ಹಾಸನಾಂಬ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9ರ ವೇಳೆಗೆ 1.2 ಲಕ್ಷಕ್ಕೂ ಅಧಿಕ ಮಂದಿ ಹಾಸನಾಂಬೆ ದರ್ಶನ ಪಡೆದಿದ್ದು, ಜಾತ್ರಾ ಮಹೋತ್ಸವದ ವ್ಯವಸ್ಥೆಗಳು ಯೋಜನೆಯಂತೆ ಸುಗಮವಾಗಿ ನಡೆಯುತ್ತಿವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಶ್ಲಾಘಿಸಿದ್ದಾರೆ.
₹1000 ಟಿಕೆಟ್ ದರ್ಶನವು ದಿನವಿಡೀ 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ, ₹300 ಟಿಕೆಟ್ ದರ್ಶನವು 10 ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿದೆ. ಧರ್ಮ ದರ್ಶನವು 30 ನಿಮಿಷಗಳಿಂದ ಗರಿಷ್ಠ 2 ಗಂಟೆ 30 ನಿಮಿಷಗಳಲ್ಲಿ ಆಗುತ್ತಿದ್ದು, ಎಲ್ಲ ವ್ಯವಸ್ಥೆಗಳು ಸುಸೂತ್ರವಾಗಿ ಸಾಗಿವೆ. ಗಣ್ಯರ ದರ್ಶನವೂ ಗೌರವಯುತವಾಗಿ ಸಾಗುತ್ತಿದೆ. ಸಚಿವರು ಎಲ್ಲ ವ್ಯವಸ್ಥೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದು, ಶೌಚಾಲಯಗಳು ಅತ್ಯಂತ ಸ್ವಚ್ಛವಾಗಿವೆ, ಕಸವನ್ನು ನಿರಂತರವಾಗಿ ತೆಗೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

“ಶನಿವಾರ ರಾತ್ರಿ ಧರ್ಮ ದರ್ಶನದ ಸಾಲು ಭರ್ತಿಯಾಗಿದ್ದು, ಮಧ್ಯರಾತ್ರಿ 12ಕ್ಕೆ ಗರಿಷ್ಠ ಜನಸಂದಣಿ ನಿರೀಕ್ಷಿಸಲಾಗಿದೆ. ದರ್ಶನವು ರಾತ್ರಿ 2ಕ್ಕೆ ಸ್ಥಗಿತಗೊಳ್ಳುತ್ತಿದ್ದು, ಬೆಳಿಗ್ಗೆ 5 ಗಂಟೆಗೆ ಪುನಃ ಆರಂಭವಾಗಲಿದೆ. ಭಾನುವಾರ ಬೆಳಿಗ್ಗೆ ಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ದರ್ಶನಕ್ಕಾಗಿ 3 ಗಂಟೆ ಅಥವಾ ಅದಕ್ಕೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ಕಾಯಬೇಕಾಗಬಹುದು” ಎಂದು ಸಚಿವರು ಮುನ್ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ ಹಾಸನಾಂಬ ದೇವಾಲಯ: ಕರ್ತವ್ಯ ಲೋಪ ಆರೋಪದಲ್ಲಿ ನಾಲ್ವರು ಸರ್ಕಾರಿ ನೌಕರರ ಅಮಾನತು
ಭಕ್ತರ ಭಾರೀ ಜನಸಂದಣಿಯನ್ನು ತಪ್ಪಿಸಲು ಸಚಿವರು ಮತ್ತೊಮ್ಮೆ ಮನವಿ: “ಅಕ್ಟೋಬರ್ 18ರಿಂದ 22ರವರೆಗೆ ಅತಿಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ಸಾಧ್ಯವಾದರೆ ಅಕ್ಟೋಬರ್ 18ರ ಒಳಗೆಯೇ ಬಂದು ದರ್ಶನ ಪಡೆಯುವ ಮೂಲಕ ಸಹಕರಿಸಬೇಕು” ಎಂದು ಕೃಷ್ಣಬೈರೇಗೌಡರು ಕೋರಿದ್ದಾರೆ.





