ಬೇಂದ್ರೆ ಅವರ ಮನೆಯ ಮಾತು ಮರಾಠಿಯಾದರೂ ಮನದ ಮಾತು ಕನ್ನಡವಾಗಿತ್ತು. ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ರಾಮಾಯಣ, ಮಹಾಭಾರತ, ಬಸವಾದಿ ಶರಣರ ಚಿಂತನೆ, ದಾಸ ಸಾಹಿತ್ಯ, ತತ್ವಶಾಸ್ತ್ರ, ಖಗೋಳ ಉಪನಿಷತ್ತು ಎಲ್ಲ ಬಲ್ಲವರಾಗಿದ್ದರು. ಬದುಕಿನ ಭವಣೆಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಬಂದ ಕಷ್ಟಗಳನ್ನು ಮೆಟ್ಟಿ ನಿಂತು ಪಾಡನ್ನೇ ಹಾಡನ್ನಾಗಿಸಿ ನಾಡಿಗೆ ಗಟ್ಟಿ ಸಾಹಿತ್ಯವನ್ನು ಕೊಟ್ಟರು ಎಂದು ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಾಹಿತಿ ಮಲ್ಲಪ್ಪ ಕರೆಣ್ಣನವರ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾವೇರಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಏರ್ಪಡಿಸಿದ್ದ ವರಕವಿ ದ.ರಾ.ಬೇಂದ್ರೆ ಅವರ ಬದುಕು ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬೆಂಡರೆಯವರು ಬದುಕಿನುದ್ದಕ್ಕೂ ನಿರುದ್ಯೋಗ ಬಡತನಗಳೊಡನೆ ಹೋರಾಟ ನಡೆಸಿದ ಕವಿ. ಬೇಂದ್ರೆ ಜೀವನದಲ್ಲಿ ಎಂದೂ ದೃತಿಗೆಡಲಿಲ್ಲ. ಪ್ರಕೃತಿ, ಸಮಾಜ, ಸಾವು, ನೋವು, ಪ್ರೀತಿ ಅವರ ಕಾವ್ಯದ ಪ್ರಮುಖ ವಸ್ತುಗಳಾಗಿವೆ. ನಮ್ಮ ನೆಲದ ಸತ್ವಹೀರಿ ಸಾಹಿತ್ಯ ಕಟ್ಟಿ ನಾಡಿಗೆ ಗರಿಮೆ ತಂದುಕೊಟ್ಟಿದ್ದಾರೆ ಎಂದರು.
ರಾಣೆಬೆನ್ನೂರಿನ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಸಾವಕ್ಕನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬೇಂದ್ರೆಯವರು ಕನ್ನಡ ನಾಡು-ನುಡಿ ಜನಪದ ಸಂಸ್ಕೃತಿ ಸಾಮಾಜಿಕ ಶೋಷಣೆ ಪ್ರಕೃತಿ ಪರಿಸರ ಸಾಮಾಜಿಕ ಸಂಘರ್ಷ ಧಾರವಾಡದ ನೆಲ ಇವುಗಳ ಕುರಿತಾಗಿ ಸಾಹಿತ್ಯ ರಚಿಸಿದ್ದಾರೆ. ಜನಸಾಮಾನ್ಯರ ಆಡು ಬಾಷೆಯಲ್ಲಿ ದೇಶಿಯ ಸಾಹಿತ್ಯ ರಚಿಸಿದ ನಮ್ಮ ನೆಲದ ಹೆಮ್ಮೆಯ ಕವಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಸಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೀವರಾಜ ಛತ್ರದ ಮಾತನಾಡಿ, ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿಯು ನಾಕುತಂತಿ, ಅದರಲ್ಲಿ ನಾನು, ನೀನು, ಆನು, ತಾನು ಎಂಬ ಚತುರ್ಮುಖ ದರ್ಶನಗಳು ನಾಕುತಂತಿ ಕವಿತೆಯ ಆಶಯವಾಗಿದೆ. ತಮ್ಮ ಬದುಕಿನ ದುಃಖಗಳನ್ನೊಳಗೊಂಡು ಮನಸ್ಸು ಪ್ರಫುಲ್ಲವಾದಾಗೆಲ್ಲ ಲೋಕದ ಎಲ್ಲಾ ಸಂಗತಿಗಳನ್ನು ಕಾವ್ಯದಲ್ಲಿ ಹಿಡಿದಿಡಬೇಕೆಂಬ ದೀಕ್ಷೇ ತೊಟ್ಟವರು ಬೇಂದ್ರೆ. ಮೂವತ್ತೇಳು ಕವನ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕಾವ್ಯವನ್ನೇ ಉಸಿರಾಡಿದ ಅಪರೂಪದ ಕವಿ ಎಂದರು.
ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಮಾರುತಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯ ಕೊಣತಿ, ಹನುಮಂತ ಬೋವಿ ಶ್ರೀಧರ ಹಣಿಗಿ,ಶಂಕರ ಲಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಎಲಿಗಾರ ನಿರೂಪಿಸಿದರು. ಸಂಗೀತ ಶಿಕ್ಷಕ ಪ್ರಕಾಶ ಕೊರಮರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಶಿಕ್ಷಕ ಮಾಲತೇಶ ಕೋರಚರ ಸ್ವಾಗತಿಸಿದರು. ಪ್ರಕಾಶ ಕೆ ವಂದಿಸಿದರು.





