“ಇಂದಿನ ಡಿಜಿಟಲ್ ಯುಗದಲ್ಲಿ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಇ-ಕಾಮರ್ಸ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದಂತೆ, ಜನರು ಸೈಬರ್ ಅಪರಾಧಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅನಭಿಜ್ಞತೆ, ನಂಬಿಕೆ ಮತ್ತು ಜಾಗೃತಿಯ ಕೊರತೆಯಿಂದ ಅಪಾರ ಪ್ರಮಾಣದ ಹಣ ವಂಚನೆಗೆ ಒಳಗಾಗುತ್ತಿದೆ. ಸೈಬರ್ ಅಪರಾಧಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಮುಖಂಡರು ಜೇಬ್ರಾನ್ ಖಾನ್ ತಿಳಿಸಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ವಿರುದ್ಧ ಕ್ರಮಕ್ಕೆ ಕೈಗೊಳ್ಳುವಂತೆ ತಹಸಿಲ್ದಾರ್ ರಿಯಾಜುುದ್ದಿನ್ ಭಗವಾನ್ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರರಿಗೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕರ್ನಾಟಕವು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಡಿಜಿಟಲ್ ಅಪರಾಧಗಳ ತಡೆಗೆ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದರು.
“ಕರ್ನಾಟಕವು ದೇಶದಲ್ಲಿ ಎರಡನೇ ಅತಿ ಹೆಚ್ಚು ಸೈಬರ್ ಅಪರಾಧಗಳು ನಡೆಯುವ ರಾಜ್ಯವಾಗಿದೆ. 2024ರಲ್ಲಿ 22,472 ಪ್ರಕರಣಗಳು, ಮತ್ತು 2025 ಜುಲೈ ವರೆಗೆ 8,620 ಪ್ರಕರಣಗಳು ದಾಖಲಾಗಿವೆ. ಬಂಧನಗಳ ಸಂಖ್ಯೆ ಅತ್ಯಂತ ಕಡಿಮೆ—2024ರಲ್ಲಿ 771 ಬಂಧನ, 2025 ಜುಲೈವರೆಗೆ 357 ಬಂಧನವಾಗಿವೆ. ಜನರು ಕಳೆದುಕೊಂಡ ಹಣ 2024ರಲ್ಲಿ ₹2,515 ಕೋಟಿ, 2025 ಜುಲೈವರೆಗೆ ₹1,287 ಕೋಟಿ ದಾಟಿದೆ. ಅನೇಕರು ದೂರು ನೀಡಲು ಹೆದರುತ್ತಿರುವ ಕಾರಣ ನಿಜವಾದ ಹಾನಿ ಅಧಿಕೃತ ಅಂಕಿ-ಅಂಶಗಳಿಗಿಂತ ಬಹಳ ಹೆಚ್ಚು” ಎಂದು ತಿಳಿಸಿದರು.
“ಜನರ ಹಣ, ವೈಯಕ್ತಿಕ ಮಾಹಿತಿ ಮತ್ತು ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ತಕ್ಷಣ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಸೋಲಿಡಾರಿಟಿ ಯೂತ್ ಮೂವ್ಮೆಂಟ್ನ ಬೇಡಿಕೆಗಳು:
1) ಡಿಸೆಂಬರ್ 8ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಅತ್ಯಂತ ಪ್ರಾಮುಖ್ಯತೆಯಿಂದ ಚರ್ಚಿಸಬೇಕು.
2) ಸೈಬರ್ ವಂಚನೆಗೆ ಬಲಿಯಾದ ನಾಗರಿಕರಿಗೆ ಸ್ಪಷ್ಟವಾದ ಆರ್ಥಿಕ ರಕ್ಷಣಾ ವ್ಯವಸ್ಥೆ ಒದಗಿಸಬೇಕು.
3) ರಾಷ್ಟ್ರೀಯ ಸಹಾಯವಾಣಿಯ ಜೊತೆಗೆ ರಾಜ್ಯ ಮಟ್ಟದ ವಿಶೇಷ ಸೈಬರ್ ಸಹಾಯವಾಣಿ ಸ್ಥಾಪಿಸಬೇಕು.
4) ಯುವಕರು ಮತ್ತು ನಾಗರಿಕರಿಗೆ ಸೈಬರ್ ಜಾಗೃತಿ ಅಭಿಯಾನಗಳನ್ನು ವಿಸ್ತರಿಸಬೇಕು.
5) ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಶೀಘ್ರದಲ್ಲೇ ನೀಡಲಿರುವ ತಾಂತ್ರಿಕ ಶಿಫಾರಸ್ಸುಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸಬೇಕು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಸದಸ್ಯರು ಜೈದ್ ಖಾನ್, ಜೈಬ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಲ್ಮಾನ್ ಖತೀಬ್, ಮತ್ತು ಸ್ಥಳೀಯ ಘಟಕದ ನಾಯಕ ಜೆಬ್ರಾನ್ ಖಾನ್ ಉಪಸ್ಥಿತರಿದ್ದರು.





