ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿದ್ದ ವೀರಪ್ಪನವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ವೀರಪ್ಪನವರ ಇಡೀ ಕುಟುಂಬ ಒಂದಲ್ಲಾ ಒಂದು ರೀತಿಯಲ್ಲಿ ಚಳವಳಿಗಳ ಭಾಗವಾಗಿದ್ದಾರೆ. ನಾವು ಅವರ ಮನೆಯಲ್ಲಿ ಕಳೆದ ನೆನಪುಗಳು ಇನ್ನೂ ಹಸಿಯಾಗಿದೆ. ಅವರ ದುಖಃತಪ್ತ ಕುಟುಂಬದ ಜೊತೆ ನಾವಿದ್ದೇವೆ ಎಂದು ಸಿಐಟಿಯು ಸಂಘಟನೆ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ವೀರಪ್ಪನವರ ಸಾವಿನ ಕುರಿತು ಸಿಐಟಿಯು ಸಂಘಟನೆ ಪತ್ರಿಕಾ ಹೇಳಿಕೆ ನೀಡಿದ್ದು, “ಸಿಐಟಿಯು ನೇತೃತ್ವದ KSRTC ನೌಕರರ ಫ಼ೆಡರೇಷನ್ ಸಂಘಟನೆಯನ್ನು ಹಾಸನ ಜಿಲ್ಲೆಯಲ್ಲಿ ಆರಂಭಿಸಿ ಅದರ ಮೊದಲ ಜಿಲ್ಲಾಧ್ಯಕ್ಷ ಹಾಗೂ ಸಿಐಟಿಯು ಜಿಲ್ಲಾ ಸದಸ್ಯರೂ ಆಗಿದ್ದ ವೀರಪ್ಪ ಅವರು ಫೆಬ್ರವರಿ 17ರಂದು ದುರ್ಮರಣಕ್ಕೀಡಾದ್ದಾರೆ” ಎಂದರು.
“ವೀರಪ್ಪ ಅವರು ಸಿಐಟಿಯುನ ಒಬ್ಬ ಅತ್ಯುತ್ತಮ ಸಂಗಾತಿಯಾಗಿದ್ದರು. KSRTC ಹಾಸನ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಲೇ ಸಾರಿಗೆ ನೌಕರರ ಸಂಘಟನೆ ಹಾಗೂ ಸಿಐಟಿಯು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇತ್ತೀಚೆಗೆ ಹಾಸನದಲ್ಲಿ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ದುಡಿದಿದ್ದರು”ಎಂದು ಸ್ಮರಿಸಿದರು.
“ವೀರಪ್ಪ ಅವರು ಅತ್ಯಂತ ಸಹೃದಯಿ ಸಂಗಾತಿಯಾಗಿದ್ದರು. ಅತ್ಯಂತ ಪ್ರಗತಿಪರ ನಿಲುವಿನ ಅವರು, ಎಲ್ಲ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಸಿಐಟಿಯು ಮತ್ತು ಸಾರಿಗೆ ನೌಕರರನ್ನು ಸಂಘಟಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದರು. ಯಾರಿಗೂ ಕೇಡನ್ನು ಬಯಸದ ಎಲ್ಲರ ಅತ್ಯಂತ ಪ್ರೀತಿಪಾತ್ರ ಸಂಗಾತಿಯಾಗಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಪೆಟ್ರೋಲ್ ಸುರಿದು ಸಾರಿಗೆ ನೌಕರನ ಬರ್ಬರ ಹತ್ಯೆ
ಸಂಗಾತಿ ವೀರಪ್ಪ ಅವರ ದುರಂತ ಅಂತ್ಯ ಅತ್ಯಂತ ಆಘಾತಕಾರಿಯಾದುದು. ಅವರನ್ನು ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು” ಎಂದು ಸಿಐಟಿಯು ಜಿಲ್ಲಾ ಸಮಿತಿ ಪರವಾಗಿ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಪುಷ್ಪ, ಜಿಲ್ಲಾ ಖಜಾಂಚಿ ಅರವಿಂದ್ ಇದ್ದರು.





