ಈ ವರ್ಷದ ಮುಂಗಾರು ಋತುವಿನಲ್ಲಿ ಸುರಿದ ಮಳೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ 349 ಮನೆಗಳು ಹಾನಿಯಾಗಿವೆ ಎಂದು ವರದಿಯಾಗಿದೆ. ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಒಟ್ಟು 349 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೂಕಿ, ಕೇವಲ 188 ಅರ್ಜಿಗಳನ್ನು ಮಾತ್ರವೇ ತಾಲೂಕು ಆಡಳಿತಗಳು ಅನುಮೋದಿಸಿದ್ದು, 161 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ಮನೆ ಕಳೆದುಕೊಂಡಿವರು ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಿ, ಪರಿಹಾರ ಮಂಜೂರು ಮಾಡುವ ಜವಾಬ್ದಾರಿಯನ್ನು ಆಯಾ ತಾಲೂಕುಗಳ ತಹಶೀಲ್ದಾರ್ಗಳಿಗೆ ನೀಡಲಾಗಿತ್ತು. ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 349 ಮಂದಿ ತಮ್ಮ ಮನೆ ಹಾನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ, 161 ಅರ್ಜಿಗಳನ್ನು ತಹಶೀಲ್ದಾರರು ತಿರಸ್ಕರಿಸಿದ್ದಾರೆ. ಮಾನ್ಯ ಮಾಡಲಾದ ಅರ್ಜಿಗಳಲ್ಲಿ ಕೆಲವರಿಗೆ ಈಗಾಗಲೇ ಪರಿಹಾರವನ್ನೂ ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಳೆಯಿಂದ ಮನೆಗಳು ಹಾನಿಯಾಗಿದ್ದು, ಪರಿಹಾರಕ್ಕೆ ಅರ್ಹವೇ ಎಂಬುದನ್ನು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಿಯಮಾವಳಿ ಪ್ರಕಾರ ನಿರ್ಧರಿಸಲಾಗುತ್ತದೆ. ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ.
ಸಲ್ಲಿಸಲಾಗಿದ್ದ ಹಲವು ಅರ್ಜಿಗಳು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಿಯಮಗಳ ಅಡಿಯಲ್ಲಿ ಪರಿಹಾರಕ್ಕೆ ಅರ್ಹವಲ್ಲ ಎಂದು ಹಲವು ಅರ್ಜಿಗಳನ್ನು ತಹಶೀಲ್ದಾರರು ತಿರಸ್ಕರಿಸಿದ್ದಾರೆ. ನಿಯಮಾವಳಿಗಳ ಅಡಿಯಲ್ಲಿ ಮನೆಗೆ ಹಾನಿಯನ್ನು ಪರಿಶೀಲಿಸಿ, ಅರ್ಜಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?
ಈ ವರ್ಷದ ಪೂರ್ವ ಮುಂಗಾರಿನಲ್ಲಿ ಮನೆ ಹಾನಿ ಸಂಬಂಧ 89 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ, 77 ಅರ್ಜಿಗಳನ್ನು ತಿರಸ್ಕರಿಸಿ, ಕೇವಲ 12 ಅರ್ಜಿಗಳನ್ನು ಮಾತ್ರ ಅಂಗೀಕರಿಸಲಾಗಿತ್ತು. ಮಾನ್ಯವಾದ ಫಲಾನುಭವಿಗಳಿಗೆ 7.54 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ ಎಂದು ವರದಿಯಾಗಿದೆ.
“ಪರಿಪೂರ್ಣ ಮನೆಗಳನ್ನು ಹೊಂದಿಲ್ಲದ, ತಗಡಿನ ರೀತಿಯ ಶೆಡ್ಗಳಲ್ಲಿ ವಾಸಿಸುತ್ತಿದ್ದವರೂ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಪರಿಹಾರ ಪಡೆದವರೂ ಮತ್ತೆ ಅರ್ಜಿ ಸಲ್ಲಿಸಿದ್ದರು. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ” ಎಂದು ತಹಶೀಲ್ದಾರ್ವೊಬ್ಬರು ತಿಳಿಸಿದ್ದಾರೆ.
ಇನ್ನು, ಮುಂಗಾರು ಮಳೆ ಅವಧಿಯಲ್ಲಿ ಜಿಲ್ಲೆಯ 18,821 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ಹಾನಿ ಅನುಭವಿಸಿದ್ದ 40,554 ರೈತರನ್ನು ಪರಿಹಾರಕ್ಕೆ ಪಟ್ಟಿ ಮಾಡಲಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಮಳೆ, ಸಿಡಿಲು, ಕಟ್ಟಡ ಮತ್ತು ಮರ ಕುಸಿತದಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ಮೃತ ಕುಟುಂಬಗಳಿಗೆ ಒಟ್ಟು 55 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.




