“ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಿಸಬೇಕಾಗಿದೆ ತಳಪಾಯ ಗಟ್ಟಿಯಾಗಬೇಕು. ಈ ಹಿನ್ನಲೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು” ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರು ಹೇಳಿದರು.
ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಇಂದು ಮಂಗಳವಾರ ಎಸ್.ಎಸ್.ಎಲ್.ಸಿ.ಫಲಿತಾಂಶದ ಸುಧಾರಣೆಯ ಕುರಿತು ಜಿಲ್ಲೆಯ ಶಿಕ್ಷಕರೊಂದಿಗೆ ಸಭೆ ಹಾಗೂ ಸಂವಾದದಲ್ಲಿ ಅವರು ಮಾತನಾಡಿದರು.
“ಒಂದೊಂದು ತರಗತಿಗೆ ಒಬೊಬ್ಬರು ಶಿಕ್ಷಕರು ಇರಬೇಕು. ಅಂದಾಗ ಮಾತ್ರ ಎಸ್.ಎಸ್.ಎಲ್.ಸಿ. ಉತ್ತಮ ಫಲಿತಾಂಶ ಸಾಧ್ಯ” ಎಂದು ಹೇಳಿದರು.
“ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ, ಈಗಿನಂತೆ ಇಷ್ಟೇ ಫಲಿತಾಂಶ ಆಗಬೇಕು ಎಂಬ ಯಾವುದೇ ಕಾನೂನು ಇರಲಿಲ್ಲ. ಎಲ್ಲರೂ ಪರೀಕ್ಷೆ ಬರೆಯುತ್ತಿದ್ದರು. ಉತ್ತೀರ್ಣ-ಅನುತ್ತೀರ್ಣ ಆದರೂ ಯಾರೂ ಕೇಳುತ್ತಿರಲಿಲ್ಲ. ಈಗ ಹಾಗಲ್ಲ. ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಶಿಕ್ಷಕನಿಗೆ ಮಾನಸಿಕ ನೆಮ್ಮದಿ ಇದ್ದರೆ ಉತ್ತಮ ಶಿಕ್ಷಣ ನೀಡಲು ಸಾಧ್ಯ” ಎಂದು ಹೇಳಿದರು.
ಆಗ ಶಾಲೆಗಳಿಗೆ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಯಾವಾಗಲೋ ಒಂದುಬಾರಿ ಶಾಲೆಗಳಿಗೆ ಅನಿರೀಕ್ಷಿತ ಭೇಡಿ ನೀಡುತ್ತಿದ್ದರು ಹಾಗೂ ಶಿಕ್ಷಕ ಮತ್ತು ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಈಗ ಆಗಿಲ್ಲ, ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ ವಿತರಣೆ ಸೇರಿದಂತೆ ಎಲ್ಲ ಲೆಕ್ಕವನ್ನು ಮಧ್ಯಾಹ್ನ 12 ಗಂಟೆಗೆ ನೀಡಬೇಕು. ಈ ಲೆಕ್ಕಮಾಡುವ ಒತ್ತಡದಲ್ಲಿ ಪಾಠ ಮಾಡಲು ಹೇಗ ಸಾಧ್ಯ?. ಜೊತೆಗೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಲ್ಲಿ ಎರಡು-ಮೂರು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಹಾಗಾಗಿ ಎಸ್.ಎಸ್.ಎಲ್.ಸಿ.ಫಲಿತಾಂಶ ಕಡಿಮೆಯಾಗುತ್ತದೆ” ಎಂದು ಹೇಳಿದರು.
ಮೊದಲು ಉತ್ತೀರ್ಣರಾಗಲು 35 ಅಂಕ ಬೇಕಾಗಿತ್ತು. ಈಗ 33ಕ್ಕೆ ಇಳಿಸಲಾಗಿದೆ. 20 ಇಂಟರನಲ್ ಅಂಕ ಕೊಡತಿರಿ, 13 ಅಂಕ ತಗೊಂಡ ವಿದ್ಯಾರ್ಥಿ ಮುಂದೆ ಏನು ಮಾಡಲು ಸಾಧ್ಯ. ಹಾಗಾಗಿ ಶಿಕ್ಷಕರು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದರು.
“ಸರ್ಕಾರಿ ಶಾಲೆಗಳ ಹಾಗೂ ಶಿಕ್ಷಕರ ಸೌಲಭ್ಯ ಅನುದಾನಿತ ಶಾಲೆಗಳಲ್ಲಿ ಸಿಗುವುದಿಲ್ಲ. ಶಿಕ್ಷಕರ ನೇಮಕಾತಿ ಕುರಿತು ಈಗಾಗಲೇ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ನಾನು ಸಚಿವನಾಗಿದ್ದಾಗ 48,313 ಸರ್ಕಾರಿ ಶಿಕ್ಷಕರ ಹಾಗೂ ಅನುದಾನಿತ ಶಾಲೆಗಳ 7.200 ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗಿತ್ತು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕಚೇರಿ ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಮಾತನಾಡಿ, “ಸೇತುಬಂದ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗಿದೆ. 29 ಅಂಶಗಳ ಕಾರ್ಯಕ್ರಮದ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ. ಪಾಲಕರಿಗೆ ಸಭೆ ಮಾಡಲಾಗುತ್ತಿದೆ. ಓದಿನಲ್ಲಿ ಮುಂದೆ ಬರುವ ವಿದ್ಯಾರ್ಥಿಗಳಿಗೆ ಆತ್ಮಸ್ಥೆರ್ಯ ತುಂಬುವ ಕೆಲಸವನ್ನು ವಿಶೇಷ ಆಸಕ್ತಿಯಿಂದ ಮಾಡಲಾಗುತ್ತಿದೆ” ಎಂದರು.
ಇದನ್ನು ಒದಿದ್ದೀರಾ? ಬೀದರ್ | ಫೆ.3ಕ್ಕೆ ಎಸ್ಐಆರ್ ವಿರೋಧಿ ಸಮಾವೇಶ : ಕರಪತ್ರ ಬಿಡುಗಡೆ
“ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಂಟರನಲ್ 20 ಅಂಕ ಹಾಗೂ ಬ್ಲೂಪ್ರಿಂಟ್ 80 ಅಂಕ ಎಂದು ಮಾರ್ಗಸೂಚಿ ಇದೆ. ಹಾಗಾಗಿ ಪ್ರತಿ ವಿದ್ಯಾರ್ಥಿ ಶೇ.40 ಅಂಕ ಪಡೆಯುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಎಲ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಕಾರ್ಯನಿರ್ವಹಿಸಲಾಗುವುದು” ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಮಾತನಾಡಿ, “ಸರ್ಕಾರಿ, ಅನುದಾನಿತ, ಖಾಸಗಿ ಸೇರಿ 471 ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು ಸೇರಿದಂತೆ 23.358 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.69.2 ರಷ್ಟಾಗಿತ್ತು ಹಾಗೂ ರಾಜ್ಯದಲ್ಲಿ 13ನೇ ಸ್ಥಾನದಲ್ಲಿತ್ತು. ಈ ಭಾರಿ ಶೇ.95 ಕ್ಕೂ ಅಧಿಕ ಫಲಿತಾಂಶ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ವಿಶೇಷ ಚಟುವಟಿಕೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಶ್ರಮವಹಿಸಲಾಗುತ್ತಿದೆ. ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಕ್ಕಳೊಂದಿಗೆ ನಿರಂತರ ಸಂದರ್ಶನ ಆಯೋಜನೆ ಮಾಡಲಾಗುತ್ತಿದೆ. ಶಾಲೆಗೆ ಗೈರಾದ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರು ಹಾಗೂ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವ ಕಾರ್ಯಮಾಡಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಾರವಾಡ ಅಪರ ಆಯುಕ್ತರ ಕಚೇರಿಯ ಗಿರೀಶ ಪದಕಿ, ಡಯಟ್ ಪ್ರಾಂಶುಪಾಲ ಝಡ್ ಎಂ.ಖಾಜಿ. ನಿರಂಜನಮೂರ್ತಿ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಎಂ.ಆರ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್.ಪಾಟೀಲ, ಕೋಟಿ, ಎಂ.ಎಫ್.ಬಾರ್ಕಿ, ಎನ್.ಶ್ರೀಧರ. ಆರ್.ವಿ.ಚಿನ್ನಿಕಟ್ಟಿ, ಶ್ಯಾಮಸುಂದರ ಅಡಿಗ. ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಾಂತಗಿರಿ. ಕೆಂಚನಗೌಡ್ರ, ಕಲ್ಮನಿ, ಬೇವಿನಮರದ ಇತರರು ಉಪಸ್ಥಿತರಿದ್ದರು.





