಹಾಸನದಲ್ಲೊಂದು ಅಪರೂಪದ ಸರ್ಕಾರಿ ಶಾಲೆಯಿದೆ. ಅದೇ ‘ಹನುಮಮ್ಮ ಶಾಲೆ’. ಹನುಮಮ್ಮ ರಾಜಕಾರಣಿಯಲ್ಲ, ಧನಿಕರೂ ಅಲ್ಲ, ಕಟ್ಟಡದ, ಸ್ಥಳದ ಧಾನಿಯೂ ಅಲ್ಲ, ಅಧಿಕಾರಿಯಾಗಿದ್ದವರೂ ಅಲ್ಲವೇ ಅಲ್ಲ, ಹೆಚ್ಚು ಶಿಕ್ಷಣ ಪಡೆದವರೂ ಅಲ್ಲ. ಸ್ವಚ್ಛತೆ, ಶಿಸ್ತು, ಸಮಯ ಪ್ರಜ್ಞೆಯನ್ನು ಉಸಿರಾಗಿಸಿಕೊಂಡಿದ್ದ- ಈ ಶಾಲೆಯ ಸಾಮಾನ್ಯ ನಾಲ್ಕನೆ ದರ್ಜೆ ನೌಕರರು ಹನುಮಮ್ಮ! 1950ರಲ್ಲಿ ಪ್ರಾರಂಭವಾದ ಈ ಬಸಟ್ಟಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆ, ಈಗಿನ ರವೀಂದ್ರನಗರ ಶಾಲೆ. ರವೀಂದ್ರನಗರದಲ್ಲಿ ನಿಂತು, ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಎಲ್ಲಿದೆಯೆಂದು ವಿಳಾಸವನ್ನು ಈಗ ಕೇಳಿದರೂ ಯಾರಿಂದಲೂ ವಿಳಾಸ ಸಿಗುವುದಿಲ್ಲ. ಹನುಮಮ್ಮ ಶಾಲೆ ಯಾವುದೆಂದು ಕೇಳಿದರೆ ತಕ್ಷಣ ವಿಳಾಸ ನೀಡುತ್ತಾರೆ!
ಹನುಮಮ್ಮ ಹುಟ್ಟಿದ್ದು 30 ಜೂನ್ 1924 ರಂದು ಹಾಸನ ನಗರದ ಒಂದು ಸಾಮಾನ್ಯ ಬಡ ಕುಟುಂಬದಲ್ಲಿ. ಹೆಚ್ಚು ಓದಿಸುವವರು ಇಲ್ಲದ ಕಾರಣ, ಕೇವಲ ಪ್ರಾಥಮಿಕ ಶಾಲೆಯವರೆಗೆ ಓದಿರುವ ಇವರು ಹಾಸನ ತಾಲೂಕು ಚನ್ನಪಟ್ಟಣದ ನಿಂಗಯ್ಯನವರನ್ನು ಚಿಕ್ಕ ವಯಸ್ಸಿನಲ್ಲೆ ವಿವಾಹವಾದರೂ, ಮಕ್ಕಳಾಗಿದ್ದು ಬಹಳ ತಡವಾಗಿ. ಮೂವತ್ತು ವರ್ಷ ತುಂಬುವ ಹೊತ್ತಿಗೆ ಶಾಂತರಾಜು, ರತ್ನಮ್ಮ, ಜಯಮ್ಮ, ಭಾಗ್ಯ ಎಂಬ ನಾಲ್ಕು ಮಕ್ಕಳ ತಾಯಿಯಾಗಿದ್ದರು. ನಂತರ ಸರ್ಕಾರಿ ಸೇವೆಗೆ ಸೇರಿದರು. ಇವರ ಪತಿ ನಿಂಗಯ್ಯನವರೂ ಕೂಡ ವಾಣಿವಿಲಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸಿದವರು. ಇವರಿಬ್ಬರಲ್ಲಿಯೂ ತನ್ನ ಸ್ವಂತ ಮಕ್ಕಳು, ಶಾಲೆಯ ಮಕ್ಕಳು ಎಂಬ ಭಿನ್ನತೆ ಯಾವತ್ತೂ ಇರಲಿಲ್ಲ. ತನ್ನ ಮಕ್ಕಳಂತೆಯೇ ತಾವು ಕೆಲಸ ಮಾಡುತ್ತಿದ್ದ ಶಾಲಾ ಮಕ್ಕಳನ್ನು ಪ್ರೀತಿಸಿದರು, ಪೋಷಿಸಿದರು ಮತ್ತು ಬೆಳೆಸಿದರು.
ತಲೆಗೆ ಎಣ್ಣೆ ಇಲ್ಲದೆ, ಸಿಂಬಳ ಸುರಿಸಿಕೊಂಡು, ಅಸ್ತವ್ಯಸ್ತ ಬಟ್ಟೆಗಳನ್ನು ಹಾಕಿಕೊಂಡು ಕೊಳಕಾಗಿ ಶಾಲೆಗೆ ಬರುವ ಕೂಲಿಕಾರರ ಮಕ್ಕಳನ್ನು ಕಂಡು ಮರುಗಿದರು. ತಾವು ಕಡುಬಡತನದಲ್ಲಿ ಬೆಳೆದು ಶಿಕ್ಷಣದಿಂದ ವಂಚಿತರಾದುದನ್ನು ನೆನೆದು, ಬಡತನದ ಕಾರಣ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಚಿಂತಿಸುತ್ತಿದ್ದ ಹನುಮಮ್ಮ ಅವರು, ತಮ್ಮ ಶಾಲೆಗೆ ಕೊಳಕಾಗಿ ಬರುತ್ತಿದ್ದ ಕಡುಬಡವ ಕೂಲಿಕಾರರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಬಡಮಕ್ಕಳ ಸಿಂಬಳ ತೆಗೆದು, ಸಾಬೂನಿನಿಂದ ಮುಖ ತೊಳೆದು, ತಲೆಗೆ ಎಣ್ಣೆಹಾಕಿ ಬಾಚಿ, ಅವರ ಉಗುರುಗಳನ್ನು ಕತ್ತರಿಸಿ ಸ್ವಚ್ಚಗೊಳಿಸಿ, ಹರಿದ ಚಡ್ಡಿಯ ಮತ್ತು ಸಡಿಲವಾದ ಲಾಡಿಯನ್ನು ಮತ್ತು ಅಸ್ತವ್ಯಸ್ತ ಬಟ್ಟೆಗಳನ್ನು ಸರಿಪಡಿಸಿ ಕೂರಿಸುತ್ತಿದ್ದರು. ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ಹೋಗಿ, ಅವರನ್ನು ಶಿಸ್ತಾಗಿ ರೆಡಿಮಾಡಿ ಶಾಲೆಗೆ ಕರೆತಂದು ಶಿಕ್ಷಣಕ್ಕೆ ಹಚ್ಚುತ್ತಿದ್ದ ಬಡ ಮಕ್ಕಳ ಶಿಕ್ಷಣದ ಮಹಾ ತಾಯಿ ನಮ್ಮ ಹನುಮಮ್ಮ. ಇವರು ಇದೆಲ್ಲವನ್ನು ಮಾಡಿದ್ದು ತಮ್ಮ ಸ್ವಂತ ದುಡಿದ ಹಣದಿಂದ. ಇಷ್ಟಲ್ಲದೆ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದ ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಶಾಲೆಯ ಗೇಟು ತೆಗೆಯದೆ ಹೊರಗೆ ನಿಲ್ಲಿಸಿ, ಶಿಕ್ಷಕರಲ್ಲಿ ಸಮಯ ಪ್ರಜ್ಞೆ ಕಲಿಸಿದ ಶಿಕ್ಷಣ ಕಳಕಳಿಯ ಗಟ್ಟಿಗಿತ್ತಿ ಈ ತಾಯಿ.

ಶಿಕ್ಷಣ, ಸ್ವಚ್ಚತೆ, ಶಿಸ್ತಿನ ಮಹತ್ವ ಅರಿತಿದ್ದ ಹನುಮಮ್ಮನವರು, ತಮ್ಮ ಒಬ್ಬನೇ ಮಗ ಶಾಂತರಾಜುನನ್ನು ಪೊಲೀಸ್ ಇಲಾಖೆಗೆ ಸೇರಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು. ಶಾಂತರಾಜುರವರು ಪೊಲೀಸ್ ಆಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಅಧಿಕಾರಿಯಾಗಿ ನಿವೃತ್ತರಾದರು. ಮನುಮಮ್ಮ ತಮ್ಮ ಹಿರಿಯ ಮಗಳನ್ನು ಸ್ವಾತಂತ್ರ್ಯ ಹೋರಾಟಗಾರರಾದ ಹಾಸನದ ವೆಂಕಟಪ್ಪನವರಿಗೆ ವಿವಾಹ ಮಾಡಿಕೊಟ್ಟರು. ವೆಂಕಟಪ್ಪನವರು ಹಾಸನ ನಗರಸಭೆಯ ಸದಸ್ಯರಾಗಿ ಮಾಡಿದ ಕನ್ನಡ ಸೇವೆಗಾಗಿ 1992ರ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯ ಗೌರವ ಕೂಡ ಪಡೆದರು. ಎರಡನೆಯ ಮಗಳು ಜಯಮ್ಮನನ್ನು ಜನರ ಸೇವೆಗಾಗಿ ಆರೋಗ್ಯ ಇಲಾಖೆಯೇ ಸೂಕ್ತವೆಂದು ಹಠ ಹಿಡಿದು ಆರೋಗ್ಯ ಇಲಾಖೆಗೆ ಸೇರಿಸಿದರು. ಕೊನೆಯ ಮಗಳು ಭಾಗ್ಯ ಓದಿದರು, ಆದರೆ ಗೃಹಿಣಿಯಾಗಿಯೇ ಉಳಿದರು.
ಈ ಲೇಖನ ಓದಿದ್ದೀರಾ?: ಹಾಸನ ಮಣ್ಣಿನ ಹೆಣ್ಣು ಬೇರುಗಳು | ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ
ಮೊಹನದಾಸ ಕರಮ ಚಂದ ಗಾಂಧಿ, ಜವಾಹರಲಾಲ್ ನೆಹರು ಮುಂತಾದ ಧೀಮಂತರು ಭಾರತೀಯರನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅಪ್ಪಟ ದೇಶಪ್ರೇಮಿಗಳು. ಇವರನ್ನು ಭಾರತೀಯರಾರು ಮರೆಯುವುದಿಲ್ಲ. ಇಂತಹ ದೇಶಪ್ರೇಮಿಗಳ ಹೆಸರನ್ನು ಸದಾ ಸ್ಮರಿಸಲು ಸ್ವಾತಂತ್ರ್ಯಾ ನಂತರ ಭಾರತೀಯರು ತಮ್ಮ ಮಕ್ಕಳಿಗೆ ಗಾಂಧಿ, ನೆಹರು ಹೆಸರಿಡುತ್ತಿದ್ದರು. ಅದರಂತೆ ತಮ್ಮ ವಂಶದ ಮೊದಲ ಮೊಮ್ಮಗನಿಗೆ ಅಳಿಯ ವೆಂಕಟಪ್ಪನವರು ‘ಪುರುಷೋತ್ತಮ ನೆಹರು’ ಎಂದು ಹೆಸರಿಟ್ಟಾಗ ಹನುಮಮ್ಮ ಹಿರಿಹಿರಿ ಹಿಗ್ಗಿದರು. ಶಿಕ್ಷಣ ಪ್ರೇಮಿ ಹನುಮಮ್ಮನವರ ಮೊಮ್ಮಗ ಪುರುಷೋತ್ತಮ ನೆಹರು, ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಹನುಮಮ್ಮ ಕರ್ತವ್ಯ ನಿರ್ವಹಿಸಿದ ರವೀಂದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಅಂದರೆ ಹನುಮಮ್ಮ ಶಾಲೆ 1950ರಲ್ಲಿ ಪ್ರಾರಂಭವಾಗಿ ಈಗ 75 ವರ್ಷಗಳ ಅಮೃತ ಮಹೋತ್ಸವ ಪೂರೈಸಿದೆ. ಈ ಶಾಲೆಗೆ ತಮ್ಮ ತನು ಮನ ದನವನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ದುಡಿದ ಹನುಮಮ್ಮನವರು ಹುಟ್ಟಿ ಇದೇ 2024ಕ್ಕೆ ಶತಮಾನ ಕಳೆದಿದೆ. ಈ ಶಾಲೆಯಲ್ಲಿ ಹನುಮಮ್ಮನವರು ಸುದೀರ್ಘ ಸೇವೆ ಸಲ್ಲಿಸಿ 30 ಜೂನ್ 1982ರಂದು ನಿವೃತ್ತಿ ಹೊಂದಿದರೂ ಕೂಡ, ಪ್ರತಿ ದಿನ ಶಾಲೆಗೆ ಸರಿಯಾಗಿ ಹಾಜರಾಗಿ ತನ್ನ ಪ್ರೀತಿ ಶಾಲೆಯ ಮಕ್ಕಳ ಶಿಕ್ಷಣ, ಶಿಸ್ತು, ಸಮಯ ಪ್ರಜ್ಞೆಗೆ ಅವಿರತ ದುಡಿದು 3 ನವೆಂಬರ್ 2006ರ ತಮ್ಮ 82ನೆಯ ವಯಸ್ಸಿನಲ್ಲಿ ನಿಧನರಾದರು.
ಸ್ವಾತಂತ್ರೊತ್ತರ ಭಾರತದ ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ತಾವು ನಿಷ್ಕಲ್ಮಶವಾಗಿ, ನಿಸ್ಪçಹತೆಯಿಂದ ಅರ್ಪಿಸಿ, ಸವೆಸಿಕೊಂಡಿದ್ದ ಹನುಮಮ್ಮ- ಹಾಸನದ ಶಿಕ್ಷಣ ಕ್ಷೇತ್ರಕ್ಕೆ ಅಪರೂಪದ ಸೇವೆ ಸಲ್ಲಿಸಿದ ಸಾಧಕಿಯರಲ್ಲಿ ಅಪರೂಪದ ಗೌರವಾನ್ವಿತ ವ್ಯಕ್ತಿತ್ವ. ಅನಧಿಕೃತವಾಗಿ ಹನುಮಮ್ಮ ಶಾಲೆ ಎಂದೇ ಕರೆಯಲ್ಪಡುವ ರವೀಂದ್ರನಗರ ಶಾಲೆಗೆ ಹಾಸನದ ಶಾಸಕರಾದ ಸ್ವರೂಪ್ ಪ್ರಕಾಶ್ರವರ ಶಾಸಕರ ಅನುದಾನದಲ್ಲಿ ಹಾಗೂ ಹಲವಾರು ದಾನಿಗಳ ಉದಾರ ಕೊಡುಗೆಯಿಂದ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಈಗಲಾದರೂ ಈ ಕಟ್ಟಡಕ್ಕೆ ಮತ್ತು ಶಾಲೆಗೆ ‘ಹನುಮಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯೆಂದು ಅಧಿಕೃತವಾಗಿ ನಾಮಕರಣ ಮಾಡುವುದು ಮಹತ್ವದ ಶಿಕ್ಷಣ ಸಾದಕಿಗೆ ನಾವು ನೀಡುವ ಗೌರವ. ಈ ಸರ್ಕಾರಿ ಶಾಲೆಗೆ ಹನುಮಮ್ಮನವರ ಹೆಸರಿಟ್ಟಲ್ಲಿ ಶಾಸಕರ, ಸರ್ಕಾರದ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಶಾಸಕರು, ಸಾರ್ವಜನಿಕರು, ಸಮಾಜ ಚಿಂತಕರು, ಶಿಕ್ಷಣ ಕಳಕಳಿಯ ಎಲ್ಲರೂ ಈ ಕೆಲಸ ಮಾಡಲಿ, ಹನುಮಮ್ಮ ಶಾಲೆ ಸ್ಥಾವರವಾಗಿ ಶತಶತಮಾನಕ್ಕೂ ಉಳಿಯಲಿ. ಅಲ್ಲಿ ಓದುವ ಎಲ್ಲ ಮಕ್ಕಳು ಹನುಮಮ್ಮನವರಂತೆ ಉದಾತ್ತ ಸೇವೆ, ನಿಷ್ಕಲ್ಮಶ ಪ್ರೀತಿ, ಶಿಕ್ಷಣದ ಮಹತ್ವವನ್ನು ಅರಿತು- ಘನ ವ್ಯಕ್ತಿತ್ವಗಳಾಗಿ ನಾಡಿಗೆ ಕೊಡುಗೆ ನೀಡಿ ಹನುಮಮ್ಮನವರ ಹೆಸರನ್ನು ಚಿರಸ್ಥಾಯಿಗೊಳಿಸಲಿ ಎಂದು ಹಾರೈಸುವೆ.




