‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬ ನಾಣ್ಣುಡಿಯನ್ನು ಅಳವಡಿಸಿಕೊಂಡ ರೈತ ನಾಗರಾಜ ಹುಲಗೂರು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಿಂದ ಮೂರು ಕಿಲೋ ಮೀಟರ್ ಹತ್ತಿರದಲ್ಲಿರುವ ಮುಗಳಿ ಗ್ರಾಮದವರು. ಬಡ ರೈತ ಕುಟುಂಬದಿಂದ ಬಂದ ನಾಗರಾಜ ಅವರು ಪಿಯುಸಿ ಪರೀಕ್ಷೆಯ ಹೊತ್ತಿಗೆ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಶಿಕ್ಷಣ ಮುಂದುವರಿಸಲಾಗದೆ ಬದುಕ ಕಟ್ಟಿಕೊಳ್ಳಲು ಎಲ್ಲರು ಪಯಣಿಸಿದಂತೆ ಬೆಂಗಳೂರು ಕಡೆಗೆ ಇವರು ಪಯಣ ಬೆಳೆಸಿದರು.
ಬೆಂಗಳೂರಿಗೆ ಕಾಲಿಟ್ಟ ಇವರಿಗೆ ಸುಲಭಕ್ಕೆ ಕೆಲಸವೇನೂ ಸಿಗಲಿಲ್ಲ. ಬದುಕು ಕಟ್ಟಿಕೊಳ್ಳುವಷ್ಟು ಆದಾಯವೂ ಬರುತ್ತಿರಲಿಲ್ಲ. ಆರಂಭದ ದಿನಳಲ್ಲಿ ವಿಆರ್ಎಲ್, ಬೇಕರಿ, ರಾಸಾಯನಿಕ ಕಂಪನಿ ಸೇರಿದಂತೆ ವಿವಿಧೆಡೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದರು. ಸೆಕ್ಯೂರಿಟಿಯಾಗಿ ಒಂದಷ್ಟು ವರ್ಷ ಕೆಲಸ ಮಾಡಿದರು. ಬೇರೆಯವರ ಅಡಿಯಾಳಾಗಿ ಕೆಲಸ ಮಾಡಿದ್ದು ಸಾಕು ಎನಿಸಿದಾಗ ನೆನಪಾಗಿದ್ದು ಊರಿನಲ್ಲಿದ್ದ ತಮ್ಮದೇ ಹೊಲ. ಇರುವ ಜಮೀನಿನಿಂದಲೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡು ಮತ್ತೆ ಮರಳಿ ಮುಗಳಿ ಗ್ರಾಮಕ್ಕೆ ವಾಪಸಾಗಿ ಸಾವಯವ ಸಮಗ್ರ ಕೃಷಿಯತ್ತ ತೊಡಗಿಕೊಂಡರು.


ನೈಸರ್ಗಿಕ ಬೆಳೆ, ಆರೋಗ್ಯಕರ ಆಹಾರ, ಆರೋಗ್ಯಕರ ಉತ್ಪನ್ನ ಈ ಮೂರು ಅಂಶಗಳ ಆಧಾರದ ಮೇಲೆ ನಾಗರಾಜ ಅವರು 2016ರಿಂದ ಸಾವಯವ ಸಮಗ್ರ ಕೃಷಿಯನ್ನು ಪ್ರಾರಂಭ ಮಾಡುತ್ತಾರೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ, ಲಾಭ ಪಡೆಯುವ ಉಪಾಯಗಳನ್ನು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿ ಪಡೆದು ಕಂಡುಕೊಳ್ಳುತ್ತಾರೆ. ಸಬ್ಸಿಡಿಯಲ್ಲಿ ಸಸಿ, ಗಿಡಗಳನ್ನು ಖರೀದಿ ಮಾಡಿ ತಮ್ಮ ಹೊಲದಲ್ಲಿ ಸಮಗ್ರ ಕೃಷಿಯನ್ನು ಮಾಡಲು ಮುಂದಾಗುತ್ತಾರೆ. ಅದರಲ್ಲಿ ಯಶಸ್ಸನ್ನೂ ಕಾಣುತ್ತಾರೆ.
ಒಂದು ಎಕರೆ ಭೂಮಿಯಲ್ಲಿ ಸಾವಯವ ಸಮಗ್ರ ಕೃಷಿ: ನಾಗರಾಜ ಅವರು ತಮ್ಮ ಮೂರು ಎಕರೆ ಭೂಮಿಯಲ್ಲಿ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ಹೊಲದ ಸುತ್ತಲೂ ಸಾಗವಾನಿ, ಅಕಾಶಿ, ಶಿಲ್ವರು, ಗಾಳಿ ಗಿಡ, ಹೆಬ್ಬೇವು, ಮಹಾಗಣಿ ಸೇರಿದಂತೆ ಐದು ನೂರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಜೊತೆಗೆ ಗೋಡಂಬಿ, ಮಾವು, ಪೇರಲ, ಸೀತಾಫಲ, ಅಲಸಿನ ಗಿಡ, ನಿಂಬೆಗಿಡ, ದಾಳಿಂಬೆ ಗಿಡ, ಹುಣಸೆ ಗಿಡ ಸೇರಿ ಸುಮಾರು ಇನ್ನೂರು ಹಣ್ಣಿನ ಮರಗಳನ್ನು ಬೆಳೆದಿದ್ದಾರೆ. ಜೊತೆಗೆ ಜೋಳ, ಗೆಣಸು, ಅರಿಶಿನ ಹೀಗೆ ಅನೇಕ ಬೆಳೆಗಳನ್ನು ಬೆಳೆದು ಸಾವಯವ ಸಮಗ್ರ ಕೃಷಿಯನ್ನು ಮಾಡುತ್ತಿದ್ದಾರೆ.
ಈ ಎಲ್ಲ ಬೆಳೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಹೊಲದ ಬೆಳೆಗಳಿಂದ ಸಿಗುವ ಕಸವನ್ನೇ ಗೊಬ್ಬರವನ್ನಾಗಿ ಮಾರ್ಪಡಿಸಿ ಬೆಳೆಗಳಿಗೆ ನೀಡುತ್ತಾರೆ.
ಮನೆಯ ಹಿತ್ತಲಲ್ಲಿ ಔಷಧಿಯ ತೋಟ: ಪರಿಸರದ ಬಗ್ಗೆ ಇದ್ದಷ್ಟೇ, ಆರೋಗ್ಯದ ಮೇಲೂ ಕಾಳಜಿ ನಾಗರಾಜ ಅವರಿಗೆ ಇದೆ. “ಹಿಂದೆ ನಮ್ಮ ಹಿರಿಯರು ಕಾಯಿಲೆ ಬಂದಾಗ ಔಷಧಿ ಗಿಡಗಳನ್ನು ಬಳಸಿಕೊಳ್ಳುವ ಮೂಲಕ ಗುಣಮುಖರಾಗುತ್ತಿದ್ದರು. ಹಾಗಾಗಿ ಮನೆಯ ಹಿತ್ತಲಿನ ಜಾಗದಲ್ಲಿ ಅಮೃತ ಬಳ್ಳಿ, ವಂದೆಲಗಾ, ಬ್ರಾಹ್ಮೀ, ಮುಟ್ಟಿದರೆ ಮುನಿ, ಶತಾವರಿ, ಅಶ್ವಗಂಧ, ತುಳಸಿ, ಕಾಮಕಸ್ತೂರಿ, ತುಳಸಿ, ಲವಂಗ, ಕಾಕಮಾಚಿ ಹೀಗೆ ಅರವತ್ತು ಬಗೆಯ ಔಷಧಿ ಸಸಿಗಳನ್ನು ಬೆಳೆಸಿದ್ದೇವೆ. ಈ ಔಷಧಿ ಗಿಡಗಳಿಗಾಗಿ ಜನರೇ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಇದರಿಂದಲೇ ಒಂದು ಲಕ್ಷ ಆದಾಯ ಬರುತ್ತದೆ” ಎನ್ನುತ್ತಾರೆ ನಾಗರಾಜ ಹುಲಗೂರು.
ಬೀಜ ಭಂಡಾರ: ಹಿಂದೆ ಹಿರಿಯರು ಹೊಲದಲ್ಲಿಯೇ ಬೆಳೆದ ಬೆಳೆಗಳ ಬೀಜಗಳನ್ನು ಸಂಗ್ರಹಣೆ ಮಾಡಿ ಮತ್ತೆ ಬಿತ್ತನೆ ಮಾಡುತ್ತಿದ್ದರು. ಹಾಗೆಯೇ ನಾಗರಾಜ ಅವರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳು, ತಾವು ಬೆಳೆದ ಔಷಧಿ ಗಿಡಗಳ ಬೀಜಗಳನ್ನು ಸಂಗ್ರಹಣೆ ಮಾಡಿದ್ದು, ಅವಶ್ಯಕತೆ ಇರುವವರಿಗೆ ಬೀಜಗಳನ್ನು ಮಾರಾಟ ಮಾಡುತ್ತಾರೆ.


ನಾಗರಾಜ್ ಹುಲಗೂರು ಅವರ ಸಾವಯವ ಸಮಗ್ರ ಕೃಷಿಯಿಂದ ಪ್ರೇರಣೆಗೊಂಡು ಗ್ರಾಮದಲ್ಲಿ ಅನೇಕ ರೈತರು ಸಾವಯವ ಸಮಗ್ರ ಕೃಷಿಯನ್ನು ಮಾಡಲು ಆರಂಭಿಸಿದ್ದಾರೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ ಯುವ ಪ್ರಗತಿಪರ ರೈತ ನಾಗರಾಜ ಹುಲಗೂರು, “ಶೂನ್ಯ ಬಂಡವಾಳದಿಂದ ಸಾವಯವ ಸಮಗ್ರ ಕೃಷಿಯನ್ನು ಮಾಡಿರುವೆ. ಮಾವು, ಪೇರಲ, ನಿಂಬೆ, ದಾಳಿಂಬೆ, ಮರಗಳು ಇವೆಲ್ಲ ಎಫ್ ಡಿ ಇದ್ದ ಹಾಗೆ. ಲಕ್ಷ ಲಕ್ಷ ಆದಾಯ ಬಂದೇ ಬರುತ್ತದೆ. ನಾವು ಯಾವತ್ತೂ ಮಾರುಕಟ್ಟೆಗೆ ಹೋಗಿ ಮಾರುವುದಿಲ್ಲ. ಗ್ರಾಹಕರೇ ನಮ್ಮ ಹೊಲಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ. ಸುಮಾರು ಒಂದು ವರ್ಷಕ್ಕೆ ನಾಲ್ಕರಿಂದ ಐದು ಲಕ್ಷದ ವರೆಗೆ ಆದಾಯ ಬರುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಹಾವೇರಿ | ಚಿರತೆ ದಾಳಿಗೆ ರೈತ ಸಾವು
ಸಾವಯವ ಸಮಗ್ರ ಕೃಷಿ ಮಾಡಲು ಹಿಂಜರಿಯುವ ಜನರ ಮಧ್ಯದಲ್ಲಿಯೇ ಯುವ ಪ್ರಗತಿಪರ ರೈತ ನಾಗರಾಜ ಹುಲಗೂರು ಅವರು ಸಾವಯವ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿ, ಲಕ್ಷ ಲಕ್ಷ ಸಂಪಾದನೆ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ಇಂದಿಗೆ ಉತ್ತರ ಕರ್ನಾಟಕದ ಯುವ ರೈತರಿಗೆ ಪ್ರೇರಣೆಯಾಗಿದ್ದಾರೆ. ಅರ್ಧಕ್ಕೆ ನಿಂತ ವಿದ್ಯಾಭ್ಯಾಸ, ನಗರದಲ್ಲಿನ ಅಸ್ಥಿರ ಉದ್ಯೋಗ, ಆರ್ಥಿಕ ಒತ್ತಡ… ಇವು ಯಾವುವೂ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ, ಸ್ವಂತ ಭೂಮಿಯ ಮೇಲೆ ನಂಬಿಕೆ ಇಟ್ಟು ಸಾವಯವ ಸಮಗ್ರ ಕೃಷಿಯ ದಿಸೆಯಲ್ಲಿ ಹೆಜ್ಜೆ ಇಟ್ಟ ಅವರು, ಶೂನ್ಯ ಬಂಡವಾಳದಿಂದಲೇ ಮಾದರಿ ಕೃಷಿ ಮಾದರಿಯನ್ನು ನಿರ್ಮಿಸಿ ಉನ್ನತ ಶಿಕ್ಷಣ ಪಡೆದವರಿಗೂ ಮಾದರಿಯಾಗಿದ್ದಾರೆ.
ಇಂದು ಮಾರುಕಟ್ಟೆಗೂ ಕಾಲಿಡದ ಗ್ರಾಹಕರನ್ನು ಹೊಲಕ್ಕೇ ಕರೆದೊಯ್ಯುವ ವಿಶ್ವಾಸ, ವರ್ಷಕ್ಕೆ ನಾಲ್ಕು ರಿಂದ ಐದು ಲಕ್ಷ ಆದಾಯ ತರುವ ಯೋಜನೆ, ಮತ್ತು ತನ್ನದೇ ಮಾದರಿಯಿಂದ ಅನೇಕ ರೈತರ ಮನಸ್ಥಿತಿಯನ್ನು ಬದಲಾಯಿಸಿರುವ ಸಾಧನೆ—ಇವೆಲ್ಲವೂ ನಾಗರಾಜ ಹುಲಗೂರರನ್ನು ಕೇವಲ ಯಶಸ್ವಿ ರೈತನನ್ನಾಗಿ ರೂಪಿಸಿವೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




