ಸರ್ಕಾರ ಪರಿಹಾರ ಧನ ಹೆಚ್ಚಿಸಿದ ಬಳಿಕ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ, ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ರೈತ ಸಂಘಟನೆಗಳು ಮಾತನಾಡುತ್ತಿವೆ. ಹಾವೇರಿ ಜಿಲ್ಲೆಯಲ್ಲಿ 2015ರಿಂದ ಇಲ್ಲಿಯವರೆಗೆ ಒಟ್ಟು 809 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ, ದಾಖಲೆ ಪರಿಶೀಲನೆಯ ಬಳಿಕ 623 ಪ್ರಕರಣಗಳನ್ನು ಮಾತ್ರ ಸಹಾಯಕ ಆಯುಕ್ತರ ಸಮಿತಿ ಗಣನೆಗೆ ತೆಗೆದುಕೊಂಡಿದೆ. 166 ಪ್ರಕರಣಗಳನ್ನು ತಿರಸ್ಕರಿಸಿದೆ. ಅವುಗಳು ಪರಿಹಾರ ಪಡೆಯಲು ಅನರ್ಹ ಎಂದು ಹೇಳಿದೆ.
2023ರ ಮಾರ್ಚ್ ತಿಂಗಳವರೆಗೆ 38 ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಈ ಪೈಕಿ, ಎರಡು ಪ್ರಕರಣಗಳನ್ನು ಸಮಿತಿ ತಿರಸ್ಕರಿಸಿದೆ. 18 ಪ್ರಕರಣಗಳ ಎಫ್ಎಸ್ಎಲ್ ವರದಿಗಾಗಿ ಸಮಿತಿ ಕಾಯುತ್ತಿದೆ. ಉಳಿದ 20 ಪ್ರಕರಣಗಳಲ್ಲಿ 16 ಪ್ರಕರಣಗಳ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.
ಸರ್ಕಾರವು ಮೃತ ರೈತರ ಕುಟುಂಬಗಳಿಗೆ ಪರಿಹಾರವನ್ನು 5 ಲಕ್ಷಕ್ಕೆ ಹೆಚ್ಚಿಸುವ ಮೊದಲು – ಅಂದರೆ, 2012ರಿಂದ 2015ರವರೆಗೆ ಹಾವೇರಿ ಜಿಲ್ಲೆಯಲ್ಲಿ 21 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 21 ಪ್ರಕರಣಗಳಲ್ಲಿ ಸಮಿತಿಯು 14 ಪ್ರಕರಣಗಳನ್ನು ತಿರಸ್ಕರಸಿದ್ದು, 7 ಪ್ರಕರಣಗಳಿಗೆ ಮಾತ್ರ ಪರಿಹಾರ ನೀಡಿದೆ. 14 ಪ್ರಕರಣಗಳು ತಿರಸ್ಕಾರಗೊಂಡಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಎಂಬುದು ಗಮನಾರ್ಹ.
“ರೈತ ಮೃತಪಟ್ಟ ಮೂರು ತಿಂಗಳೊಳಗೆ ಮೃತ ರೈತನ ಕುಟುಂಬದ ಸದಸ್ಯರು ಸಹಾಯಕ ಆಯುಕ್ತರ ಸಮಿತಿಯ ಸಹಾಯಕ ನಿರ್ದೇಶಕರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಸಮಿತಿಯು ಪೊಲೀಸ್ ವರದಿಯೊಂದಿಗೆ ಆತ್ಮಹತ್ಯೆ ಸಂತ್ರಸ್ತರ ಸಾಲ, ಆರ್ಟಿಸಿ ಮತ್ತು ಬೆಳೆ ನಷ್ಟದಂತಹ ವಿವರಗಳನ್ನು ಪರಿಶೀಲಿಸುತ್ತಿದೆ. ರೈತ ಆತ್ಮಹತ್ಯೆ ಪ್ರಕರಣ ಪರಿಹಾರಕ್ಕೆ ಯೋಗ್ಯವೇ ಎಂಬುದನ್ನು ಸಮಿತಿ ನಿರ್ಧರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ. ಅಂತಿಮವಾಗಿ ಜಿಲ್ಲಾಧಿಕಾರಿ ಅದನ್ನು ಸರ್ಕಾರಿ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ಪರಿಹಾರಕ್ಕೆ ಶಿಫಾರಸು ಮಾಡುತ್ತಾರೆ” ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರಚೋದನಾಕಾರಿ ಹೇಳಿಕೆ: ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು
“ಪ್ರಕರಣವು ಪರಿಹಾರಕ್ಕೆ ಅರ್ಹವಲ್ಲದಿದ್ದರೆ, ಅದನ್ನು ಸಮಿತಿಯು ತಿರಸ್ಕರಿಸಬಹುದು. ಅರ್ಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ, ಸರ್ಕಾರವು 15 ದಿನಗಳಲ್ಲಿ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆ ಸಂಖ್ಯೆಗೆ ನೇರವಾಗಿ ಪರಿಹಾರದ ಮೊತ್ತವನ್ನು ಜಮಾ ಮಾಡುತ್ತದೆ” ಎಂದು ಅವರು ತಿಳಿಸಿದ್ದಾರೆ.
ರೈತರ ಆತ್ಮಹತ್ಯೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಯಾಸಕರ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಮತ್ತು ಪರಿಹಾರ ನೀಡಲು ದಾಖಲೆ ಪರಿಶೀಲಿಸುವ ಸಮಿತಿಯು ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.




